Last Updated:
ಅಫ್ಘಾನಿಸ್ತಾನದ ಪಕ್ತಿಕಾದಲ್ಲಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಮೂವರು ಯುವ ಅಫ್ಘಾನ್ ಕ್ರಿಕೆಟಿಗರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಂತಾಪ ಸೂಚಿಸಿದೆ.
ಅಫ್ಘಾನಿಸ್ತಾನ (Afghanistan)ದ ಪಕ್ತಿಕಾದಲ್ಲಿ ಪಾಕಿಸ್ತಾನ ವೈಮಾನಿಕ ದಾಳಿ (Airstrike) ನಡೆಸಿತು. ಈ ದಾಳಿಯಲ್ಲಿ ಮೂವರು ಯುವ ಅಫ್ಘಾನ್ ಕ್ರಿಕೆಟಿಗರು (Afghan cricketers) ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂವರು ಕ್ರಿಕೆಟಿಗರ ಸಾವಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಂತಾಪ ಸೂಚಿಸಿ ಹೇಳಿಕೆ ನೀಡಿದೆ. ಮೃತರ ಕುಟುಂಬಗಳಿಗೆ ಬಿಸಿಸಿಐ (BCCI) ತನ್ನ ಸಂತಾಪವನ್ನು ವ್ಯಕ್ತಪಡಿಸಿದ್ದು, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗೆ ನಿಲ್ಲುವ ಬಗ್ಗೆ ತಿಳಿಸಿದೆ. ಅಲ್ಲದೆ, ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯನ್ನು “ಹೇಡಿತನದ ದಾಳಿ” ಎಂದು ಖಂಡಿಸಿದೆ.
ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸಂತಾಪ ಸೂಚಿಸಿದೆ. “ಪಕ್ತಿಕಾ ಪ್ರಾಂತ್ಯದಲ್ಲಿ ಗಡಿಯಾಚೆಯಿಂದ ನಡೆದ ಹೇಡಿತನದ ವಾಯುದಾಳಿಯಲ್ಲಿ ಪ್ರಾಣ ಕಳೆದುಕೊಂಡ ಮೂವರು ಯುವ ಅಫ್ಘಾನ್ ಕ್ರಿಕೆಟಿಗರಾದ ಕಬೀರ್ ಅಘಾ, ಸಿಬ್ಘತುಲ್ಲಾ ಮತ್ತು ಹರೂನ್ ಅವರ ದುರಂತ ಸಾವಿಗೆ ಬಿಸಿಸಿಐ ತನ್ನ ತೀವ್ರ ದುಃಖ ಮತ್ತು ಸಂತಾಪವನ್ನು ವ್ಯಕ್ತಪಡಿಸುತ್ತದೆ” ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.
“ಈ ಆಳವಾದ ದುಃಖದ ಸಮಯದಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ, ಕ್ರಿಕೆಟ್ ಸಮುದಾಯ ಮತ್ತು ಮೃತ ಆಟಗಾರರ ಕುಟುಂಬಗಳೊಂದಿಗೆ ಬಿಸಿಸಿಐ ಒಗ್ಗಟ್ಟಿನಿಂದ ನಿಲ್ಲುತ್ತದೆ” ಎಂದು ಬಿಸಿಸಿಐ ಹೇಳಿದೆ.
ಪಾಕಿಸ್ತಾನದ ಹೇಡಿತನದ ಕೃತ್ಯವನ್ನು ಬಿಸಿಸಿಐ ಖಂಡಿಸಿದೆ. “ಈ ಭಯಾನಕ ಮತ್ತು ನ್ಯಾಯಸಮ್ಮತವಲ್ಲದ ದಾಳಿಯನ್ನು ಮಂಡಳಿ ಖಂಡಿಸುತ್ತದೆ. ಅಮಾಯಕರ ಜೀವಗಳು, ವಿಶೇಷವಾಗಿ ಭರವಸೆಯ ಆಟಗಾರರ ಸಾವು ತೀವ್ರ ದುಃಖಕರ ಮತ್ತು ಕಳವಳಕಾರಿಯಾಗಿದೆ.
