Last Updated:
ಮಂಗಳೂರು: ಜೀತ್ ಮಿಲನ್ ರೋಚ್, ವಿಶ್ವ ಪರಿಸರ ದಿನದ ಅಂಗವಾಗಿ 4,500 ರತ್ನಗಂಧಿ ಗಿಡಗಳನ್ನು ರಸ್ತೆ ಡಿವೈಡರ್ಗಳಲ್ಲಿ ನೆಡುವ ಯೋಜನೆ ಕೈಗೊಂಡಿದ್ದಾರೆ.
ಮಂಗಳೂರು: ಜೂನ್ 5ರಂದು ವಿಶ್ವ ಪರಿಸರ ದಿನವನ್ನಾಗಿ (World Environment Day) ಆಚರಿಸಲಾಗುತ್ತದೆ. ಪರಿಸರ ದಿನದ ಅಂಗವಾಗಿ ಮಂಗಳೂರಿನ (Mangaluru) ಪರಿಸರ ಪ್ರೇಮಿ ಜೀತ್ ಮಿಲನ್ ರೋಚ್, ರಸ್ತೆ ಡಿವೈಡರ್ಗಳಲ್ಲಿ ಬರೋಬ್ಬರಿ 4,500 ರತ್ನಗಂಧಿ ಗಿಡಗಳನ್ನು (Peacock Flower) ನೆಡುವ ವಿಶಿಷ್ಟ ಯೋಜನೆಯೊಂದನ್ನು ಕೈಗೊಂಡಿದ್ದಾರೆ.
ಹೌದು, ಜೀತ್ ಪರಿಸರ ಸಂರಕ್ಷಣೆಯೊಂದಿಗೆ ನಗರದ ಸೌಂದರ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದಾರೆ. ಆದ್ದರಿಂದ ಡಿವೈಡರ್ಗಳಲ್ಲಿ ರತ್ನಗಂಧಿ ಗಿಡಗಳನ್ನು ನೆಡುತ್ತಿದ್ದಾರೆ. ಸದ್ಯ ನಗರದ ಕಂಕನಾಡಿಯಿಂದ ನಂದಿಗುಡ್ಡದವರೆಗೆ, ಮಾರ್ನಮಿಕಟ್ಟೆಯಿಂದ ಮಾರ್ಗನ್ ಗೇಟ್ವರೆಗೆ ಮತ್ತು ಮಾರ್ಗನ್ ಗೇಟ್ನಿಂದ ಮಂಗಳಾದೇವಿ ರಸ್ತೆಯವರೆಗೆ ಗಿಡಗಳನ್ನು ನೆಡುತ್ತಿದ್ದಾರೆ.
ಕಳೆದ 4 ದಿನಗಳಿಂದ ರಸ್ತೆ ಡಿವೈಡರ್ಗಳಲ್ಲಿ ಖಾಲಿ ಜಾಗಗಳನ್ನು ಹಸಿರಿನಿಂದ ಕಂಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ಇದಕ್ಕಾಗಿ ರಾಜಮಂಡ್ರಿಯಿಂದ 4,500 ರತ್ನಗಂಧಿ ಗಿಡಗಳನ್ನು ತರಿಸಲಾಗಿದೆ. 3,000 ಗಿಡಗಳಿಗೆ ವನಚಾರಿಟೇಬಲ್ ಟ್ರಸ್ಟ್ ಮತ್ತು 1,500 ಗಿಡಗಳಿಗೆ ಸಿಎಎಫ್ಎಲ್ ಧನಸಹಾಯ ಮಾಡಿದೆ. ಎರಡು ವರ್ಷಗಳ ಕಾಲ ಜೀತ್ ಅವರೇ ಗಿಡಗಳ ನಿರ್ವಹಣೆ ಮಾಡಲಿದ್ದಾರೆ. ಬಳಿಕ ಈ ಗಿಡಗಳಿಗೆ ನಿರ್ವಹಣೆಯ ಅಗತ್ಯವಿಲ್ಲ. Tithonia diversifolia ವೈಜ್ಞಾನಿಕ ಹೆಸರುಳ್ಳ ರತ್ನಗಂಧಿ ಒಂದು ಪರಿಸರ ಸ್ನೇಹಿ ಸಸ್ಯ.
ರತ್ನಗಂಧಿ ಗಿಡವು ಮಣ್ಣಿನಲ್ಲಿ ನೈಟ್ರೋಜನ್ ಫಿಕ್ಷರ್ ಆಗಿದ್ದು, ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಇದರ ಆಕರ್ಷಕ ಹೂವುಗಳು ಹಕ್ಕಿಗಳು, ಚಿಟ್ಟೆಗಳು, ಮತ್ತು ಜೇನುನೊಣಗಳನ್ನು ಆಕರ್ಷಿಸುತ್ತವೆ. ಆರು ವಿಭಿನ್ನ ಬಣ್ಣಗಳಲ್ಲಿ ಹೂವು ಬಿಡುವ ಈ ಗಿಡಗಳು ರಸ್ತೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ.
Dakshina Kannada,Karnataka
June 06, 2025 6:44 PM IST