Last Updated:
ಕೊಟ್ಟಿಯೂರು ಶಿವ ಕ್ಷೇತ್ರವು ಕೇರಳದ ಕಣ್ಣೂರು ಜಿಲ್ಲೆಯಲ್ಲಿ ದಟ್ಟ ಅರಣ್ಯದಲ್ಲಿ ಇದೆ. ಅಕ್ಕರೆ ಮತ್ತು ಇಕ್ಕರೆ ಕೊಟ್ಟಿಯೂರು ಕ್ಷೇತ್ರಗಳು 27 ದಿನ ಮಾತ್ರ ಭಕ್ತರಿಗೆ ತೆರೆದಿರುತ್ತವೆ.
ಮಂಗಳೂರು: ದೇವರ ಸ್ವಂತ ನಾಡು ಕೇರಳದ (Kerala) ಪ್ರಕೃತಿಯ ಮಡಿಲಲ್ಲಿರುವ ಕಣ್ಣೂರು ಜಿಲ್ಲೆಯ ಕೊಟ್ಟಿಯೂರು ಶಿವ ಕ್ಷೇತ್ರದಲ್ಲಿ (Lord Shiva) ಭಕ್ತರ ದಂಡೇ ಹರಿದು ಬರುತ್ತಿದೆ. ಕೇರಳ ರಾಜ್ಯದ ಎರಡನೇ ಅತೀ ಶ್ರೀಮಂತ ದೇಗುಲ ಎಂದು ಹೆಸರುವಾಸಿಯಾಗಿರುವ ಈ ಕೊಟ್ಟಿಯೂರು ಕ್ಷೇತ್ರ (Kottiyur) ಇರೋದು ದಟ್ಟ ಅಭಯಾರಣ್ಯದ ಮಧ್ಯೆ. ಈ ಅಭಯಾರಣ್ಯದ (Forest) ಮಧ್ಯೆ ಹರಿಯುವ ವಾವಲಿ ನದಿಯ ಎರಡೂ ತಟದಲ್ಲಿ ಶವಕ್ಷೇತ್ರವಿದ್ದು, ಇದಕ್ಕೆ ಅಕ್ಕರೆ ಕೊಟ್ಟಿಯೂರು ಮತ್ತು ಇಕ್ಕರೆ ಕೊಟ್ಟಿಯೂರು ಎನ್ನುವ ಹೆಸರಿನಲ್ಲಿ ಕರೆಯಲಾಗುತ್ತದೆ. ನದಿಯ ಪೂರ್ವ ತಟದಲ್ಲಿರುವ ಕ್ಷೇತ್ರವನ್ನು ಕೇಳಕೇಶ್ವರ ಕ್ಷೇತ್ರ ಅಥವಾ ಅಕ್ಕರೆ ಕೊಟ್ಟಿಯೂರು ಎಂದೂ ಪಶ್ವಿಮ ಪಾಶ್ರ್ವದಲ್ಲಿರುವ ಕ್ಷೇತ್ರವನ್ನು ವಡಕೇಶ್ವರ ಅಥವಾ ಇಕ್ಕರೆ ಕೊಟ್ಟಿಯೂರು ಎಂದು ಆ ಭಾಗದ ಜನ ಕರೆಯುತ್ತಾರೆ.
27 ದಿನಗಳು ಮಾತ್ರ ಭಕ್ತರ ಭೇಟಿ
ವಡಕೇಶ್ವರ ಅಥವಾ ಇಕ್ಕರೆ ಕೊಟ್ಟಿಯೂರು ಕ್ಷೇತ್ರ ಸಾಮಾನ್ಯ ಕ್ಷೇತ್ರಗಳಂತೆ ಶಾಶ್ವತ ರಚನೆಯ ಕ್ಷೇತ್ರವಾಗಿದ್ದು, ಈ ಕ್ಷೇತ್ರಕ್ಕೆ ವರ್ಷದಲ್ಲಿ 27 ದಿನಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ದಿನಗಳಲ್ಲೂ ಈ ಕ್ಷೇತ್ರಕ್ಕೆ ಭಕ್ತಾಧಿಗಳ ಭೇಟಿಗೆ ಅವಕಾಶವಿದೆ. ಆದರೆ ಅಕ್ಕರೆ ಕೊಟ್ಟಿಯೂರು ಅಥವಾ ಕೇಳಕೇಶ್ವರ ಕ್ಷೇತ್ರ ವರ್ಷದಲ್ಲಿ ಕೇವಲ 27 ದಿನಗಳು ಮಾತ್ರ ಭಕ್ತರ ಭೇಟಿಗೆ ತೆರೆದಿರುವ ಕ್ಷೇತ್ರವಾಗಿದೆ. ಹಳೆಯ ಸಂಪ್ರದಾಯದಂತೆಯೇ ಇಲ್ಲಿ ಆಚರಣೆಗಳು ನಡೆಯುತ್ತಿದ್ದು, ಇಲ್ಲಿ ತೆಂಗಿನ ಗರಿಗಳಿಂದ ತಯಾರಿಸಿದ ಜೋಪಡಿಗಳಂತಹ ರಚನೆಗಳು ಇಲ್ಲಿದ್ದು, ವೈಶಾಖ ಮಾಸದ ದಿನಗಳಷ್ಟೇ ಈ ಕ್ಷೇತ್ರ ಭಕ್ತರಿಗೆ ತೆರೆದಿರುತ್ತದೆ. ಬಳಿಕದ ದಿನಗಳಲ್ಲಿ ಈ ಅರಣ್ಯದೊಳಗೆ ಜನರ ಸಂಚಾರಕ್ಕೆ ಸಂಪೂರ್ಣ ನಿಷೇಧವೂ ಇದೆ.