ಬಿಸಿಸಿಐ ಅಫ್ಘಾನಿಸ್ತಾನದ ಜನರಿಗೆ ತನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಅವರ ದುಃಖ ಮತ್ತು ನಷ್ಟವನ್ನು ಹಂಚಿಕೊಳ್ಳುತ್ತದೆ” ಎಂದು ಬಿಸಿಸಿಐ ಹೇಳಿದೆ. ಐಸಿಸಿ ಮೂವರು ಯುವ ಅಫ್ಘಾನ್ ಕ್ರಿಕೆಟಿಗರ ಸಾವನ್ನು ಖಂಡಿಸಿ ಈ ಕಷ್ಟದ ಸಮಯದಲ್ಲಿ ಎಸಿಬಿಗೆ ತನ್ನ ಬೆಂಬಲವನ್ನು ಘೋಷಿಸಿದ ಕೆಲವೇ ನಿಮಿಷಗಳ ನಂತರ ಬಿಸಿಸಿಐನಿಂದ ಈ ಹೇಳಿಕೆ ಬಂದಿದೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಮಿಲಿಟರಿ ಸಂಘರ್ಷ ಮುಂದುವರೆದಿದೆ. ಪಾಕಿಸ್ತಾನವು ಅಫ್ಘಾನಿಸ್ತಾನದಲ್ಲಿ ವೈಮಾನಿಕ ದಾಳಿ ನಡೆಸಿ ಮೂವರು ಅಫ್ಘಾನ್ ಆಟಗಾರರನ್ನು ಕೊಂದಿತು. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಇದನ್ನು ದೃಢಪಡಿಸಿತು. ಇದಾದ ನಂತರ ಮುಂಬರುವ ಪಾಕಿಸ್ತಾನ ವಿರುದ್ಧದ ತ್ರಿಕೋನ ಸರಣಿಯಲ್ಲಿ ಭಾಗವಹಿಸದಿರಲು ಅಫ್ಘಾನಿಸ್ತಾನ ನಿರ್ಧರಿಸಿತು. ಪಾಕಿಸ್ತಾನ ದಾಳಿಯಲ್ಲಿ ಸಾವನ್ನಪ್ಪಿದ ಮೂವರು ಆಟಗಾರರು ಕ್ಲಬ್ ಮಟ್ಟದ ಕ್ರಿಕೆಟಿಗರಾಗಿದ್ದು, ಅವರು ಪಂದ್ಯದ ನಂತರ ಅರ್ಗುನ್ ಜಿಲ್ಲೆಗೆ ಹಿಂತಿರುಗುತ್ತಿದ್ದರು. ಈ ವೇಳೆ ವೈಮಾನಿಕ ಬಾಂಬ್ ದಾಳಿಗೆ ಮೂವರು ಬಲಿಯಾಗಿದ್ದಾರೆ.
ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ. “ಪಾಕಿಸ್ತಾನ ಹೇಡಿತನದ ದಾಳಿಗೆ ಗುರಿಯಾಗಿದ್ದ ಪಕ್ತಿಕಾ ಪ್ರಾಂತ್ಯದ ಉರ್ಗುನ್ ಜಿಲ್ಲೆಯ ಕ್ರಿಕೆಟಿಗರ ಹುತಾತ್ಮತೆಯ ಬಗ್ಗೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ತನ್ನ ತೀವ್ರ ದುಃಖವನ್ನು ವ್ಯಕ್ತಪಡಿಸುತ್ತದೆ.
ಈ ಹೃದಯವಿದ್ರಾವಕ ಘಟನೆಯಲ್ಲಿ, ಉರ್ಗುನ್ ಜಿಲ್ಲೆಯ ಮೂವರು ಆಟಗಾರರು (ಕಬೀರ್, ಸಿಬ್ಘತುಲ್ಲಾ ಮತ್ತು ಹರೂನ್) ಮತ್ತು ಇತರ ಐದು ದೇಶವಾಸಿಗಳು ಸಾವಿನ್ನಪಿದ್ದು, ಇತರ ಏಳು ಮಂದಿ ಗಾಯಗೊಂಡರು. ಈ ಆಟಗಾರರು ಪಕ್ತಿಕಾ ಪ್ರಾಂತ್ಯದ ರಾಜಧಾನಿ ಶರಣಾಗೆ ಫ್ರೆಂಡ್ಲಿ ಮ್ಯಾಚ್ ಆಡಲು ಹೋಗಿದ್ದರು. ಪಂದ್ಯ ಮುಗಿದ ಬಳಿಕ ಉರ್ಗುನ್ಗೆ ಹಿಂದಿರುಗುವ ಘಟನೆ ನಡೆದಿದೆ ಎಂದು ತಿಳಿಸಿದೆ.
October 18, 2025 10:19 PM IST