ಅನರ್ಹಗೊಂಡಿದ್ದ ಸದಸ್ಯನಿಗೆ ಒಲಿದ ಬೆಳಗಾವಿ ಮೇಯರ್ ಹುದ್ದೆ : ಮತ್ತೆ ಚುಕ್ಕಾಣಿ ಹಿಡಿದ ಬಿಜೆಪಿ – BELAGAVI MAYOR ELECTION
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯು ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಬಿಜೆಪಿ ಅಭ್ಯರ್ಥಿ ಮಂಗೇಶ ಪವಾರ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ 23ನೇ ಅವಧಿಗೆ ನಡೆದ ಚುನಾವಣೆಯಲ್ಲಿ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿಗಳಾದ ಮಂಗೇಶ ಪವಾರ ಹಾಗೂ ಉಪಮೇಯರ್ ಆಗಿ ವಾಣಿ ವಿಲಾಸ ಜೋಶಿ ಬಹುಮತದಿಂದ ಆಯ್ಕೆಯಾದರು.
ಮೇಯರ್ ಸ್ಥಾನ ಸಾಮಾನ್ಯ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. 40 ಸದಸ್ಯರನ್ನು ಹೊಂದಿರುವ ಬಿಜೆಪಿ ಮತ್ತೊಮ್ಮೆ ಪಾಲಿಕೆ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಯಿತು. ಮರಾಠಿಗರಾದ ಮಂಗೇಶ ಪವಾರ 41ನೇ ವಾರ್ಡ್ ಸದಸ್ಯರಾಗಿದ್ದು, ವೃತ್ತಿಯಲ್ಲಿ ನೇಕಾರಿಕೆ ಮಾಡುತ್ತಾರೆ. ಇನ್ನು ಕನ್ನಡತಿ ವಾಣಿ ಜೋಶಿ 43ನೇ ವಾರ್ಡಿನ ಸದಸ್ಯರಾಗಿದ್ದಾರೆ. ಕಳೆದ ಬಾರಿ ಉತ್ತರಕ್ಕೆ ಮೇಯರ್ ಮತ್ತು ದಕ್ಷಿಣಕ್ಕೆ ಉಪಮೇಯರ್ ಸ್ಥಾನ ನೀಡಲಾಗಿತ್ತು. ಆದರೆ, ಈ ಬಾರಿ ಎರಡೂ ಸ್ಥಾನಗಳು ದಕ್ಷಿಣ ವಿಧಾನಸಭಾ ಕ್ಷೇತ್ರದ ಪಾಲಾಗಿವೆ. ಈ ಮೂಲಕ ಶಾಸಕ ಅಭಯ್ ಪಾಟೀಲ ಬಿಗಿಹಿಡಿತ ಪಾಲಿಕೆಯಲ್ಲಿ ಮುಂದುವರೆದಿದೆ.
ಮಧ್ಯಾಹ್ನ 1 ಗಂಟೆಗೆ ಸರಿಯಾಗಿ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟೆನ್ನವರ ಚುನಾವಣಾ ಪ್ರಕ್ರಿಯೆ ಶುರು ಮಾಡಿದರು. ಮೇಯರ್ ಸ್ಥಾನಕ್ಕೆ ಬಿಜೆಪಿಯ ಮಂಗೇಶ ಪವಾರ್, ರಾಜು ಭಾತಖಾಂಡೆ, ಪಕ್ಷೇತರ ಅಭ್ಯರ್ಥಿ ಬಸವರಾಜ ಮೋದಗೇಕರ್, ಎಐಎಂಐಎಂನ ಶಾಹಿದ್ಖಾನ್ ಪಠಾಣ ತಲಾ 2 ನಾಮಪತ್ರ ಸಲ್ಲಿಸಿದರು. 2 ನಿಮಿಷ ಅವಕಾಶದ ಬಳಿಕ ರಾಜು ಭಾತಖಾಂಡೆ ಹಾಗೂ ಶಾಹಿದಖಾನ್ ಪಠಾಣ ತಮ್ಮ ನಾಮಪತ್ರ ಹಿಂಪಡೆದರು.