ಆನೆಯ ಮೇಲೆ ಪ್ರದಕ್ಷಿಣೆ
ಸತಿಯು ಇಲ್ಲಿ ಬೆಂಕಿಗೆ ಹಾರಿ ದೇಹತ್ಯಾಗ ಮಾಡಿದ್ದಾಳೆ ಎನ್ನುವ ನಂಬಿಕೆ ಭಕ್ತರದ್ದಾಗಿದ್ದು, ಸತಿಯು ಕುಳಿತ ಪೀಠದಂತಹ ಜಾಗ ಇಲ್ಲಿ ಇಂದಿಗೂ ಕಾಣಸಿಗುತ್ತದೆ. ದಟ್ಟ ಅರಣ್ಯ ಮತ್ತು ನದಿಯ ತಟದಲ್ಲಿರುವ ಕಾರಣ ಈ ಕ್ಷೇತ್ರದ ಸುತ್ತಲೂ ನೀರು ಆವರಿಸಿದ್ದು, ಇಲ್ಲಿನ ಶಿವ ಪಾರ್ವತಿಯ ಮೂರ್ತಿಯನ್ನು ಈ ಕ್ಷೇತ್ರದ ಸುತ್ತಲೂ ಆನೆಯ ಮೇಲೆ ಪ್ರದಕ್ಷಿಣೆ ಮಾಡಲಾಗುತ್ತಿದ್ದು, ಇದುವೇ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.
ಹರಿಯುವ ನದಿಯಲ್ಲಿ ಸಿಗುವ ವಿಶಿಷ್ಟ ಕಲ್ಲುಗಳು
ಶುದ್ಧ ಚಿನ್ನ ಮತ್ತು ಅಪೂರ್ವ ಕಲ್ಲುಗಳ ಸಂಗ್ರಹವೂ ಇಲ್ಲಿದ್ದು, ಇಲ್ಲಿ ಸಿಗುವ ಚಿನ್ನ ಮತ್ತು ಕಲ್ಲುಗಳನ್ನು ಇಕ್ಕರೆ ಕೊಟ್ಟಿಯೂರಿನ ಕೊಠಡಿಯಲ್ಲಿ ಭದ್ರವಾಗಿ ಇಡಲಾಗಿದೆ ಎನ್ನಲಾಗಿದೆ. ಇವುಗಳು ಅತ್ಯಂತ ಬೆಲೆಬಾಳುವ ಕಾರಣದಿಂದಾಗಿಯೇ ಈ ಕ್ಷೇತ್ರವು ಅತ್ಯಂತ ಶ್ರೀಮಂತ ಕ್ಷೇತ್ರವೆಂದು ಹೆಸರುವಾಸಿಯಾಗಿದೆ.ಇಲ್ಲಿ ಹರಿಯುವ ನದಿಯಲ್ಲಿ ಸಿಗುವ ಕಲ್ಲುಗಳು ವಿಶಿಷ್ಟ ಗುಣಧರ್ಮವನ್ನು ಹೊಂದಿದ್ದು, ಈ ಕಲ್ಲನ್ನು ಉಜ್ಜಿದಲ್ಲಿ ಅದು ಶ್ರೀಗಂಧದ ಪರಿಮಳವನ್ನು ಸೂಸುತ್ತದೆ ಎನ್ನಲಾಗುತ್ತಿದ್ದು, ಈ ಕ್ಷೇತ್ರಕ್ಕೆ ಬರುವ ಜನ ಇಲ್ಲಿನ ಕಲ್ಲುಗಳನ್ನೂ ದೇವತಾರೂಪದಲ್ಲಿ ಪೂಜಿಸುತ್ತಾರೆ.
June 26, 2025 10:57 AM IST