Last Updated:
ಕರಾವಳಿ ಕರ್ನಾಟಕದಲ್ಲಿ ಮುಂಗಾರು ಮಳೆಯ ಆರಂಭದೊಂದಿಗೆ ಭತ್ತದ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಯಂತ್ರಗಳ ಬಳಕೆಯಿಂದ ಸಾಂಪ್ರದಾಯಿಕ ಪಾರ್ದನ ಹಾಡುಗಳು ಮರೆಯಾಗುತ್ತಿವೆ.
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ (Coastal Districts) ಮುಂಗಾರು ಮಳೆ (Monsoon) ಬಿರುಸಿನಿಂದ ಆರಂಭವಾಗಿದ್ದು, ಎಲ್ಲಾ ಕಡೆಗಳಲ್ಲೂ ನೀರೇ ನೀರು ತುಂಬಿದೆ. ಮಳೆ ಆರಂಭಗೊಳ್ಳುತ್ತಿದ್ದಂತೆ ಕೃಷಿ ಚಟುವಟಿಕೆಗಳೂ (Harvesting) ಗರಿಗೆದರುತ್ತಿದ್ದು, ಭತ್ತದ ನಾಟಿಯ ಕೆಲಸವೂ ಹಲವು ಗದ್ದೆಗಳಲ್ಲಿ ಈಗಾಗಲೇ ಆರಂಭಗೊಂಡಿದೆ. ಕೆಲವು ಗದ್ದೆಗಳಲ್ಲಿ ಇಂದು ಆಧುನಿಕ ನಾಟಿ ಯಂತ್ರಗಳನ್ನು ಬಳಸಿಕೊಂಡು ಭತ್ತದ ಕೃಷಿ ಮಾಡುತ್ತಿದ್ದು, ಭತ್ತದ (Paddy) ಕೃಷಿಗೆ ಅಗತ್ಯವಾಗಿರುವ ಗದ್ದೆ ಉಳುಮೆ ಮಾಡುವ, ಭತ್ತದ ಸಸಿ ನೆಡುವ, ಬಳಿಕ ತೆಳೆ ಕೊಯ್ಯುವ, ತೆನೆಗಳಿಂದ ಭತ್ತ ಬೇರ್ಪಡಿಸುವ, ಬೈ ಹುಲ್ಲು ಸಂಗ್ರಹಿಸುವ ಹೀಗೆ ಎಲ್ಲಾ ಕೆಲಸಗಳನ್ನು ಇಂದು ಯಂತ್ರಗಳೇ ನಿರ್ವಹಿಸುತ್ತಿದ್ದು, ಕೆಲವೇ ಕೆಲವು ಸಂಖ್ಯೆಯ ಕಾರ್ಮಿಕರಿದ್ದರೆ ಸಾಕು ಎನ್ನುವ ಮಟ್ಟಕ್ಕೆ ಇಂದು ಭತ್ತದ ಕೃಷಿ ಬಂದು ನಿಂತಿದೆ.
ಊರಿನ ಒಗ್ಗಟ್ಟಿಗೆ ಮೂಲವಾಗಿತ್ತು ಭತ್ತದ ಬೇಸಾಯ
ಸಾಂಪ್ರದಾಯಿಕ ಭತ್ತದ ಬೇಸಾಯವನ್ನೇ ನೆಚ್ಚಿಕೊಂಡು ಬರುತ್ತಿದ್ದ ಅವಿಭಜಿತ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಯಂತ್ರಗಳ ಸಹಾಯದಲ್ಲೇ ಭತ್ತದ ಕೃಷಿ ನಡೆಯುತ್ತಿದೆ. ಆದರೆ ಈ ಯಂತ್ರಗಳು ಬಂದ ಬಳಿಕ ಸಾಂಪ್ರದಾಯಿಕ ಭತ್ತ ಕೃಷಿಯೊಂದಿಗೆ ಬೆಳೆದು ಬಂದಂತಹ ಪಾರ್ದನವೊಂದು ಮರೆಯಾಗಲಾರಂಭಿಸಿದೆ. ಭತ್ತದ ಪೈರನ್ನು ನಾಟಿ ಮಾಡುವ ಸಂದರ್ಭದಲ್ಲಿ ಹಾಡಲಾಗುವ ಈ ಪಾರ್ದನ ಇಂದು ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿದೆ. ಎರಡೂ ಜಿಲ್ಲೆಗಳಲ್ಲಿ ಕಳೆದ ಹತ್ತು ವರ್ಷಗಳ ತನಕವೂ ಗದ್ದೆ ಬೇಸಾಯವನ್ನು ಊರಿನ ಜನರೆಲ್ಲಾ ಸೇರಿ ಮಾಡುತ್ತಿದ್ದರು. ಒಂದು ಮನೆಯಲ್ಲಿ ಭತ್ತದ ಬೇಸಾಯ ಆರಂಭಗೊಂಡಲ್ಲಿ, ಊರಿನಲ್ಲಿ ಭತ್ತದ ಕೃಷಿ ಮಾಡುವ ಮಂದಿಯೆಲ್ಲಾ ಆ ಮನೆಗೆ ತೆರಳಿ ಭತ್ತದ ಬೇಸಾಯಕ್ಕೆ ಬೇಕಾದ ಕೆಲಸಗಳನ್ನು ನಿರ್ವಹಿಸುತ್ತದೆ. ಅದೇ ರೀತಿ ಇನ್ನೊಂದು ಮನೆಯಲ್ಲಿ ಭತ್ತದ ಬೆಳೆ ಕೃಷಿ ಆರಂಭಗೊಂಡಲ್ಲಿ, ಆ ಮನೆಯ ಗದ್ದೆಯಲ್ಲೂ ಕೆಲಸ ನಿರ್ವಹಿಸುತ್ತಿದ್ದ ಪದ್ಧತಿ ಇತ್ತೀಚಿನವರೆಗೂ ಕಂಡು ಬರುತ್ತಿತ್ತು. ಸ್ತ್ರೀ ಶಕ್ತಿ ಗುಂಪು, ಸ್ವಹಾಯ ಸಂಸ್ಥೆಗಳ ಸದಸ್ಯರೆಲ್ಲಾ ಸೇರಿ ಭತ್ತದ ಕೃಷಿ ಕೆಲಸವನ್ನು ನಿರ್ವಹಿಸುತ್ತಿದ್ದರು.
ನಿಂತ ಸಾಮೂಹಿಕ ಬೇಸಾಯ, ಕುಂದಿದ ಪಾರ್ದನದ ದನಿ!
ಈ ರೀತಿ ಇಡೀ ಊರೇ ಸೇರಿ ನಿರ್ವಹಿಸುತ್ತಿದ್ದ ಭತ್ತದ ಬೇಸಾಯ ಇಂದು ಮರೆಯಾಗುತ್ತಿದೆ. ಈ ವ್ಯವಸ್ಥೆಯ ಜೊತೆಗೆ ನಾಟಿ ಮಾಡುವ ಸಮಯದಲ್ಲಿ ಎಲ್ಲರೂ ಸೇರಿ ಹಾಡುತ್ತಿದ್ದ ಪಾರ್ದನವೂ ಮಾಯವಾಗಲಾರಂಭಿಸಿದೆ. ಭತ್ತದ ಬೇಸಾಯದಲ್ಲಿ ನಿರತರಾದ ಕುಟುಂಬಗಳ ಹಿರಿಯ ಮಹಿಳಾ ಸದಸ್ಯರಲ್ಲಿ ಮಾತ್ರ ಈ ಪಾರ್ದನ ಇಂದೂ ಜೀವಂತವಾಗಿದ್ದು, ಈಗಿನ ತಲೆಮಾರು ಈ ಪಾರ್ದನದ ಬಗ್ಗೆ ಹೆಚ್ಚು ತಲೆಯನ್ನೇ ಕೆಡಿಸಿಕೊಂಡಿಲ್ಲ.
ಬೇಸಾಯದ ಭಾವ ಹೊಂದಿರುವ ಜೀವಂತ ಹಾಡುಗಳೇ “ಪಾರ್ದನ!”
ಬೇಸಾಯ ಮಾಡಲು ಬೇಕಾದ ಶ್ರಮವನ್ನು ಈ ಪಾರ್ದನಗಳು ಪ್ರಸ್ತುತಪಡಿಸುತ್ತದೆ. ಅಲ್ಲದ ಪಾರ್ದನದ ಮೂಲಕ ಕೃಷಿ ಕಾರ್ಮಿಕನ ಕೆಲವು ಚೇಷ್ಟೆಗಳನ್ನೂ ಈ ಪಾರ್ದನದ ಮೂಲಕ ಹಾಡಲಾಗುತ್ತದೆ. ಹೆಚ್ಚಾಗಿ ಮಹಿಳೆಯರೇ ಭತ್ತದ ಪೈರನ್ನು ನಾಟಿ ಮಾಡುವುದರಿಂದ ಮಹಿಳೆಯರಲ್ಲೇ ಈ ಪಾರ್ದನ ಇನ್ನೂ ಜೀವಂತವಾಗಿ ಉಳಿದಿದೆ.
Mangalore,Dakshina Kannada,Karnataka
June 21, 2025 12:47 PM IST