Last Updated:
ಬಾಕ್ರಬೈಲು ಧರ್ಮಚಾವಡಿ, ಮಂಜೇಶ್ವರ ಪಾತೂರು ಗ್ರಾಮದಲ್ಲಿ 990 ವರ್ಷಗಳ ಇತಿಹಾಸ ಹೊಂದಿರುವ ಮನೆ, ಶ್ರೀ ತ್ರಿಪುರಸುಂದರಿ, ಮಲರಾಯ, ಜುಮಾದಿ ಬಂಟ ದೈವಗಳ ಸಾನಿಧ್ಯದಿಂದ ಪ್ರಸಿದ್ಧ.
ಮಂಗಳೂರು: ಪಂಚವರ್ಣದ ಬೀಡು, ಬೆರ್ಮೆರ್ ನಾಡು (Almighty) ದಕ್ಷಿಣ ಕನ್ನಡದ ಧರ್ಮ-ಆಚಾರ-ಸಂಸ್ಕೃತಿ ಉಚ್ಛ್ರಾಯ ಪರಂಪರೆಯನ್ನು (Heritage) ಹೊಂದಿದೆ. ಹಿಂದೆ ದೇಗುಲಗಳಿಗಿಂತ (Temple) ಜಾಸ್ತಿ ನೇಮ, ಕೊಲ, ನಿತ್ಯಗಳನ್ನು ದೈವಗಳ ಮಣಿ, ಮಂಚ, ಮೊಗ, ಕಡ್ತಲೆ ಇರುವ ಮನೆಗಳಲ್ಲಿ (House) ಅಥವಾ ಗುತ್ತುಗಳಲ್ಲಿ ಮಾಡಲಾಗುತ್ತಿತ್ತು. ಈಗಲೂ ಅದೇ ಸಂಪ್ರದಾಯವಿದೆ. ಈಗೆಲ್ಲಾ ಗುತ್ತುಗಳು ಆಕಾರ ಕಳೆದುಕೊಂಡು ನವೀಕರಣದ ಹೆಸರಲ್ಲಿ ಟೈಲ್ಸ್, ಸಿಮೆಂಟ್ ಬಳಿದುಕೊಳ್ಳುತ್ತಿವೆ. ಆದರೆ ಈ ಗುತ್ತು ವಿಭಿನ್ನ, ವಿಶಿಷ್ಟ. ನಿಮಗೆ ಸಾವಿರ ವರ್ಷಗಳ ಹಿಂದೆ ಮನೆಗಳು ಹೇಗಿರುತ್ತಿದ್ದವು ಎಂದು ತಿಳಿಯಬೇಕಿದ್ದರೆ ಇಲ್ಲಿ ಬರಲೇಬೇಕು!
4 ಶತಮಾನಗಳಿಗೂ ಪ್ರಾಚೀನವಾದ ಗುತ್ತು ಇದು. ಅಂದರೆ 20ಕ್ಕೂ ಹೆಚ್ಚು ತಲೆಮಾರುಗಳು ಬದುಕಿದ ಮನೆಯಿದು. ಚಾವಡಿಯಲ್ಲಿ ಕೆತ್ತಿರುವ ಲಿಪಿಯಲ್ಲಿ ಕಲಿಸಂದ 4133 ಅಂದರೆ 990 ವರ್ಷದಷ್ಟು ಪ್ರಾಚೀನವಾದ ಧರ್ಮಚಾವಡಿ ಎಂಬ ಉಲ್ಲೇಖವಿದೆ. ಚಾವಡಿಯ ವಾಸ್ತುಶಿಲ್ಪದ ಶೈಲಿ, ದೈತ್ಯ ಕಂಬಗಳು, ಪ್ರಾಚೀನ ಪೀಠೋಪಕರಣಗಳು, ತಿಜೋರಿಗಳು, ಪಟ್ಟದ ಕತ್ತಿ, ಮನೆಯ ವಿನ್ಯಾಸ ನಮ್ಮನ್ನು ಹಳೆಯ ಕಾಲದ ಜನಜೀವನವನ್ನು ಪರಿಚಯಿಸುತ್ತದೆ. ಮುಳಿ ಹುಲ್ಲಿನ ಮೇಲ್ಚಾವಣಿಯಿಂದ ಕೂಡಿದ್ದ ಮನೆಗೆ 150 ವರ್ಷಗಳ ಹಿಂದೆ ಹಂಚು ಹಾಕಲಾಗಿದೆ. ಜತೆಗೆ ಸಣ್ಣಪುಟ್ಟ ನವೀಕರಣ ಬಿಟ್ಟರೆ ಹಿಂದಿನ ಶೈಲಿಯಲ್ಲಿಯೇ ಧರ್ಮಚಾವಡಿಯಿದೆ.
