ಶಿವನ ಅಂಶ ವಯನಾಟ್ ಕುಲವನ್
ವಯನಾಟ್ ಕುಲವನ್, ಕಂಡನಾರ್ ಕೇಳನ್, ಗೋರಚ್ಚನ್ ಹಾಗೂ ವಿಷ್ಣುಮೂರ್ತಿ ದೈವಗಳ ಮಹೋತ್ಸವವು ಈ ನಡಾವಳಿಯಲ್ಲಿರುತ್ತದೆ. ಕಂಡನಾರ್ ಕೇಳನ್, ಗೋರಚ್ಚನ್ ದೈವಗಳು ವಯನಾಟ್ ಕುಲವನ್ ದೈವದ ಸಹಚಾರಿ ದೈವಗಳಾಗಿದ್ದು, ವಿಷ್ಣುಮೂರ್ತಿ ದೈವವು ಈ ಸನ್ನಿವೇಶದಲ್ಲಿ ಬರುವಂತಹ ಇನ್ನೊಂದು ಅತ್ಯಂತ ಪ್ರಸಿದ್ಧವಾದ ದೈವವಾಗಿದೆ. ವಯನಾಟ್ ಕುಲವನ್ ಶಿವನ ಅಂಶವಾಗಿದ್ದು, ಈ ದೈವದ ಹುಟ್ಟು ಶಿವನ ಕೃಪೆಯಿಂದಲೇ ಆಗಿರುವಂತಹುದಾಗಿದೆ. ಒಮ್ಮೆ ಶಿವ-ಪಾರ್ವತಿಯರು ಕಾಡಿನಲ್ಲಿ ಸಂಚರಿಸುತ್ತಿದ್ದ ವೇಳೆ ಶಿವ ಕಾಡಿನಲ್ಲಿದ್ದ ತೆಂಗಿನ ಮರದ ಬುಡದಲ್ಲಿ ಹರಿಯುತ್ತಿದ್ದ ರಸವನ್ನು ಹೀರಿ ಕುಡಿದನಂತೆ. ಆ ರಸ ಮಧುವಾಗಿದ್ದು, ರಸವನ್ನು ಕುಡಿದಂತಹ ಶಿವನಿಗೆ ಉನ್ಮಾದವಾಗಿ ತಾಂಡವವನ್ನು ನಡೆಸುತ್ತಾನೆ.
ಇದರಿಂದ ಕೋಪಗೊಂಡ ಪಾರ್ವತಿಯು ತನ್ನ ಕೈಯಿಂದ ಆ ಮರವನ್ನು ಸವರಿ ಮಧುವನ್ನು ಮರದ ಕೊಂಬೆಗೆ ಕೊಂಡೊಯ್ಯುತ್ತಾಳೆ. ಇದರಿಂದ ಕೋಪಗೊಂಡ ಶಿವ ತನ್ನ ತೊಡೆಯನ್ನು ಸವರಿದಾಗ, ಆತನ ಬೆವರಿನಲ್ಲಿ ಗೋಲಾಕಾರದ ಉಂಡೆಯೊಂದು ಸೃಷ್ಟಿಯಾಗುತ್ತದೆ. ಆ ಉಂಡೆಯನ್ನು ಶಿವ ನೆಲಕ್ಕೆ ಎಸೆದಾದ ಆ ಉಂಡೆಯಿಂದ ಒಂದು ಮಾನವ ರೂಪ ಹೊರಬರುತ್ತದೆ.
ಪೌರಾಣಿಕ ಐಹಿತ್ಯ ಏನು ಹೇಳುತ್ತೆ?
