Last Updated:
ಆರ್ಸಿಬಿ ತಂಡದ ಈ ಹಿಂದಿನ ಮಾಲಿಕ ವಿಜಯ ಮಲ್ಯ ವಿರಾಟ್ ಕೊಹ್ಲಿ ಅವರನ್ನು 2008ರಲ್ಲಿ ತಂಡಕ್ಕೆ ಸೇರಿಸಿಕೊಂಡ ಬಗ್ಗೆ ನೀಡಿರುವ ಹೇಳಿಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಬರೋಬ್ಬರಿ 17 ವರ್ಷಗಳ ಬಳಿಕ ತನ್ನ 18ನೇ ಐಪಿಎಲ್ (IPL) ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) ತನ್ನ ಚೊಚ್ಚಲ ಟ್ರೋಫಿ ಗೆದ್ದು ಸಂಭ್ರಮಿಸಿದೆ. ಈ ಬಗ್ಗೆ ಕಪ್ ಗೆದ್ದಾಗಿನಿಂದ ಹಿಡಿದು ಇಲ್ಲಿಯವರೆಗೂ ಅನೇಕ ಮಾಜಿ ಆಟಗಾರರು, ಕ್ರಿಕೆಟ್ ಪಂಡಿತರು ವಿವಿಧ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈ ನಡುವೆ ತಂಡದ ಈ ಮಾಜಿ ಮಾಲೀಕ ವಿಜಯ ಮಲ್ಯ (Vijay Mallya) ವಿರಾಟ್ ಕೊಹ್ಲಿ (VIrat Kohli) ಅವರನ್ನು 2008ರಲ್ಲಿ ತಂಡಕ್ಕೆ ಸೇರಿಸಿಕೊಂಡ ಬಗ್ಗೆ ನೀಡಿರುವ ಹೇಳಿಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಅಂದಹಾಗೆ U-19 ಆಟಗಾರರು 2008ರಲ್ಲಿ ಹರಾಜಿನ ಭಾಗವಾಗಿರಲಿಲ್ಲ. ಹಾಗಾಗಿ ಅಂಡರ್ 19 ಆಟಗಾರರನ್ನು ಪೂರ್ವ-ಋತುವಿನ ಡ್ರಾಫ್ಟ್ ಮೂಲಕ ಆಯ್ಕೆ ಮಾಡಲಾಯಿತು. ಜೂನಿಯರ್ ವಿಶ್ವಕಪ್ನಲ್ಲಿ ಯುವ ಆಟಗಾರ ಆಡಿದ್ದನ್ನು ಗಮನಿಸಿ ಕೊಹ್ಲಿಯನ್ನು ನಾನೇ ಆಯ್ಕೆ ಮಾಡಿಕೊಂಡೆ ಎಂದು ಎಂದು RCB ಮಾಜಿ ಮಾಲೀಕ ವಿಜಯ್ ಮಲ್ಯ ಹೇಳಿಕೊಂಡಿದ್ದಾರೆ.
