Last Updated:
ಹೆಡಿಂಗ್ಲೆ ಟೆಸ್ಟ್ ಸೋಲಿನ ನಂತರ, ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಭಾರತದ ಸೋಲಿಗೆ ಕಾರಣಗಳನ್ನು ವಿವರಿಸುತ್ತಾ, ತಪ್ಪುಗಳು ಸಹಜ ಎಂದು ಹೇಳಿದರು. ಕೆಳ ಕ್ರಮಾಂಕದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಷಯದಲ್ಲಿ ತಮ್ಮ ತಂಡ ವಿಫಲವಾಯಿತು ಎಂದು ಒಪ್ಪಿಕೊಂಡಿದ್ದಾರೆ.
ಇಂಗ್ಲೆಂಡ್ನಲ್ಲಿ (England vs India) ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ತಾನೇ ಎಸಗಿದ ಪ್ರಮಾದಗಳಿಂದ ಸೋಲು ಕಂಡಿದೆ. ಬ್ಯಾಟಿಂಗ್ನಲ್ಲಿ ಅಗ್ರ ಕ್ರಮಾಂಕದವರು ಮಾತ್ರ ಉತ್ತಮ ಪ್ರದರ್ಶನ ನೀಡಿದರು ಮತ್ತು ಬೌಲಿಂಗ್ನಲ್ಲಿ ಬುಮ್ರಾ (Jasprit Bumrah) ಹೊರತುಪಡಿಸಿ ಬೇರೆ ಯಾವ ಬೌಲರ್ಗಳು ಪ್ರಭಾವ ಬೀರಲಿಲ್ಲ. ಈ ಕಾರಣದಿಂದಲೇ ಗೆಲ್ಲುವಂತಿದ್ದ ಪಂದ್ಯದಲ್ಲಿ ಭಾರತ ಸೋಲು ಕಂಡಿತು. ಮೊದಲ ಪಂದ್ಯ ಸೋತ ಬೆನ್ನಲ್ಲೇ ಬುಮ್ರಾ ಕುರಿತು ಗಂಭೀರ್ (Gautam Gambhir) ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಸರಣಿ ಆರಂಭವಾಗುವ ಮೊದಲು ಬುಮ್ರಾ ಎಷ್ಟು ಪಂದ್ಯಗಳನ್ನು ಆಡಬೇಕು ಮತ್ತು ಅವರು ಯಾವಾಗ ಲಭ್ಯವಿರಬೇಕು ಎಂಬುದು ಈಗಾಗಲೇ ನಿಗಧಿಯಾಗಿರುವಂತೆಯೇ ನಡೆಯಲಿದೆ, ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೆಡ್ ಕೋಚ್ ಗೌತಮ್ ಗಂಭೀರ್ ಸ್ಪಷ್ಟನೆ ನೀಡಿದರು.
ಗೆಲುವಿನ ಹಳಿಗೆ ಮರಳುತ್ತೇವೆ ಎಂದ ಗೌತಮ್
ಹೆಡಿಂಗ್ಲೆ ಟೆಸ್ಟ್ ಸೋಲಿನ ನಂತರ, ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಭಾರತದ ಸೋಲಿಗೆ ಕಾರಣಗಳನ್ನು ವಿವರಿಸುತ್ತಾ, ತಪ್ಪುಗಳು ಸಹಜ ಎಂದು ಹೇಳಿದರು. ಬ್ಯಾಟಿಂಗ್ ಮತ್ತು ಬೌಲಿಂಗ್ ವಿಷಯದಲ್ಲಿ ತಮ್ಮ ತಂಡ ವಿಫಲವಾಯಿತು ಎಂದು ಹೇಳಿದರು. ಆದರೆ ಸರಣಿಯಲ್ಲಿ ಮತ್ತೆ ತಿರುಗಿ ಬೀಳಲಿದ್ದೇವೆ ಎಂದು ಹೇಳಿದ ಅವರು, ಇದೇ ಸಂದರ್ಭದಲ್ಲಿ ಬುಮ್ರಾ ಅವರ ಬಗ್ಗೆಯೂ ಅಚ್ಚರಿ ವಿಷಯ ಪ್ರಸ್ತಾಪಿಸಿದ್ದಾರೆ.
