Last Updated:
ಮಂಗಳೂರಿನ ಅರುಣ್ ಕುಮಾರ್ ಬಯೋಮೆಟ್ರಿಕ್ ಹಾಜರಾತಿ ಸಿಸ್ಟಮ್ ಸಂಶೋಧನೆ ಮಾಡಿ, ವಿದ್ಯಾರ್ಥಿಗಳ ಸುರಕ್ಷತೆ ಖಚಿತಪಡಿಸಲು ವಾಟ್ಸಾಪ್ ಮೂಲಕ ಪೋಷಕರಿಗೆ ಮಾಹಿತಿ ರವಾನಿಸುವ ತಂತ್ರಜ್ಞಾನ ಅಳವಡಿಸಿದ್ದಾರೆ.
ಮಂಗಳೂರು: ಮಕ್ಕಳನ್ನು ನಾವು ಶಾಲೆಗೆ (School) ಬಿಡುವುದೇನೋ ಸರಿ, ಆದರೆ ಕೆಲ ಪೋಷಕರು ಮಕ್ಕಳು (Children) ಸರಿಯಾಗಿ ಶಾಲೆ ತಲುಪಿದರಾ? ಇಲ್ಲವಾ ಅನ್ನೋ ಚಿಂತೆಯಲ್ಲೇ ಇರುತ್ತಾರೆ. ಶಾಲೆ ಸಮಯ ಕಳೆದ ಮೇಲೆ ಮತ್ತದೇ ತಲೆಬಿಸಿ. ಹೆಜ್ಜೆ-ಹೆಜ್ಜೆಗೂ ಕೂಡ ಹುಷಾರಿರಬೇಕಾದ ಸಮಯದಲ್ಲಿ ಮಕ್ಕಳ ಬಗ್ಗೆ ಚಿಂತೆ ಸಹಜ. ಆದರೆ ಮಂಗಳೂರಿನ (Mangaluru) ಒಬ್ಬ ವಿದ್ಯಾರ್ಥಿ ಆ ಚಿಂತೆಯನ್ನು ದೂರ ಮಾಡಿದ್ದಾನೆ. ವಿದ್ಯಾರ್ಥಿಗಳ ಶಾಲಾ ಹಾಜರಾತಿ ದೃಢೀಕರಣಕ್ಕೆ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಕೆಲವು ಶಾಲೆ-ಕಾಲೇಜುಗಳು ಅಳವಡಿಸಿಕೊಂಡಿವೆ. ಆದರೆ, ಇಲ್ಲೊಬ್ಬ ವಿದ್ಯಾರ್ಥಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮನೆಯಿಂದ ಹೊರಟ ವಿದ್ಯಾರ್ಥಿ ಶಾಲೆಗೆ ತಲುಪಿದ್ದಾನೆ. ಶಾಲೆಯಿಂದ ಮನೆ ಕಡೆ ಹೊರಟಿದ್ದಾನೆ. ಎನ್ನುವುದನ್ನು ಮನೆಯವರಿಗೆ ಖಚಿತಪಡಿಸುವ ಹೊಸ ತಂತ್ರಜ್ಞಾನವೊಂದನ್ನು (New Technology) ಸಂಶೋಧಿಸಿ ಶಾಲೆಯಲ್ಲಿ ಅಳವಡಿಸಿದ್ದಾನೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮಟ್ಟಿಗೆ ಇದು ಮೊದಲ ಪ್ರಯೋಗ ಎನಿಸಿದೆ.
ಅರುಣ್ ಕುಮಾರ್ನ ಹೊಸ ಆವಿಷ್ಕಾರ
ದಕ್ಷಿಣ ಕನ್ನಡದ ಮೊದಲ ಪ್ರಯೋಗ
ಬಯೋಮೆಟ್ರಿಕ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ 8ನೇ ತರಗತಿಯ 50 ಮಕ್ಕಳಿಗೆ ಅಳವಡಿಸಲಾಗಿದೆ. ಕೊಂಬೆಟ್ಟು ಪ್ರೌಢ, ಪಿಯುಸಿ ವಿಭಾಗದಲ್ಲಿ 1000ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ. ಒಂದು ವ್ಯವಸ್ಥೆಯಲ್ಲಿ ಗರಿಷ್ಠ 500 ಮಂದಿಗೆ ಇದರಲ್ಲಿ ಅವಕಾಶವಿದೆ. ಮುಂದೆ ಇಡೀ ಸಂಸ್ಥೆಗೆ ಈ ವ್ಯವಸ್ಥೆಯನ್ನು ವಿಸ್ತರಿಸುವ ಯೋಜನೆಯನ್ನೂ ಈ ವಿದ್ಯಾರ್ಥಿ ಇಟ್ಟುಕೊಂಡಿದ್ದಾನೆ. ಬೊಳುವಾರು ನಿವಾಸಿ ವಿನೋದ್ ಕುಮಾರ್, ರಾಜೇಶ್ವರಿ ಚೆಟ್ಟಿಯಾರ್ ದಂಪತಿ ಪುತ್ರ, ಕೊಂಬೆಟ್ಟು ಪಿಯು ಕಾಲೇಜಿನ 2 ನೇ ವರ್ಷದ ವಾಣಿಜ್ಯ ವಿದ್ಯಾರ್ಥಿ ಅರುಣ್ ಕುಮಾರ್ ಈ ಸಿಸ್ಟಮ್ನ ಸಂಶೋಧಕ. ಉಪ ಪ್ರಾಂಶುಪಾಲ ವಸಂತ ಮೂಲ್ಯರ ನೇತೃತ್ವ, ಐಟಿ ಶಿಕ್ಷಕ ಆಶ್ಲೇಷ್ ಕುಮಾರ್, ಆಟೋ ಮೊಬೈಲ್ ಶಿಕ್ಷಕ ಶಶಿಕುಮಾರ್ ಮಾರ್ಗದರ್ಶನದಲ್ಲಿ 2 ತಿಂಗಳಲ್ಲಿ ತಯಾರಿಸಿದ್ದಾನೆ.
