ಚಿನ್ನಸ್ವಾಮಿ ಮೈದಾನದ ಬಳಿ ನಡೆದ ನೂಕು ನುಗ್ಗಲು ಮತ್ತು ಕಾಲ್ತುಳಿದಿಂದ 11 ಜನ ವಿರಾಟ್ ಕೊಹ್ಲಿ ಅಭಿಮಾನಿಗಳು ದುರ್ಮರಣ ಹೊಂದಲು ಆರ್ಸಿಬಿ ತಂಡದ ಆಟಗಾರ ವಿರಾಟ್ ಕೊಹ್ಲಿ ಕಾರಣರಾಗಿದ್ದಾರೆ ಎಂದು ಆರೋಪಿಸಿ ಸಾಮಾಜಿ ಕಾರ್ಯಕರ್ತ ಹೆಚ್ ಎಂ ವೆಂಕಟೇಶ್ ಎಂಬುವವರು ದೂರು ದಾಖಲಿಸಿದ್ದಾರೆ.
ದೂರಿನ ಪ್ರತಿಯಲ್ಲೇನಿದೆ?
ದೇಶದ ವಿವಿಧ ರಾಜ್ಯಗಳ ಐಪಿಎಲ್ ತಂಡವು ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಿದ್ದು ಇದರಲ್ಲಿ ಬೆಂಗಳೂರಿನ ಆರ್ಸಿಬಿ ತಂಡವು ವಿಜೇತರಾದ ಹಿನ್ನೆಲೆಯಲ್ಲಿ ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿಸ್ಟೇಡಿಯಂನಲ್ಲಿ ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ 11 ಜನ ಕಾಲ್ಕುಳಿತದಿಂದ ಮರಣ ಹೊಂದಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ತಮ್ಮ ಠಾಣೆಯಲ್ಲಿ ಮತ್ತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಹಲವು ವ್ಯಕ್ತಿಗಳ ವಿರುದ್ಧ ದೂರುಗಳು ದಾಖಲಾಗಿವೆ. ಐಪಿಎಲ್ ಎಂಬುದು ಒಂದು ಕ್ರೀಡೆಯಲ್ಲ. ಅದು ಕ್ರಿಕೆಟ್ ಆಟದ ಕಲುಷಿತಗೊಂಡ ಜೂಜಾಟದ ಒಂದು ರೂಪ ಮತ್ತು ಮಾದರಿ. ಅದರಲ್ಲಿ ಕೆಲವು ಖಾಸಗಿ ಸಂಸ್ಥೆಗಳು ಮನುಷ್ಯರನ್ನು (ಆಟಗಾರರನ್ನು) ವಸ್ತು ರೂಪದ ಹರಾಜಿನಂತೆ ಕೊಂಡು, ಅವರನ್ನು ಖಾಸಗಿ ನೌಕರರಂತೆ ನಡೆಸಿಕೊಳ್ಳುತ್ತಾ, ಜನರಿಗೆ ಮನರಂಜನೆ ನೀಡಿ ಹಣ ಮಾಡುವ ಒಂದು ದಂಧೆಯಾಗಿದೆ.
ಅದಲ್ಲಿ ಚಿಯರ್ ಗರ್ಲ್ಸ್ ಎಂಬ ಕ್ಯಾಬರೆ ರೀತಿಯ ನೃತ್ಯವೂ ಇರುತ್ತದೆ. ಜಗತ್ತಿನ ಯಾವ ಕ್ರೀಡೆಯಲ್ಲಿಯೂ ಈ ರೀತಿಯ ಮನರಂಜನೆ ಇರುವುದಿಲ್ಲ. ಇಂತಹ ಜೂಜಾಟದಲ್ಲಿ ಭಾಗಿಯಾಗಿ ಜನರನ್ನು ಪ್ರಚೋದಿಸಿ ಒಂದು ನಿರ್ದಿಷ್ಟ ಜಾಗದಲ್ಲಿ ಎಲ್ಲರೂ ಗುಂಪಾಗಿ ಸೇರಿ ಈ ದುರ್ಘಟನೆಗೆ ಕಾರಣರಾದವರಲ್ಲಿ ಬೆಂಗಳೂರು ಆರ್ಸಿಬಿ ತಂಡದ ವಿರಾಟ್ ಕೊಹ್ಲಿ ಅವರು ಅತ್ಯಂತ ಪ್ರಮುಖರು. ಆದ್ದರಿಂದ ತಾವು ದಯವಿಟ್ಟು ಈ ದುರ್ಘಟನೆ ಪ್ರಕರಣದ ಎಫ್ಐಆರ್ ನಲ್ಲಿ ವಿರಾಟ್ ಕೊಹ್ಲಿ ಮತ್ತು ತಂಡದ ಸಹ ಸದಸ್ಯರನ್ನು ಆರೋಪಿಗಳನ್ನಾಗಿ ಮಾಡಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ ಎಂದು ದೂರು ನೀಡಿದ್ದಾರೆ.