ಮಂಗಳೂರು ನಗರದಿಂದ 30 ಕಿ.ಮೀ. ಅಂತರ… ಮುಡಿಪು – ವಿಟ್ಲ ರಸ್ತೆಯ, ಕೇರಳ – ಕರ್ನಾಟಕ ಗಡಿ ಪ್ರದೇಶ… ಕಾಸರಗೋಡು ಜಿಲ್ಲೆಯ, ಮಂಜೇಶ್ವರದ ಪಾತೂರು ಗ್ರಾಮದಲ್ಲಿ ನಿಸರ್ಗ ಸುಂದರ, ಭತ್ತದ ಗದ್ದೆಗಳ ತೆಂಗು ಕಂಗು ತೋಟಗಳ ರಮಣೀಯ ದೃಶ್ಯ ಸಾನಿಧ್ಯದಲ್ಲಿ ಪ್ರಜ್ವಲಿಸುತ್ತಿರುವ ಬಾಕ್ರಬೈಲು ಧರ್ಮಚಾವಡಿ… ಒಂದು ಕಾಲದಲ್ಲಿ ನಿತ್ಯ ಧರ್ಮ ದಾನ ನಡೆಯುತ್ತಿದ್ದ, ಸುಮಾರು 990 ವರ್ಷಗಳ ಹಳೆಯದಾದ ಧರ್ಮಚಾವಡಿಯ ಮನೆ ಈಗಲೂ ದೈವಿಕ ಶಕ್ತಿಯ ನೆಲೆವೀಡಾಗಿದೆ….
ಕಾರಣೀಕದ ಶ್ರೀ ತ್ರಿಪುರಸುಂದರಿ, ಶ್ರೀ ಮಲರಾಯ, ಜುಮಾದಿ ಬಂಟ, ಪಿಲಿಚಾಮುಂಡಿ ದೈವಗಳ ಸಾನಿಧ್ಯವಿರುವ ಈ ಜಾಗ ಕೇವಲ ಮನೆಯಲ್ಲ. 990 ವರ್ಷದ ಇತಿಹಾಸವಿದ್ದು ಹಲವು ಧರ್ಮ ಕಾರ್ಯಗಳು ನಡೆದ ಪುಣ್ಯದ ಮಣ್ಣು… ಬಾಕ್ರಬೈಲು ದೇಯ್ಯಮ್ಮನ ಮಗ ಮಂಜಣ್ಣ ಆಳ್ವರು ಕಟ್ಟಿದ ಮನೆ ಎನ್ನುವ ಬರಹವನ್ನು ಈ ಮನೆಯ ಮುಂದಿನ ಮರದ ಪಕ್ಕಾಸಿನಲ್ಲಿ ಕೆತ್ತಲಾಗಿದೆ. ಹಳೆಗನ್ನಡದಲ್ಲಿ ಈ ಮಾಹಿತಿಯನ್ನು ಬರೆಯಲಾಗಿದೆ. ಈ ಹಿಂದೆ ಗ್ರಾಮದ ಜನ ಈ ಮನೆಗೆ ಬಂದು ಸತ್ಯಪ್ರಮಾಣ, ಪಂಚಾಯಿತಿಗಳಲ್ಲಿ ನ್ಯಾಯ ತೀರ್ಮಾನ ನಡೆಯುತ್ತಿದ್ದ ಜಾಗವಿದು.
990 ವರ್ಷಗಳಾದರೂ ಮನೆಯ ಶೈಲಿ ಗಮನಸೆಳೆಯುತ್ತಿದೆ. ಕಾರಣೀಕದ ಶಕ್ತಿಗಳಾದ ಶ್ರೀ ಮಲರಾಯ, ಜುಮಾದಿ ಬಂಟ, ಪಿಲಿಚಾಮುಂಡಿ ದೈವಗಳ ಸಾನಿಧ್ಯಕ್ಕೆ ಸಂಕ್ರಾಂತಿ, ಮಂಗಳವಾರದ ಸೇವೆ ಸೇರಿದಂತೆ ನಾನಾ ಸಂದರ್ಭಗಳಲ್ಲಿ ದೈವಕ್ಕೆ ಪೂಜಾ ಕಾರ್ಯಕ್ರಮಗಳು ನಡೆಯುತ್ತದೆ. ಕಳೆದ ಹಲವು ವರ್ಷಗಳಿಂದ ನಿಂತು ಹೋಗಿದ್ದ ಪುದ್ವಾರ್ ಮೆಚ್ಚಿ ನೆಮೋತ್ಸವ ನವೆಂಬರ್ 21ರಂದು ಬಾಕ್ರಬೈಲು ಧರ್ಮಚಾವಡಿಯಲ್ಲಿ ನಡೆಯಲಿದೆ.
ಬಾಕ್ರಬೈಲು ಚಾವಡಿ ಹೆಸರು ಹೇಳಬೇಕೆಂದರೂ ಧರ್ಮದಲ್ಲಿರಬೇಕಂತೆ…
ತುಳುನಾಡು ಎಂದಾಕ್ಷಣಾ ದೈವಗಳ ನೆಲೆವೀಡು. ಆದರೆ ಗುತ್ತು ಹಾಗೂ ಧರ್ಮಚಾವಡಿ ಮನೆಗಳು ಆಧುನಿಕತೆಯ ಭರಾಟೆಯಲ್ಲಿ ಪ್ರಾಚೀನತೆಯನ್ನು ಕಳೆದುಕೊಳ್ಳುತ್ತಿದ್ದರೂ ಕಳೆದ 990 ವರ್ಷಗಳಿಂದ ಪ್ರಾಚೀನ ಗತ ವೈಭವವನ್ನು ಸಾರುತ್ತಿರುವ ಬಾಕ್ರಬೈಲು ಧರ್ಮಚಾವಡಿ ಮನೆ ಮಾದರಿಯಾಗುವುದರ ಜತೆ ಕಾರಣೀಕತೆಗೆ ಸಾಕ್ಷಿಯಾಗಿದೆ…
Dakshina Kannada,Karnataka
October 11, 2025 6:49 PM IST