ಮಂಗೇಶ ಪರ 40 ಮತ : ನಂತರ, ಮಂಗೇಶ ಹಾಗೂ ಬಸವರಾಜ ಮಧ್ಯೆ ಚುನಾವಣೆ ನಡೆಯಿತು. ಮಂಗೇಶ ಪರವಾಗಿ 40, ವಿರುದ್ಧವಾಗಿ 5 ಮತಗಳು ಚಲಾವಣೆಯಾದವು. ತಟಸ್ಥವಾಗಿ ಇರುವ ಆಯ್ಕೆಗೆ ಯಾರೂ ಕೈ ಎತ್ತಲಿಲ್ಲ. ಇನ್ನು ಬಸವರಾಜ ಪರವಾಗಿ 20, ವಿರೋಧವಾಗಿ 40 ಮತಗಳು ಬಂದವು. ಹಾಗಾಗಿ, ಅತಿ ಹೆಚ್ಚು ಮತ ಪಡೆದ ಹಿನ್ನೆಲೆಯಲ್ಲಿ ಮಂಗೇಶ ಪವಾರ ಅವರನ್ನು ಮೇಯರ್ ಎಂದು ಚುನಾವಣಾ ಅಧಿಕಾರಿ ಘೋಷಿಸಿದರು.

ಅದೇ ರೀತಿ, ಉಪಮೇಯರ್ ಸ್ಥಾನಕ್ಕೆ ವಾಣಿ ವಿಲಾಸ ಜೋಶಿ, ದೀಪಾಲಿ ಟೋಪಗಿ, ಖುರ್ಷಿದ್ ಮುಲ್ಲಾ, ಲಕ್ಷ್ಮೀ ಲೋಕರಿ ತಲಾ 2 ನಾಮಪತ್ರ ಸಲ್ಲಿಸಿದರು. ಖುರ್ಷಿದ್ ಮುಲ್ಲಾ ಹಾಗೂ ದೀಪಾಲಿ ಉಮೇದುವಾರಿಕೆ ವಾಪಸ್ ಪಡೆದರು. ಅಂತಿಮವಾಗಿ, ಕಣದಲ್ಲಿ ಉಳಿದ ವಾಣಿ ಜೋಶಿ ಅವರಿಗೆ 40, ವಿರೋಧವಾಗಿ 19 ಮತಗಳು ಬಂದವು. ಇನ್ನು ಲಕ್ಷ್ಮೀ ಲೋಕರಿ ಪರವಾಗಿ 20, ವಿರೋಧವಾಗಿ 40 ಮತಗಳು ಬಂದವು. ಕೊನೆಗೆ ಹೆಚ್ಚು ಮತ ಪಡೆದ ವಾಣಿ ಅವರನ್ನು ಉಪಮೇಯರ್ ಎಂದು ಘೋಷಿಸಲಾಯಿತು. ಸಂಸದ ಜಗದೀಶ ಶೆಟ್ಟರ್, ಶಾಸಕ ಅಭಯ್ ಪಾಟೀಲ, ವಿಧಾನಪರಿಷತ್ ಸದಸ್ಯ ಸಾಬಣ್ಣ ತಳವಾರ, ಪಾಲಿಕೆ ಆಯುಕ್ತೆ ಶುಭ ಬಿ. ಇದ್ದರು.
ಚುನಾವಣೆ ಪ್ರಕ್ರಿಯೆಯಲ್ಲಿ ಒಟ್ಟು 65 ಮತದಾರ ಪೈಕಿ 60 ಮಂದಿ ಹಾಜರಿದ್ದರು. ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕ ಆಸಿಫ್ ಸೇಠ್, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಓರ್ವ ಪಾಲಿಕೆ ಸದಸ್ಯರು ಗೈರಾಗಿದ್ದು ಎದ್ದು ಕಾಣಿಸಿತು.