ಶಿವ ಆ ಮಾನವ ರೂಪಕ್ಕೆ ದಿವ್ಯನೆಂದು ಕರೆದು ತನಗೆ ಮಧುವನ್ನು ತಂದುಕೊಡುವ ಕೆಲಸವನ್ನು ಆ ದಿವ್ಯನಿಗೆ ಒಪ್ಪಿಸುತ್ತಾನೆ. ಆ ಪ್ರಕಾರವಾಗಿ ದಿವ್ಯನು ಶಿವನು ಬಯಸಿದಾಗಲೆಲ್ಲಾ ಮಧುವನ್ನು ತಂದು ಶಿವನಿಗೆ ಒಪ್ಪಿಸುತ್ತಿದ್ದನಂತೆ. ದಿವ್ಯ ಹಾಗೂ ಶಿವನ ಈ ರೀತಿಯ ವ್ಯವಹಾರವನ್ನು ಕಂಡು ಬೇಸರಗೊಂಡ ಪಾರ್ವತಿಯು ಈ ವಿಚಾರವನ್ನು ವಿಷ್ಣುವಿನ ಗಮನಕ್ಕೆ ತರುತ್ತಾಳೆ ಹಾಗೂ ಹೇಗಾದರೂ ಮಾಡಿ ಶಿವನ ಹಾಗೂ ದಿವ್ಯರನ್ನು ಬೇರೆ ಮಾಡುವಂತೆ ವಿಷ್ಣುವಿನಲ್ಲಿ ಪ್ರಾರ್ಥಿಸುತ್ತಾಳೆ. ವಿಷ್ಣುವು ತನ್ನ ಮಾಯೆಯಿಂದ ದಿವ್ಯನ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವ ಮೂಲಕ ಒಂದು ದಿನ ಶಿವನಿಗಾಗಿ ಇಟ್ಟಿದ್ದ ಮಧುವನ್ನು ದಿವ್ಯನೇ ಕುಡಿದು ಬಿಡುತ್ತಾನೆ. ಇದರಿಂದ ಕೋಪಗೊಂಡ ಶಿವ ದಿವ್ಯನಿಗೆ ಕುರುಡನಾಗುವ ಶಾಪವನ್ನು ಕೊಡುತ್ತಾನೆ. ಈ ಸಂದರ್ಭದಲ್ಲಿ ವಿಷ್ಣು ಆಗಮಿಸಿ ದಿವ್ಯನನ್ನು ಕ್ಷಮಿಸುವಂತೆ ಶಿವನಲ್ಲಿ ಪ್ರಾರ್ಥಿಸುತ್ತಾನೆ. ಶಾಪ ವಿಮೋಚನೆಗಾಗಿ ದಿವ್ಯನನ್ನು ಶಿವ ಭೂಲೋಕಕ್ಕೆ ಕಳುಹಿಸುತ್ತಾನೆ.
ಸೇವೆಯ ರೂಪದಲ್ಲಿ ಮಧು ಮಾಂಸ ಆರ್ಪಣೆ
ಭೂಲೋಕಕ್ಕೆ ಬಂದಂತಹ ದಿವ್ಯ ಕೇರಳದ ವಯನಾಟ್ ಎಂಬ ಸ್ಥಳಕ್ಕೆ ಬರುತ್ತಾನೆ. ಅಲ್ಲಿ ಶಿವನು ತನಗೆ ನಿರ್ದೇಶಿಸಿದಂತಹ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾ ಬಳಿಕ ಅದೃಶ್ಯನಾಗುತ್ತಾನೆ. ಆ ಬಳಿಕ ಅಲ್ಲಿನ ಜನ ದಿವ್ಯನನ್ನು ತೊಂಡಚ್ಚನ್ ಅಥವಾ ವಯನಾಟ್ ಕುಲವನ್ ಎನ್ನುವ ಹೆಸರಿನಲ್ಲಿ ಆರಾಧಿಸಲು ತೊಡಗುತ್ತಾರೆ.
ಶಿವನ ಅಂಶವಾಗಿರುವ ವಯನಾಟ್ ಕುಲವನ್ ನನ್ನು ಶಿವನಂತೆಯೇ ಭಕ್ತರು ಕಾಣುತ್ತಿದ್ದಾರೆ. ಮಧು ಮಾಂಸ ಪ್ರಿಯನಾಗಿರುವ ಶಿವನಿಗೆ ಮಧು-ಮಾಂಸವನ್ನು ಸೇವೆಯ ರೂಪದಲ್ಲಿ ಈ ಆರಾಧನೆಯಲ್ಲಿ ನೀಡಲಾಗುತ್ತದೆ. ಶಿವನ ಶಾಪದಿಂದಾಗಿ ಕಣ್ಣು ಕಳೆದುಕೊಂಡಂತಹ ದಿವ್ಯ ವಯನಾಟ್ ಕುಲವನ್ ಗೆ ಮಧುವನ್ನು ಸಮರ್ಪಿಸಿದರೆ, ವಯನಾಟ್ ಕುಲವನ್ ರೂಪದಲ್ಲಿರುವ ಶಿವ ಅದನ್ನು ಸ್ವೀಕರಿಸುತ್ತಾನೆ ಎನ್ನುವ ನಂಬಿಕೆಯೂ ಇದೆ. ವಯನಾಟ್ ಕುಲವನ್ ದೊಂದಿಯನ್ನು ಹಿಡಿದು ಮಧುವನ್ನು ಹುಡುಕುತ್ತಿರುವ ಸಂದರ್ಭದಲ್ಲಿ ವಿಷ್ಣುಮೂರ್ತಿ ದೈವವು ಬಂದು ಆತನ ಸಹಾಯಕ್ಕೆ ಬರುತ್ತದೆ ಎನ್ನುವ ನಂಬಿಕೆಯೂ ಈ ಆಚರಣೆಯಲ್ಲಿ ಸೇರಿಕೊಂಡು ಬಂದಿದೆ.