“ನಾನು ವಿರಾಟ್ ಕೊಹ್ಲಿಯವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲು ಆರಿಸಿಕೊಂಡೆ” ಎಂದು ಮಲ್ಯ ರಾಜ್ ಶಮಾನಿ ಅವರ ಯೂಟ್ಯೂಬ್ ಚಾನೆಲ್ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ. “ಅಂಡರ್-19ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಅನೇಕ ಯುವ ಕ್ರಿಕೆಟಿಗರಿದ್ದರು ಮತ್ತು ಅವರನ್ನು ಲಾಟರಿ ಮೂಲಕ ಖರೀದಿ ಮಾಡಲಾಯಿತು. ನಾನು ಹಿಂದೆ ಮುಂದೆ ಯೋಚಿಸದೆ ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡಿಕೊಂಡೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಆಯ್ಕೆ ಪ್ರಕ್ರಿಯೆಗೆ ಸ್ವಲ್ಪ ಮೊದಲು, ವಿರಾಟ್ ಕೊಹ್ಲಿ ಅವರು U-19 ವಿಶ್ವಕಪ್ ಆಡುತ್ತಿದ್ದರು. ನಾನು ಅವರ ಆಟದಿಂದ ತುಂಬಾ ಪ್ರಭಾವಿತನಾಗಿದ್ದೆ. ಹಾಗಾಗಿ ನಾನು ವಿರಾಟ್ರನ್ನು ಆಯ್ಕೆ ಮಾಡಿಕೊಂಡೆ. ಸದ್ಯ ಕೊಹ್ಲಿ 18 ವರ್ಷಗಳ ಬಳಿಕವೂ ಆರ್ಸಿಬಿ ತಂಡದ ಭಾಗವಾಗಿಯೇ ಉಳಿದುಕೊಂಡಿದ್ದಾರೆ. 2008ರಲ್ಲಿ ಅವರು ಚಿಕ್ಕ ಹುಡುಗರಾಗಿದ್ದರು. ಈಗ ಅವರು ತಮ್ಮ ಸಾಮರ್ಥ್ಯ, ಅದ್ಭುತ ಪ್ರತಿಭೆಯಿಂದಾಗಿ ಶ್ರೇಷ್ಠ ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ” ಎಂದು ಅವರು ಹೇಳಿದರು. ಆದ್ರೆ, ಆ ಸಂದರ್ಭದಲ್ಲಿ ಅವರು ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗುತ್ತಾರೆಂದು ಆರ್ಸಿಬಿಗೆ ತಿಳಿದಿರಲಿಲ್ಲ ಎಂದರು.
ಉದ್ಘಾಟನಾ ಸೀಸನ್ನಿಂದಲೂ ವಿರಾಟ್ ಕೊಹ್ಲಿ ಆರ್ಸಿಬಿ ಜೊತೆಗಿದ್ದಾರೆ. ಇತರ ಫ್ರಾಂಚೈಸಿಗಳು ಅವರನ್ನು ಖರೀದಿಸಲು ಸಂಪರ್ಕಿಸಿದರೂ ಕೂಡ ಅವರು ಯಾವುದೇ ಫ್ರಾಂಚೈಸಿ ಜೊತೆ ಹೋಗಿಲ್ಲ. ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ನಾಯಕರಾಗಿಯೂ 2016 ರಲ್ಲಿ ತಂಡವನ್ನು ಫೈನಲ್ಗೆ ಕರೆದೊಯ್ದಿದ್ದರು. ಆ ಸೀಸನ್ನಲ್ಲಿ ಅವರು ದಾಖಲೆಯ 973 ರನ್ಗಳನ್ನು ಗಳಿಸಿದ್ದರು. ಸದ್ಯ ಐಪಿಎಲ್ ಸೀಸನ್ ಒಂದರಲ್ಲಿ ಆಟಗಾರನೊಬ್ಬ ಸಿಡಿಸಿದ ಅತೀ ಹೆಚ್ಚು ರನ್ ಇದಾಗಿದೆ. ಆದ್ರೆ ಅವರ ಅದ್ಭುತ ಪ್ರದರ್ಶನದ ಹೊರತಾಗಿಯೂ ತಂಡ ಫೈನಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋತು ರನ್ನರ್ಅಪ್ಗೆ ತೃಪ್ತಿಪಟ್ಟುಕೊಂಡಿತು.
ಸದ್ಯ ಆರ್ಸಿಬಿ ತಮ್ಮ 18ನೇ ಸೀಸನ್ನಲ್ಲಿ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಟ್ರೋಫಿಗೆ ಮುತ್ತಿಡುವ ಮೂಲಕ, ಆರ್ಸಿಬಿಗೆ ಐಪಿಎಲ್ ಟ್ರೋಫಿ ಗೆಲ್ಲುವ ಕೊಹ್ಲಿಯ ಕನಸನ್ನು ಅಂತಿಮವಾಗಿ ನನಸು ಮಾಡಿಕೊಂಡಿದ್ದಾರೆ.
June 06, 2025 4:57 PM IST