Last Updated:
ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಮೇಲೆ ಹತ್ತಿದ ನವಿಲು ಶಾಕ್ ಹೊಡೆದು ಪ್ರಜ್ಞೆ ತಪ್ಪಿ ಬಿದ್ದಿತ್ತು. ಸ್ಥಳೀಯರು ಸಹಾಯಕ್ಕೆ ಮುಂದಾಗದಿದ್ದರೂ, ಇಬ್ಬರು ಪ್ರಯಾಣಿಕರು ಧೈರ್ಯದಿಂದ ನವಿಲಿಗೆ ನೆರವಾದರು.
ದಕ್ಷಿಣ ಕನ್ನಡ: ರಾಷ್ಟ್ರಪಕ್ಷಿ ನವಿಲನ್ನು (Peacock) ನೋಡುವುದೇ ಒಂದು ಚೆಂದ. ಅದು ನರ್ತಿಸುವುದನ್ನು ನೋಡುತ್ತಲೇ ಇರಬೇಕು ಎನ್ನಿಸುತ್ತೆ. ಆದ್ರೆ ಹಿಡಿಯೋದಾಗಲೀ, ಕೊಲ್ಲೋದಾಗಲೀ ನಿಷಿದ್ಧ. ಇತ್ತೀಚಿನ ದಿನಗಳಲ್ಲಿ ನವಿಲುಗಳ ಗುಂಪು ಹಳ್ಳಿ ಇರಲಿ, ನಗರವಿರಲಿ ಎಲ್ಲಿ ನೋಡಿದರಲ್ಲಿ ಕಂಡು ಬರುತ್ತಿದೆ. ಕೆಲವೊಮ್ಮೆ ನಗರ (City) ಪ್ರದೇಶಗಳಲ್ಲಿ ಕಂಡು ಬರುವ ಈ ನವಿಲುಗಳು ನಗರದ ವ್ಯವಸ್ಥೆಯನ್ನು ಅರಿಯದೆ ಕೆಲವೊಮ್ಮೆ ಪೇಚಿಗೆ ಸಿಲುಕುತ್ತವೆ. ಹೀಗೆ ದಕ್ಷಿಣ ಕನ್ನಡದ (Dakshina Kannada) ಪುತ್ತೂರು ಪೇಟೆ ನೋಡಲು ಬಂದ ಜೋಡಿ ನವಿಲುಗಳು ವಿದ್ಯುತ್ ಟ್ರಾನ್ಸ್ ಫಾರ್ಮರ್ (Power Transformer) ಮೇಲೆ ಹತ್ತಿ ಕುಳಿತಿದ್ವು.
ಶಾಕ್ನಿಂದ ಕೆಳಗೆ ಬಿದ್ದ ನವಿಲು
ಟ್ರಾನ್ಸ್ ಫಾರ್ಮರ್ ಕುಳಿತ ಪರಿಣಾಮ ತಮಗೆ ಶಾಕ್ ಹೊಡೆಯಬಹುದು ಎನ್ನುವ ಪರಿಜ್ಞಾನವಿಲ್ಲದ ಕಾರಣ ಕೊಂಚ ಹೊತ್ತು ಅಲ್ಲೇ ಓಡಾಡಿದೆ. ಆದರೆ ಅಚಾನಕ್ ಆಗಿ ಗಂಡು ನವಿಲಿಗೆ ಟ್ರಾನ್ಸ್ ಫಾರ್ಮರ್ ನ ವಿದ್ಯುತ್ ತಂತಿ ತಗುಲಿದ ಪರಿಣಾಮ ಶಾಕ್ ಹೊಡೆದು ಅಲ್ಲೇ ಕೆಳಗೆ ಪ್ರಜ್ಞೆ ತಪ್ಪಿ ಬಿದ್ದಿದೆ. ಪ್ರಜ್ಞೆ ತಪ್ಪಿ ಬಿದ್ದ ನವಿಲನ್ನು ಕಂಡ ಸ್ಥಳೀಯರೆಲ್ಲಾ ನವಿಲಿನ ಬಗ್ಗೆ ಮರುಕ ಪಟ್ಟರೇ ಹೊರತು ಅದರ ಬಳಿ ಹೋಗಲು ಮಾತ್ರ ಯಾರೂ ಮುಂದಾಗಲಿಲ್ಲ.
ನವಿಲಿಗೆ ಆಸರೆಯಾದ ವ್ಯಕ್ತಿ
ನವಿಲನ್ನು ಮುಟ್ಟಿದರೆ ಎಲ್ಲಿ ತಮ್ಮ ಮೇಲೆ ಕೇಸು ದಾಖಲಾಗುತ್ತೋ ಎನ್ನುವ ಭಯದಿಂದ ಜನ ನವಿಲನ್ನು ದೂರದಿಂದಲೇ ನೋಡಿ ವಿಷಾದ ವ್ಯಕ್ತಪಡಿಸಿ ತೆರಳುತ್ತಿದ್ದರು. ಆದರೆ ಅದೇ ಸಂದರ್ಭಕ್ಕೆ ಅದೇ ದಾರಿಯಲ್ಲಿ ಸಾಗುತ್ತಿದ್ದ ಪ್ರಯಾಣಿಕರಿಬ್ಬರು ನವಿಲನ್ನು ನೋಡಿ ಧೈರ್ಯದಿಂದ ನವಿಲಿನ ಬಳಿ ತೆರಳಿದ್ದಾರೆ. ನೆಲಕ್ಕೆ ಬಿದ್ದಿದ್ದ ನವಿಲನ್ನು ಆರೈಕೆ ಮಾಡಿ, ನವಿಲಿಗೆ ನೀರು ಕುಡಿಸಿ, ಸುಮಾರು ಅರ್ಧ ತಾಸಿನವರೆಗೂ ಅದರ ಬಳಿಯೇ ನಿಂತು ನವಿಲು ಚೇತರಿಸಿಕೊಳ್ಳುವ ವರೆಗೂ ಕಾದಿದ್ದಾರೆ. ಆ ಬಳಿಕ ಶಾಕ್ ನಿಂದ ಹೊರ ಬಂದು ನವಿಲು ಎದ್ದು ನಿಂತಿದೆ.
ಈ ನಡುವೆ ಟ್ರಾನ್ಸ್ ಫಾರ್ಮರ್ ನ ಮೇಲೆ ನಿಂತು ಇದನ್ನೆಲ್ಲಾ ವೀಕ್ಷಿಸುತ್ತಿದ್ದ ಇನ್ನೊಂದು ನವಿಲು ಸೀದಾ ಪಕ್ಕದಲ್ಲಿರುವ ಪುತ್ತೂರು ನಗರ ಪೆÇಲೀಸ್ ಠಾಣೆಯ ಕಟ್ಟಡದ ಮೇಲೆ ಹಾರಿದೆ. ಜೋಡಿ ಹಾರುವುದನ್ನು ಕಂಡ ಗಾಯಗೊಂಡ ನವಿಲು ಕೂಡಾ ಅದರ ಜೊತೆಗೇ ಹಾರಿದ್ದು, ಎಲ್ಲರ ಆತಂಕಕ್ಕೆ ಕಾರಣವಾಗಿದ್ದ ನವಿಲಿನ ಪ್ರಕರಣ ಸುಖಾಂತ್ಯಗೊಂಡಿದೆ.
Dakshina Kannada,Karnataka
June 25, 2025 3:31 PM IST