ಬೆಂಗಳೂರಿನ ಮತ್ತು ರಾಜ್ಯದ ವಿವಿಧ ಕಡೆಗಳಿಂದ ಬಂದವರಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಗಳೇ ಹೆಚ್ಚಾಗಿದ್ದು ವಿರಾಟ್ ಕೊಹ್ಲಿಯನ್ನು ನೋಡಿ ಕಣ್ಣುಂಬಿಸಿಕೊಳ್ಳಬೇಕೆಂಬ ಹುಚ್ಚು ಹಂಬಲದಿಂದ ಬಂದವರು ಕಾಲ್ಕುಳಿತದಲ್ಲಿ ಮರಣ ಹೊಂದಿದ್ದಾರೆ. ಇವರನ್ನು ನಿಯಂತ್ರಿಸುವಲ್ಲಿ ಪೊಲೀಸರು ತಮ್ಮ ಕರ್ತವ್ಯ ಲೋಪವನ್ನು ಮಾಡಿರುತ್ತಾರೆ ಎಂದು ದೂರಿನಲ್ಲಿಉಲ್ಲೇಖಿಸಿದ್ದಾರೆ.
ಜೂನ್ 3ರಂದು ಅಹಮದಾಬಾದಿನಲ್ಲಿ ನಡೆದ ಪಂದ್ಯದಲ್ಲಿ ಗೆದ್ದ ವಿಜಯೋತ್ಸವ ರಾತ್ರಿಯಿಡೀ ಬೆಂಗಳೂರಿನಲ್ಲಿ ನಡೆದಿದ್ದು, ತಮ್ಮ ಗಮನದಲ್ಲಿದೆ. ಇಂತಹ ಹುಚ್ಚು ಅಭಿಮಾನದ ಉದ್ವೇಗದ ವಾತಾವರಣದಲ್ಲಿ ತಕ್ಷಣ ಇಷ್ಟೊಂದು ಸಂಖ್ಯೆಯ ಅಭಿಮಾನಿಗಳನ್ನು ಕರೆದು ವಿಜಯೋತ್ಸವ ಆಚರಿಸುವ ಅವಶ್ಯಕತೆ ಇರಲಿಲ್ಲ.
ಕ್ರಿಕೆಟಿಗ ವಿರಾಟ್ ಕೊಹ್ಲಿ ತನ್ನ ಸ್ವಾರ್ಥಕ್ಕಾಗಿ ವಿದೇಶ ಪ್ರವಾಸದ ಸಲುವಾಗಿ ಪಂದ್ಯಾವಳಿಯನ್ನು ಗೆದ್ದ ಮರು ದಿನವೇ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸುವಂತೆ ಕ್ರಿಕೆಟ್ ಮಂಡಳಿ, ಆರ್ ಸಿ ಬಿ ಮ್ಯಾನೇಜೈಂಟ್, ಇವೆಂಟ್ ಮ್ಯಾನೇಜೈಂಟ್ ಮೇಲೆ ಒತ್ತಡ ಹೇರಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಾಲ್ಕುಳಿತದಿಂದ ದುರ್ಮರಣ ಹೊಂದಿದ ತಕ್ಷಣ ಅವರು ಬೆಂಗಳೂರನ್ನು ಬಿಟ್ಟು ಲಂಡನ್ ಗೆ ಪಪ್ರಯಾಣ ಬೆಳೆಸಿರುವುದು ಇದಕ್ಕೆ ಪೂರಕವಾದ ಸಾಕ್ಷಿಯಾಗಿರುತ್ತದೆ ಎಂದು ಉಲ್ಲೇಖಿಸಿದ್ದಾರೆ.