ಯಾರ್ಕರ್ ಕಿಂಗ್ ಆಡೋದು 3 ಪಂದ್ಯ
ಟೀಮ್ ಇಂಡಿಯಾ ಸೂಪರ್ಸ್ಟಾರ್ ಜಸ್ಪ್ರೀತ್ ಬುಮ್ರಾ ಕೇವಲ ಮೂರು ಟೆಸ್ಟ್ ಪಂದ್ಯಗಳಿಗೆ ಮಾತ್ರ ಲಭ್ಯವಿರುತ್ತಾರೆ ಎಂದು ಗಂಭೀರ್ ಸ್ಪಷ್ಟಪಡಿಸಿದರು. ಬುಮ್ರಾ ಅವರನ್ನು ರಕ್ಷಿಸುವ ಜವಾಬ್ದಾರಿ ಅವರ ಮೇಲಿದೆ, ಅದಕ್ಕಾಗಿಯೇ ಹೆಚ್ಚಿನ ಒತ್ತಡವನ್ನು ತಪ್ಪಿಸಲು ಐದು ಪಂದ್ಯಗಳ ಸರಣಿಯಲ್ಲಿ ಕೇವಲ ಮೂರು ಪಂದ್ಯಗಳನ್ನು ಮಾತ್ರ ಆಡಲು ಯೋಜಿಸಲಾಗಿದೆ ಎಂದು ಅವರು ಹೇಳಿದರು. ಆದಾಗ್ಯೂ, ಬುಮ್ರಾ ಯಾವ ಪಂದ್ಯಗಳಿಗೆ ಲಭ್ಯವಿರುತ್ತಾರೆ ಮತ್ತು ಅವರು ಯಾವ ಪಂದ್ಯಗಳನ್ನು ಆಡುವುದಿಲ್ಲ ಎಂಬುದರ ಕುರಿತು ಅವರು ಸ್ಪಷ್ಟನೆ ನೀಡಲಿಲ್ಲ.
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಜಸ್ಪ್ರೀತ್ ಬುಮ್ರಾ ಐದು ವಿಕೆಟ್ಗಳನ್ನು ಕಬಳಿಸಿದರು. ಹೆಚ್ಚಿನ ವಿಕೆಟ್ಗಳನ್ನು ಪಡೆಯುವ ಅವಕಾಶವಿದ್ದರೂ, ಫೀಲ್ಡರ್ಗಳು ಕ್ಯಾಚ್ಗಳನ್ನು ತಪ್ಪಿಸಿಕೊಂಡ ಕಾರಣ ಅವರು ಐದು ವಿಕೆಟ್ಗಳಿಗೆ ತೃಪ್ತಿಪಟ್ಟರು. ಜಸ್ಪ್ರೀತ್ ಬುಮ್ರಾ ಅತಿ ಹೆಚ್ಚು ಐದು ವಿಕೆಟ್ಗಳನ್ನು ಪಡೆದ ಏಷ್ಯನ್ ಬೌಲರ್ ಎಂಬ ವಿಶ್ವದಾಖಲೆಯನ್ನು ಸೃಷ್ಟಿಸಿದರು. ಬುಮ್ರಾ ಅವರನ್ನು ಟೀಮ್ ಇಂಡಿಯಾದ ಕೊಹಿನೂರ್ ಎಂದೂ ಬಣ್ಣಿಸಲಾಗುತ್ತಿದೆ.
ಬುಮ್ರಾ ಸ್ಥಾನಕ್ಕೆ ಯಾರು?
ಬುಮ್ರಾ ಲಭ್ಯವಿಲ್ಲದಿದ್ದರೆ, ಅವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬುದು ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಕೊನೆಯ ಕ್ಷಣದಲ್ಲಿ ಭಾರತ ತಂಡಕ್ಕೆ ಸೇರ್ಪಡೆಯಾದ ಹರ್ಷಿತ್ ರಾಣಾ ಅವರನ್ನು ಬುಮ್ರಾ ಸ್ಥಾನದಲ್ಲಿ ಆಡಿಸಲಾಗುತ್ತದಾ ಅಥವಾ ಅರ್ಶ್ದೀಪ್ ಸಿಂಗ್ಗೆ ಅವಕಾಶ ನೀಡಲಾಗುತ್ತದೆಯೇ? ಎಂಬುದು ಇನ್ನೂ ಖಚಿತವಾಗಿಲ್ಲ. ಶಾರ್ದೂಲ್ ಠಾಕೂರ್, ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಮೊದಲ ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಇದರೊಂದಿಗೆ, ಎರಡನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾದ ಆಡುವ 11 ರಲ್ಲಿ ಕೆಲವು ಬದಲಾವಣೆಗಳ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ನ್ಯೂಸ್ 18 ಕನ್ನಡ ಕ್ರೀಡಾ ವಿಭಾಗದಲ್ಲಿ ಕ್ರಿಕೆಟ್ ಅಪ್ಡೇಟ್ಸ್, ಮ್ಯಾಚ್ ಅಪ್ಡೇಟ್ಸ್, ಮ್ಯಾಚ್ ರಿವೀವ್ಸ್, ಲೈವ್ ಸ್ಕೋರ್ಗಳು, ಪಂದ್ಯ ವಿಶ್ಲೇಷಣೆ, ಆಟಗಾರರ ಪ್ರೊಫೈಲ್ಗಳು ಮತ್ತು ಇತರ ಕ್ರೀಡೆಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಿರಿ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ
June 25, 2025 4:01 PM IST