ಕಡಿಮೆ ವೆಚ್ಚದಲ್ಲಿ ಹೈಟೆಕ್
ಈತ ಹೈಸ್ಕೂಲಿನಲ್ಲಿದ್ದಾಗಲೇ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ. ಪ್ರಸ್ತುತ ಯಾವುದೇ ಖರ್ಚಿಲ್ಲದೆ ಹೊಸ ಸಿಸ್ಟಮ್ ಅನ್ನು ಸಂಶೋಧಿಸಿದ್ದಾನೆ. ಹೊರಗಿನಿಂದ ಸಾಮಗ್ರಿ ಖರೀದಿಸಿ ತಯಾರಿಸುವುದಿದ್ದರೆ ಇದನ್ನು 25 ಸಾವಿರಕ್ಕೂ ಮಿಕ್ಕಿದ ಹಣ ವ್ಯಯಿಸಬೇಕಿತ್ತು. ಆದರೆ ಅರುಣ್ ತನ್ನ ಶಾಲೆಯ ಅಟಲ್ ಲಾಬ್ ನಲ್ಲಿ ಇದ್ದ ಸಾಧನಗಳನ್ನೇ ಬಳಸಿ ಇದನ್ನು ಅತೀ ಕಡಿಮೆ ವೆಚ್ಚದಲ್ಲಿ ಸಿದ್ಧಪಡಿಸಬಹುದು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.
ಬಯೋಮೆಟ್ರಿಕ್ನಿಂದ ಪೋಷಕರಿಗೆ ಶಾಂತಿ
ಈ ಸಿಸ್ಟಮ್ನಲ್ಲಿ ಮುಖ, ಬೆರಳಚ್ಚು ಎರಡೂ ದಾಖಲಾಗುತ್ತದೆ. ಬೆಳಗ್ಗೆ 9 ರಿಂದ 10 ಗಂಟೆಯ ಒಳಗೆ ವಿದ್ಯಾರ್ಥಿ ಶಾಲೆಗೆ ಬರಬೇಕು ಎನ್ನುವ ಸಮಯ ನಿಗದಿ ಮಾಡಲಾಗಿದೆ. ಈ ಅವಧಿಯಲ್ಲಿ ಬರುವ ವಿದ್ಯಾರ್ಥಿ ಗಳು ಬಯೋಮೆಟ್ರಿಕ್ ಮುಂದೆ ನಿಂತರೆ ಹಾಜರಾತಿ ದಾಖಲಾಗುತ್ತದೆ ಮತ್ತು ವಿದ್ಯಾರ್ಥಿ ಶಾಲೆಗೆ ಬಂದಿದ್ದಾನೆ ಎನ್ನುವ ಸಂದೇಶ ವಾಟ್ಸಾಪ್, ಟೆಲಿಗ್ರಾಮ್ ಮೂಲಕ ಹೆತ್ತವರಿಗೆ ರವಾನೆ ಆಗುತ್ತದೆ. ಸೂಚಿತ ಸಮಯದಲ್ಲಿ ಬಾರದೇ ಇದ್ದಲ್ಲಿ ಆ ವಿದ್ಯಾರ್ಥಿ ಗೈರಾಗಿದ್ದಾನೆ ಎನ್ನುವ ಸಂದೇಶವೂ ಹೆತ್ತವರಿಗೆ ಹೋಗುತ್ತದೆ. ಸಂಜೆ 3.30 ರಿಂದ 4.30 ರ ಒಳಗೆ ಹೊರಟರೆ ಆ ಸಂದೇಶವೂ ರವಾನೆಯಾಗುತ್ತದೆ.
ಸಾಮಾನ್ಯವಾಗಿ ಬಯೋಮೆಟ್ರಿಕ್ನಿಂದ ವೆಬ್ಸೈಟಿಗೆ ಸಂದೇಶ ಹೋಗುತ್ತದೆ. ಇಲ್ಲಿ ಅದರ ಬದಲು ವಾಟ್ಸಾಪ್ ಮತ್ತು ಟೆಲಿಗ್ರಾಂ ಲಿಂಕ್ ಮಾಡಲಾಗಿದೆ. ಆರಂಭದಲ್ಲಿ ಬಯೋಮೆಟ್ರಿಕ್ ಸಿಸ್ಟಮ್ ಗೆ ಒಳಗಾಗುವ ವಿದ್ಯಾರ್ಥಿಯ ಹೆಸರು, 3 ಡಿ ಮಾದರಿಯ ಫೋಟೋ, ತರಗತಿ ಮಾಹಿತಿ, ಪೋಷಕರ ದೂರವಾಣಿ ಸಂಖ್ಯೆಯನ್ನು ಸಂಗ್ರಹಿಸಿ ಇಡಲಾಗುತ್ತದೆ. ಮುಂದೆ ಬಯೋಮೆಟ್ರಿಕ್ ಮೂಲಕ ವಿದ್ಯಾರ್ಥಿಯನ್ನು ಗುರುತಿಸಿ ಸಂದೇಶ ರವಾನಿಸಲಾಗುತ್ತದೆ.
Mangalore,Dakshina Kannada,Karnataka
June 25, 2025 12:36 PM IST