ಅನರ್ಹಗೊಂಡಿದ್ದ ಮಂಗೇಶ ಪವಾರ : ಮಹಾನಗರ ಪಾಲಿಕೆ ಸದಸ್ಯರಾದರೂ ಕೂಡ ಬೆಳಗಾವಿ ತಿನಿಸು ಕಟ್ಟೆಗಳಲ್ಲಿ ಮಳಿಗೆ ಪಡೆದಿರುವ ಹಿನ್ನೆಲೆಯಲ್ಲಿ ಮಂಗೇಶ ಪವಾರ ಹಾಗೂ ಜಯಂತ ಜಾಧವ್ ಅವರ ಮಹಾನಗರ ಪಾಲಿಕೆ ಸದಸ್ಯತ್ವವನ್ನು ಪ್ರಾದೇಶಿಕ ಆಯುಕ್ತರು ರದ್ದು ಮಾಡಿದ್ದರು. ಪಾಲಿಕೆಯಿಂದ ನಿರ್ಮಿಸಿದ ವಾಣಿಜ್ಯ ಮಳಿಗೆಗಳಲ್ಲಿ ಈ ಇಬ್ಬರೂ ತಮ್ಮ ಪತ್ನಿಯಂದಿರ ಹೆಸರಿನಲ್ಲಿ ಮಳಿಗೆ ಹೊಂದಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದನ್ನು ಆಧರಿಸಿ ಅನರ್ಹಗೊಳಿಸಲಾಗಿತ್ತು.
ಆದೇಶಕ್ಕೆ ತಡೆ ನೀಡಿದ್ದ ಹೈಕೋರ್ಟ್ : ಇದನ್ನು ಪ್ರಶ್ನಿಸಿ ನಗರಾಭಿವೃದ್ಧಿ ಇಲಾಖೆಯ ಅಯುಕ್ತರಿಗೆ ದೂರು ನೀಡಲಾಗಿತ್ತು. ಆದರೆ, ಅಲ್ಲಿಯೂ ಇಬ್ಬರ ಸದಸ್ಯತ್ವ ಅನೂರ್ಜಿತ ಮಾಡಲಾಗಿತ್ತು. ನಂತರ ಇಬ್ಬರೂ ಸದಸ್ಯರು ಹೈಕೋರ್ಟ್ ಮೊರೆ ಹೋದರು. ಅಧಿಕಾರಿಗಳ ಕ್ರಮಕ್ಕೆ ಚಾಟಿ ಬೀಸಿದ ಹೈಕೋರ್ಟ್, ಸದಸ್ಯತ್ವ ರದ್ದತಿಯ ಆದೇಶಕ್ಕೆ ತಡೆ ನೀಡಿತ್ತು. ಮೇಯರ್ ಚುನಾವಣೆ ಎರಡೇ ದಿನ ಬಾಕಿ ಇರುವಾಗ ಈ ಆದೇಶ ಹೊರಬಿದ್ದಿತ್ತು. ಅನರ್ಹಗೊಂಡಿದ್ದ ಮಂಗೇಶ ಅವರನ್ನೇ ಮೇಯರ್ ಮಾಡಬೇಕು. ಕಾಂಗ್ರೆಸ್ ಮಾತು ಕೇಳಿ ಅನರ್ಹಗೊಳಿಸಿದ ಅಧಿಕಾರಿಯಿಂದಲೇ ಮೇಯರ್ ಪ್ರಮಾಣ ಪತ್ರ ಕೊಡಿಸಬೇಕು ಎಂದು ಹಠಕ್ಕೆ ಬಿದ್ದಿದ್ದ ಶಾಸಕ ಅಭಯ ಪಾಟೀಲ, ಅದರಲ್ಲಿ ಕೊನೆಗೂ ಯಶಸ್ವಿಯಾದರು.
