Last Updated:
ಬಾನಂಗಳದಲ್ಲಿ ಕುಡ್ಲದ ಸೌಂದರ್ಯ ವೀಕ್ಷಿಸಲು ಬಯಸುವವರಿಗೆ ಡಿಸೆಂಬರ್ 21ರಿಂದ 31ರವರೆಗೆ ಹೆಲಿಕಾಪ್ಟರ್ ಪ್ರಯಾಣಕ್ಕೆ ಅವಕಾಶವಿದೆ. 6-7 ನಿಮಿಷಗಳ ಕಾಲ ಹೆಲಿಕಾಪ್ಟರ್ನಲ್ಲಿ ರೌಂಡ್ ಹೊಡೆದು ಮಂಗಳೂರು ನಗರ, ನೇತ್ರಾವತಿ ನದಿ ತೀರ, ಪಣಂಬೂರು ಬೀಚ್ ಸೌಂದರ್ಯವನ್ನು ವೀಕ್ಷಿಸಬಹುದು.
ಕಡಲನಗರಿ ಮಂಗಳೂರು ಕರಾವಳಿ ಉತ್ಸವಕ್ಕೆ(Karavali Utsav) ಸಜ್ಜಾಗುತ್ತಿದೆ. ಇದರ ಅಂಗವಾಗಿ ಜಿಲ್ಲಾಡಳಿತ ಹೆಲಿಟೂರಿಸಂ(Heli Tourism) ಆಯೋಜಿಸಿದ್ದು, ಈ ಮೂಲಕ ಕುಡ್ಲದ ಸೌಂದರ್ಯವನ್ನು ಬಾನಂಗಳದಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ನಗರದ ಮೇರಿಹಿಲ್ ಹೆಲಿಪ್ಯಾಡ್ನಲ್ಲಿ(Merihill Helipad) ಹೆಲಿಟೂರಿಸಂಗೆ ಚಾಲನೆ ದೊರಕಿದೆ.
ಹೆಲಿಕಾಪ್ಟರ್ನಲ್ಲಿ ರೌಂಡ್ ಹೊಡೆದ ಜಿಲ್ಲಾಧಿಕಾರಿ
ತುಂಬಿ ಏರ್ ಟ್ಯಾಕ್ಸ್ ಕಂಪೆನಿಯ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಹೆಲಿಟೂರಿಸಂ ಅನ್ನು ಆಯೋಜಿಸಿದೆ. ಸ್ವತಃ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ., ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಎಸ್ಪಿ ಯತೀಶ್ ಅಧಿಕಾರಿಗಳು ದ.ಕ.ಜಿಲ್ಲೆಯ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಮಹಾಲಿಂಗ ನಾಯ್ಕರೊಂದಿಗೆ ಹೆಲಿಕಾಪ್ಟರ್ನಲ್ಲಿ ರೌಂಡ್ ಹೊಡೆದು ನಗರದ ಸೌಂದರ್ಯವನ್ನು ಮೇಲಿನಿಂದ ಕಣ್ತುಂಬಿಕೊಂಡರು.
ಏನೆಲ್ಲಾ ವೀಕ್ಷಿಸಬಹುದು?
ಬಾನಂಗಳದಲ್ಲಿ ಕುಡ್ಲದ ಸೌಂದರ್ಯ ವೀಕ್ಷಿಸಲು ಬಯಸುವವರಿಗೆ ಡಿಸೆಂಬರ್ 21ರಿಂದ 31ರವರೆಗೆ ಹೆಲಿಕಾಪ್ಟರ್ ಪ್ರಯಾಣಕ್ಕೆ ಅವಕಾಶವಿದೆ. 6-7 ನಿಮಿಷಗಳ ಕಾಲ ಹೆಲಿಕಾಪ್ಟರ್ನಲ್ಲಿ ರೌಂಡ್ ಹೊಡೆದು ಮಂಗಳೂರು ನಗರ, ನೇತ್ರಾವತಿ ನದಿ ತೀರ, ಪಣಂಬೂರು ಬೀಚ್ ಸೌಂದರ್ಯವನ್ನು ವೀಕ್ಷಿಸಬಹುದು. ಪ್ರತೀ ರೌಂಡ್ನಲ್ಲಿ ಆರುಮಂದಿಗೆ ಹೆಲಿಕಾಪ್ಟರ್ ಸುತ್ತಾಟಕ್ಕೆ ಅವಕಾಶವಿದೆ. ಇದಕ್ಕೆ 4,500 ರೂ. ಪಾವತಿಸಿದರೆ, ಯಾರು ಬೇಕಾದರೂ ಹೆಲಿಕಾಪ್ಟರ್ ಪ್ರಯಾಣ ಮಾಡಬಹುದು. ಆಸಕ್ತರು ಹೆಲಿ ಟ್ಯಾಕ್ಸಿ ಅಧಿಕೃತ ವೆಬ್ಸೈಟ್ www.helitaxii.comನಲ್ಲಿ ಆನ್ಲೈನ್ ಬುಕ್ಕಿಂಗ್ ಮಾಡಬಹುದು.
ಮತ್ತಷ್ಟು ವಿಸ್ತರಿಸುವ ಚಿಂತನೆ
ಈ ಹೆಲಿಟೂರಿಸಂ ಯಶಸ್ವಿ ಆದಲ್ಲಿ, ಮುಂದಕ್ಕೆ ಇದನ್ನು ಮತ್ತಷ್ಟು ವಿಸ್ತರಿಸುವ ಚಿಂತನೆಯನ್ನು ಜಿಲ್ಲಾಡಳಿತ ಮಾಡಿದೆ. ಈ ಮೂಲಕ ದ.ಕ.ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು ಸೇರಿದಂತೆ ಬೇಲೂರು-ಹಳೆಬೀಡು, ಬೇಕಲ್ ಫೋರ್ಟ್ಗಳಿಗೂ ಹೆಲಿಟೂರಿಸಂ ಅಳವಡಿಸುವ ಉದ್ದೇಶವಿದೆ. ಆದರೆ 6-7ನಿಮಿಷದ ಸಂಚಾರಕ್ಕೆ 4,500ರೂ. ದರ ನಿಗದಿಸಿದ್ದು ಕೊಂಚ ದುಬಾರಿಯೆನಿಸಿದೆ. ದರ ಇಳಿಕೆ ಮಾಡಿದ್ದಲ್ಲಿ ಜನಸಾಮಾನ್ಯರೂ ಇದರ ಸದ್ಬಳಕೆ ಮಾಡಿಕೊಳ್ಳಬಹುದು. ಈ ಮೂಲಕ ಮಂಗಳೂರಿನ ಪ್ರವಾಸಕ್ಕೊಂದು ಹೆಲಿಟೂರಿಸಂನ ಗರಿ ಮೂಡಲಿದೆ.
Dakshina Kannada,Karnataka
December 22, 2024 12:44 PM IST