Last Updated:
ತುಳುನಾಡಿನಲ್ಲಿ ಆಷಾಢ ಮಾಸದ ಆಚರಣೆ ಜೂನ್ 25 ರಿಂದ ಜುಲೈ 24 ರವರೆಗೆ ನಡೆಯುತ್ತದೆ. ಈ ತಿಂಗಳಲ್ಲಿ ವಿಶೇಷ ಸೊಪ್ಪುಗಳನ್ನು ತಿನ್ನುವುದು, ಆಟಿ ಕಳಂಜ, ಆಟಿ ಅಮಾವಾಸ್ಯೆಯಂದು ಕಷಾಯ ಕುಡಿಯೋದು ಮುಂತಾದ ಸಂಪ್ರದಾಯಗಳು ಪ್ರಚಲಿತ.
ದಕ್ಷಿಣ ಕನ್ನಡ: ಉಡುಪಿ, ದಕ್ಷಿಣ ಕನ್ನಡ (Dakshina Kannada) ಮತ್ತು ಕಾಸರಗೋಡನ್ನು ಒಳಗೊಂಡಂತೆ ಕರೆಯಲಾಗುವ ತುಳುನಾಡಿನಲ್ಲಿ ಆಷಾಢ (Ashada) ಮಾಸದ ಆಚರಣೆ ಆರಂಭಗೊಂಡಿದೆ. ಜೂನ್ 25 ರಿಂದ ಜುಲೈ 24 ರವರೆಗೆ ಈ ಆಷಾಢ ಮಾಸ ಆಚರಣೆಯಲ್ಲಿದ್ದು, ಈ ತಿಂಗಳಲ್ಲಿ ತುಳುನಾಡಿನಲ್ಲಿ ವಿಶಿಷ್ಟ ಸಂಪ್ರದಾಯಗಳ ಆಚರಣೆಯೂ ನಡೆಯುತ್ತದೆ. ಅಲ್ಲದೆ ಈ ತಿಂಗಳಲ್ಲಿ ಪ್ರಕೃತಿಯಲ್ಲಿ ಸಿಗುವ ಸೊಪ್ಪುಗಳನ್ನು ತಿನ್ನುವುದು, ಆಟಿ ಕಳಂಜ, ಆಟಿ (Aati) ಅಮಾವಾಸ್ಯೆಯಂದು ಹಾಳೆ ಮರದ ತೊಗಟೆಯಿಂದ ತಯಾರಿಸಿದ ಕಷಾಯ ಕುಡಿಯೋದು ಹೀಗೆಲ್ಲಾ ನಡೆಯುತ್ತದೆ.
ಆಟಿಗೆ ಶುರುವಾಯ್ತು ವಿಧವಿಧದ ಪಾಕ
ಆಟಿ ಮಾಸದಲ್ಲಿ ಎಲ್ಲಾ ತುಳುವರು ಒಂದು ಬಾರಿ ತಜಂಕ್, ಕೆಸು, ಬಿದಿರಿನ ಕಣಿಲೆ ಮೊದಲಾದ ಸೊಪ್ಪುಗಳನ್ನು ಬಳಸಿ ತಯಾರಿಸಿದ ಖಾದ್ಯಗಳನ್ನು ತಿನ್ನುತ್ತಾರೆ. ಕೆಸು ಎಲೆಗಳನ್ನು ಬಳಸಿ ತಯಾರಿಸುವ ಪತ್ರೊಡೆ ಆಟಿಯ ಸ್ಪೆಷಲ್ ತಿನಿಸೂ ಕೂಡಾ ಆಗಿದೆ. ಅಲ್ಲದೆ ತಜಂಕ್ ಸೊಪ್ಪಿನ ಪಲ್ಯವನ್ನೂ ತಯಾರಿಸಿ ತಿನ್ನಲಾಗುತ್ತದೆ.
ನಿಸರ್ಗದ ಬಳುವಳಿ ದೇಹಕ್ಕೆ ಹಿತ ನೀಡೋ ಸೊಪ್ಪುಗಳು
ಆಷಾಢ ಮಾಸದಲ್ಲಿ ಎಡೆಬಿಡದೆ ಮಳೆ ಇರುವ ಕಾರಣ ಈ ತಿಂಗಳಲ್ಲಿ ಶುಭ ಕಾರ್ಯಗಳಿಗೂ ನಿಷಿದ್ಧವಾಗಿದೆ. ಆಷಾಢದಲ್ಲಿ ಸುರಿಯುವ ಮಳೆಗೆ ಮನುಷ್ಯನ ದೇಹದ ಉಷ್ಣಾಂಶ ಇಳಿಕೆಯಾಗಿ ದೇಹವು ಶೀತಮಯವಾಗುತ್ತದೆ. ಈ ಕಾರಣಕ್ಕಾಗಿ ಪ್ರಕೃತಿಯಲ್ಲಿ ಸಿಗುವ ಸೊಪ್ಪುಗಳನ್ನು ತಿನ್ನೋದು ಆರೋಗ್ಯಕ್ಕೆ ಉತ್ತಮ ಎನ್ನುವ ನಂಬಿಕೆ ಹಿನ್ನಲೆಯಲ್ಲಿ ಈ ವ್ಯವಸ್ಥೆಗಳು ಆಷಾಢ ಮಾಸದಲ್ಲಿ ಆಚರಿಸಲ್ಪಡುತ್ತವೆ.
ನಂಬಿಕೆಯೊಡನೆ ಬೆಸೆದುಕೊಂಡ ಹಿರಿಯರ ತಿಳುವಳಿಕೆ
ಆಷಾಢ ಅಥವಾ ತುಳುವಿನಲ್ಲಿ ಆಟಿ ತಿಂಗಳು ಎಂದು ಕರೆಯಲಾಗುವ ಈ ಮಾಸದಲ್ಲಿ ಕೃಷಿ ಚಟುವಟಿಕೆಗಳು ಆರಂಭಗೊಳ್ಳುವ ಹಿನ್ನಲೆಯಲ್ಲಿ ಶುಭ ಸಮಾರಂಭಗಳನ್ನು ಮಾಡುವಂತಿಲ್ಲ. ಹಾಗೆ ಮಾಡಿದಲ್ಲಿ ಕೃಷಿ ಚಟುವಟಿಕೆಗಳಿಗೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ ಈ ರೀತಿಯ ನಿಷಿದ್ಧವನ್ನು ಹೇರಲಾಗಿದೆ ಎಂಬುದು ಪ್ರಾಚೀನ ನಂಬಿಕೆ. ಜುಲೈ 24 ರ ಬಳಿಕ ಶ್ರಾವಣ ಮಾಸ ಆರಂಭಗೊಂಡ ಬಳಿಕ ಮತ್ತೆ ತುಳುನಾಡಿನಲ್ಲಿ ಹಬ್ಬಗಳ ಸಾಲುಸಾಲಾಗಿ ಆರಂಭಗೊಳ್ಳುತ್ತದೆ.
Dakshina Kannada,Karnataka
June 26, 2025 1:45 PM IST