ಮಂಗೇಶ ಪವಾರ ಅವರ ಪತ್ನಿ ಪಾಲಿಕೆ ಚುನಾವಣೆಗೂ ಎರಡು ವರ್ಷ ಮೊದಲೇ ತಿನಿಸು ಕಟ್ಟೆಯಲ್ಲಿ ಮಳಿಗೆಯನ್ನು ಹರಾಜಿನಲ್ಲಿ ಪಡೆದಿದ್ದಾರೆ. ಅದು ವಾಣಿಜ್ಯ ಚಟುವಟಿಕೆ. ಲಾಭದಾಯಕ ಹುದ್ದೆ ಅಲ್ಲ ಎಂದು ನ್ಯಾಯಾಲಯದಲ್ಲಿ ಆರೋಪಿಗಳ ಪರ ವಕೀಲರು ವಾದ ಮಂಡಿಸಿದ್ದರು. ಹಾಗಾಗಿ, ಪ್ರಾದೇಶಿಕ ಆಯುಕ್ತರು ಅನರ್ಹಗೊಳಿಸಿದ್ದನ್ನು ನ್ಯಾಯಾಲಯ ರದ್ದು ಮಾಡಿತ್ತು. ಮಂಗೇಶ ಅವರನ್ನು ಅನರ್ಹಗೊಳಿಸಿದ್ದ ಪ್ರಾದೇಶಿಕ ಆಯಕ್ತ ಸಂಜಯ ಶೆಟ್ಟೆಣ್ಣವರ ಅವರೇ ಶನಿವಾರ ಅವರಿಗೆ ಮೇಯರ್ ಪ್ರಮಾಣ ಪತ್ರ ವಿತರಿಸಿದ್ದು ಗಮನ ಸೆಳೆಯಿತು.
ಪಾಲಿಕೆ ಸದಸ್ಯರಿಗೆ ಕೃತಜ್ಞತೆ : ಮಾಧ್ಯಮದವರ ಜೊತೆಗೆ ಮಾತನಾಡಿದ ನೂತನ ಮೇಯರ್ ಮಂಗೇಶ ಪವಾರ, ”ಶಾಸಕ ಅಭಯ್ ಪಾಟೀಲ, ಸಂಸದ ಜಗದೀಶ ಶೆಟ್ಟರ್, ಎಂಎಲ್ಸಿ ಸಾಬಣ್ಣ ತಳವಾರ ಹಾಗೂ ಎಲ್ಲಾ ನಮ್ಮ ಪಾಲಿಕೆ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಳಗಾವಿ ಮಹಾನಗರ ಅಭಿವೃದ್ಧಿಗೆ ಶ್ರಮಿಸುವೆ. ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ” ಎಂದರು.

ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ”ಚುನಾವಣೆ ಸಂದರ್ಭದಲ್ಲಿ ಸ್ಪರ್ಧೆ ಇರುತ್ತದೆ. ಚುನಾವಣೆ ಮುಗಿದ ಬಳಿಕ ಎಲ್ಲರೂ ಪರಸ್ಪರ ಸಹಕಾರ ಕೊಟ್ಟು ಬೆಳಗಾವಿ ಅಭಿವೃದ್ಧಿಗೆ ಕೆಲಸ ಮಾಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನೂತನ ಮೇಯರ್ ಮತ್ತು ಉಪ ಮೇಯರ್ ಅವರಿಗೆ ಶುಭಾಶಯ ಕೋರುತ್ತೇನೆ” ಎಂದು ತಿಳಿಸಿದರು.
ಶಾಸಕ ಅಭಯ್ ಪಾಟೀಲ ಮಾತನಾಡಿ, ”ಅಧಿಕಾರಿಗಳು ಜನಪ್ರತಿನಿಧಿಗಳು ಹೇಳಿದಂತೆ ಕೆಲಸ ಮಾಡಬೇಡಿ. ಕಾನೂನು ಅನುಸಾರ ಕರ್ತವ್ಯ ನಿರ್ವಹಿಸಬೇಕು. 58 ಸದಸ್ಯರು ಒಟ್ಟಾಗಿ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಮಂಗೇಶ ಪವಾರ ಅವರ ಪರವಾಗಿ ವಿರೋಧ ಪಕ್ಷದ 15 ಸದಸ್ಯರು ಕೂಡ ನಿಂತಿದ್ದಾರೆ. ಹಾಗಾಗಿ, ಜನಪ್ರಿಯತೆಯನ್ನು ಅಭಿವೃದ್ಧಿಗೆ ಬಳಸಿ” ಎಂದು ಕಿವಿಮಾತು ಹೇಳಿದರು.