ವಿರಾಟ್ ಕೊಹ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಪಾರ ಬಂಧುಗಳಿಗೆ ಈ ಸಮಾರಂಭದಲ್ಲಿ ಭಾಗವಹಿಸಲು ಪ್ರಚೋದನೆ ನೀಡಿದ್ದರು ಅವರು ಯಾವುದೇ ಸಾರ್ವಜನಿಕ ಸುರಕ್ಷತೆ ಬಗ್ಗೆ ಎಚ್ಚರಿಕೆ ನೀಡಿರಲಿಲ್ಲ ಎಂದು ಉಲ್ಲೇಖಿಸಿ ವಿರಾಟ್ ಕೊಹ್ಲಿ ವಿರುದ್ಧ ದೂರು ನೀಡಿದ್ದಾರೆ.
ವಿರಾಟ್ ಕೊಹ್ಲಿ ಪ್ರಖ್ಯಾತಿಯ ಉತ್ತುಂಗದಲ್ಲಿದ್ದ ಮಾತ್ರಕ್ಕೆ ಅವರು ಏನು ಮಾಡಿದರು ನಡೆಯುತ್ತದೆ ಎಂಬ ಭಾವನೆಯಿಂದ ತನ್ನನ್ನು ನೋಡಲು ಬಂದ ಅಭಿಮಾನಿಗಳ ದುರ್ಮರಣ ಹೊಂದಿದ್ದ ಕುಟುಂಬಗಳ ಪೋಷಕರನ್ನು ಭೇಟಿಯಾಗಿ ಸಾಂತ್ವಾನ ಹೇಳುವುದನ್ನು ಬಿಟ್ಟು ತಕ್ಷಣ ಬೆಂಗಳೂರನ್ನು ತೊರೆದಿರುವುದು ಹಲವು ಊಹೆಗಳಿಗೂ ಕಾರಣವಾಗುತ್ತಿದೆ.
ಹೈದರಾಬಾದ್ ನಲ್ಲಿ ಈ ಹಿಂದೆ ಸಿನಿಮಾ ನೋಡಲು ಬಂದು ನೂಕುನುಗ್ಗಲಿಂದ ಕಾಲ್ಕುಳಿತದಲ್ಲಿ ದುರ್ಮರಣ ಹೊಂದಿದ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ತಕ್ಷಣ ಸಿನಿಮಾ ನಟ ಅಲ್ಲು ಅರ್ಜುನ್ ನನ್ನು ಬಂಧಿಸಿದ ಘಟನೆ ನಡೆದಿದೆ. ಈ ವಿಷಯವು ತಮ್ಮ ಗಮನದಲ್ಲಿದೆ ಎಂದು ಭಾವಿಸುತ್ತೇನೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ಕುಳಿತದ ದುರ್ಘಟನೆಗೆ ಪ್ರಮುಖ ಕೇಂದ್ರ ಬಿಂದು ವಿರಾಟ್ ಕೊಹ್ಲಿ ಆಗಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಆದುದರಿಂದ ತಾವು ವಿರಾಟ್ ಕೊಹ್ಲಿಯ ಹುಚ್ಚು ಅಭಿಮಾನಿಗಳು 11 ಜನ ಯುವಕ, ಯುವತಿಯರು ದುರ್ಮಣಕ್ಕೆ ಕಾರಣಕರ್ತರಾದ ವಿರಾಟ್ ಕೊಹ್ಲಿಯ ವಿರುದ್ಧ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿ ತನಿಖೆ ನಡೆಸಿ ಎಂದು ಸುಧೀರ್ಘ ದೂರು ನೀಡಿದ್ದಾರೆ.
(ವರದಿ: ಕಾರ್ತಿಕ್, ನ್ಯೂಸ್18 ಕನ್ನಡ, ಬೆಂಗಳೂರು)
June 06, 2025 6:50 PM IST