Last Updated:
ಡಯಾಲಿಸಿಸ್ಗಾಗಿ ವಾರ್ಷಿಕ ಲಕ್ಷಾಂತರ ಹಣ ಖರ್ಚು ಮಾಡೋದು ಬಡವರಿಗೆ ದೊಡ್ಡ ಹೊರೆಯಾಗಿತ್ತು. ಉಚಿತ ಡಯಾಲಿಸಿಸ್ ಸೇವೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವಾರ್ಷಿಕ ಒಂದೂವರೆ ಕೋಟಿ ವೆಚ್ಚ ತಗುಲುತ್ತದೆ.
ದಕ್ಷಿಣ ಕನ್ನಡ: ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಬಡ ರೋಗಿಗಳಿಗಾಗಿ, ಹೊಸ ವರ್ಷದ ವಿಶೇಷ ಉಡುಗೊರೆ ನೀಡಲಾಗಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ(SDM Multi Specialty Hospital) ದಿನದ 24 ಗಂಟೆಯೂ ಉಚಿತ ಡಯಾಲಿಸಿಸ್ ಸೇವೆ ನೀಡಲಾಗಿದ್ದು, ಇದು ಬಡವರ ಪಾಲಿಗೆ ಸಂಜೀವಿನಿಯಾಗಲಿದೆ. ಕಿಡ್ನಿಗೆ ಸಂಬಂಧಿಸಿದ ಕೆಲ ರೋಗಿಗಳಿಗೆ ಡಯಾಲಿಸಿಸ್(Dialysis) ಮಾಡೋದು ಅನಿವಾರ್ಯ. ವಾರಕ್ಕೆ 3 ರಿಂದ ನಾಲ್ಕು ಬಾರಿ ಡಯಾಲಿಸಿಸ್ ಅಗತ್ಯ. ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಸೇವೆ ಏನಿದ್ರೂ ಅಷ್ಟಕ್ಕಷ್ಟೆ. ರೋಗಿಯ ಪ್ರಾಣ ಕಾಪಾಡುವ ದೃಷ್ಟಿಯಿಂದ ಖಾಸಗಿ ಆಸ್ಪತ್ರೆಯ ಅವಲಂಬನೆ ಅನಿವಾರ್ಯ. ಒಂದು ಬಾರಿ ಡಯಾಲಿಸಿಸ್ಗೆ 1500 ಸಾವಿರ ನೀಡೋದು ಬಡರೋಗಿಗಳಿಗೆ ತೀರಾ ಸಮಸ್ಯೆ ಆಗುತ್ತಿತ್ತು. ಬಡ ರೋಗಿಗಳ ಕಷ್ಟ, ಅಸಹಾಯಕತೆ ಕಂಡು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು(Dr. Veerendra Heggade) ಹೊಸ ವರ್ಷದ ಮೊದಲ ದಿನದಿಂದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆ ಆರಂಭಿಸಿದ್ದಾರೆ.
SDM ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆ!
ಆತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ಉಚಿತ ಡಯಾಲಿಸಿಸ್ ಸಿಗಲಿದೆ. 11 ಡಯಾಲಿಸಿಸ್ ಯಂತ್ರವಿದ್ದು, ಅದರಲ್ಲಿ 9 ಸಾಮಾನ್ಯ ರೋಗಿಗಳಿಗೆ 2 ಸಾಂಕ್ರಾಮಿಕ ರೋಗಿಗಳಿಗೆ ಮೀಸಲಿರಿಸಲಾಗಿದೆ. ಪ್ರತಿ ಹಾಸಿಗೆಗೂ ವೈರ್ ಲೆಸ್ ಹೆಡ್ ಪೋನ್ ಹಾಗೂ ಟಿವಿ ವೀಕ್ಷಣೆಗೆ ವ್ಯವಸ್ಥೆ, ಪ್ರತ್ಯೇಕ ಸ್ಥಾನದ ಕೊಠಡಿ ಹಾಗೂ ವಸ್ತ್ರ ಬದಲಾವಣೆ ಕೊಠಡಿ ಇಲ್ಲಿದೆ. ಪ್ರತಿನಿತ್ಯ 30 ಕ್ಕೂ ಹೆಚ್ಚು, ವಾರ್ಷಿಕ 10 ಸಾವಿರಕ್ಕೂ ಅಧಿಕ ಉಚಿತ ಡಯಾಲಿಸಿಸ್ ಸೇವೆಯ ಗುರಿ ಹೊಂದಿದ್ದಾರೆ.
ಇದನ್ನೂ ಓದಿ: Bengaluru Lady: ಬೆಂಗಳೂರಿನ ಈ ಮಹಿಳೆಗೆ ಪೊಲೀಸ್ ಠಾಣೆಯೇ ದೇವಾಲಯ- ಪ್ರತಿನಿತ್ಯ ಪ್ರದಕ್ಷಿಣೆ ಹಾಕ್ತಾರೆ ಬೇಗಮ್ಮ!
ಉಚಿತ ಡಯಾಲಿಸಿಸ್ ಘಟಕದಲ್ಲಿ 2 ಮೂತ್ರಪಿಂಡ ವೈದ್ಯರು ಹಾಗೂ ಫಿಜಿಷಿಯನ್ ವೈದ್ಯರು, 2 ತರಬೇತಿ ಹೊಂದಿದ ದಾದಿಯರು ಹಾಗೂ 9 ಅನುಭವಿ ಟೆಕ್ನಿಷಿಯನ್ ಸೇವೆ ನೀಡಲಿದ್ದಾರೆ. ಕಿಡ್ನಿಗೆ ಸಂಬಂಧಿಸಿದ ರೋಗಿಗಳಿಗೆ ಒಂದು ಸಲಕ್ಕೆ 1500 ಸಾವಿರ ನೀಡಿ ವಾರಕ್ಕೆ 3 ರಿಂದ 4 ಬಾರಿ ಡಯಾಲಿಸಿಸ್ ಮಾಡುವ ಅಗತ್ಯ ಇದೆ. ಡಯಾಲಿಸಿಸ್ಗಾಗಿ ವಾರ್ಷಿಕ ಲಕ್ಷಾಂತರ ಹಣ ಖರ್ಚು ಮಾಡೋದು ಬಡವರಿಗೆ ದೊಡ್ಡ ಹೊರೆಯಾಗಿತ್ತು. ಉಚಿತ ಡಯಾಲಿಸಿಸ್ ಸೇವೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವಾರ್ಷಿಕ ಒಂದೂವರೆ ಕೋಟಿ ವೆಚ್ಚ ತಗುಲುತ್ತದೆ.
ಒಟ್ಟಿನಲ್ಲಿ ಬಡ ರೋಗಿಗಳ ಕಷ್ಟ ಅರಿತು ಉಚಿತ ಡಯಾಲಿಸಿಸ್ ಸೇವೆ ನೀಡಿದ್ದು ಶ್ಲಾಘನೀಯ. ಇದು ಸಾವಿರಾರು ಬಡರೋಗಿಗಳಿಗೆ ವರದಾನ ಆಗಲಿದೆ.
Dakshina Kannada,Karnataka
January 05, 2025 12:23 PM IST