ಇದನ್ನೂ ಓದಿ: Tumakuru: ಇಡೀ ಶಾಲೆಗೆ ಓರ್ವ ಶಿಕ್ಷಕಿ, ಒಬ್ಬಳೇ ವಿದ್ಯಾರ್ಥಿ; ಮುಚ್ಚುವ ಶಾಲೆ ಉಳಿಸಿದ ಬಿಸಿಯೂಟ ತಯಾರಕಿ!
ಭಕ್ತರಿಗೆ ವಿಶೇಷ ಪ್ರಸಾದ
ವಯನಾಟ್ ಕುಲವನ್ ದೈವಕ್ಕೆ ವಿಶೇಷವಾಗಿ ಕೈವೀದ್ ಎನ್ನುವ ಪ್ರಸಾದವನ್ನು ತಯಾರಿಸಲಾಗುತ್ತದೆ. ಬಿಳಿ ಅಕ್ಕಿಯನ್ನು ದೈವಸ್ಥಾನದ ಅರ್ಚಕನ ಕುಟುಂಬದ ಮಹಿಳೆಯರೇ ಅರಿದು, ಅದಕ್ಕೆ ತೆಂಗಿನ ಕಾಯಿ ಹಾಗೂ ಇತರ ಅಂಶಗಳನ್ನು ಸೇರಿಸಿ ಈ ಕೈವೀದ್ ಅನ್ನು ತಯಾರಿಸಲಾಗುತ್ತಿದ್ದು, ದೈವದ ನಡಾವಳಿಗೆ ಬರುವಂತಹ ಪ್ರತಿಯೊಬ್ಬನಿಗೂ ಈ ಪ್ರಸಾದವನ್ನು ನೀಡಲಾಗುತ್ತದೆ. ಈ ದೈವವು ಬೇಟೆಗೆ ಹೋಗುವುದನ್ನು ತಡೆದ ಬ್ರಾಹ್ಮಣರನ್ನು ಧಿಕ್ಕರಿಸಿ ಬೇಟೆಯಾಡಿದ ದೈವ ಇದಾಗಿದ್ದು, ಈ ಕಾರಣಕ್ಕಾಗಿಯೇ ಇಂದಿಗೂ ಬ್ರಾಹ್ಮಣರಿಗೆ ಇಲ್ಲಿ ಹೆಚ್ಚಿನ ಮಹತ್ವವಿಲ್ಲ.
ಮಳಿಯಾಳಿ ಬಿಲ್ಲವ ಸಮುದಾಯಕ್ಕೆ ಜವಾಬ್ದಾರಿ
ವಯನಾಟ್ ಕುಲವನ್ ದೈವಸ್ಥಾನದಲ್ಲಿ ಬ್ರಾಹ್ಮಣರಿಗಿಂತ ಹೆಚ್ಚಿನ ಮಹತ್ವ ತೀಯರು ಎಂದು ಕರೆಯುವ ಮಳಿಯಾಳಿ ಬಿಲ್ಲವ ಸಮಾಜಕ್ಕಿದೆ. ವಯನಾಟ್ ಕುಲವನ್ ದೈವಕ್ಕೆ ಮುಸ್ಲಿಂ ಸಮಾಜದ ವ್ಯಕ್ತಿ ಹಿಂದೆ ಮಧುವನ್ನು ನೀಡುತ್ತಿದ್ದು, ದೈವಕ್ಕೆ ತುಂಬಾ ಹತ್ತಿರದ ವ್ಯಕ್ತಿಯೂ ಆಗಿದ್ದರಂತೆ. ಆದರೆ ಕಾಲಕ್ರಮೇಣ ಮುಸ್ಲಿಂ ಸಮುದಾಯ ಈ ದೈವದ ಕೆಲಸದಿಂದ ಹಿಂದೆ ಸರಿದ ಕಾರಣ ಮಳಿಯಾಳಿ ಬಿಲ್ಲವ ಸಮುದಾಯಕ್ಕೆ ಈ ಜವಾಬ್ದಾರಿಯ ಹಸ್ತಾಂತರವಾಯಿತು. ದೈವಸ್ಥಾನದ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ಈ ತೀಯ ಸಮಾಜವೇ ನಿರ್ವಹಿಸುತ್ತದೆ.
Dakshina Kannada,Karnataka
March 19, 2025 7:01 PM IST