Last Updated:
ಐಸಿಸಿ ಮಹಿಳಾ ವಿಶ್ವಕಪ್ 2025 ರ ಟೂರ್ನಿಯಲ್ಲಿ ಭಾರತ ವನಿತೆಯರ ತಂಡ ಚಾಂಪಿಯನ್ ಆಗುವ ಹೊಸ್ತಿಲಲ್ಲಿದ್ದು, ಇದರ ನಡುವೆ ಟೀಮ್ ಇಂಡಿಯಾ ಓಪನರ್ ಬ್ಯಾಟರ್ ಪ್ರತೀಕಾ ರಾವಲ್ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಭಾರತದಲ್ಲಿ ನಡೆಯುತ್ತಿರುವ ಐಸಿಸಿ (ICC) ಮಹಿಳಾ ವಿಶ್ವಕಪ್ (Womens World Cup) 2025 ರ ಟೂರ್ನಿ ಅಂತಿಮ ಹಂತ ತಲುಪಿದೆ. ನಾಲ್ಕು ತಂಡಗಳ ನಡುವೆ 2 ಸೆಮಿಫೈನಲ್ ಪಂದ್ಯಗಳು ನಡೆಯಲಿದೆ. ಭಾರತ (India), ಆಸ್ಟ್ರೇಲಿಯಾ (Australia), ಇಂಗ್ಲೆಂಡ್ (England) ಮತ್ತು ದಕ್ಷಿಣ ಆಫ್ರಿಕಾ (South Africa) ತಂಡಗಳು ಸೆಮಿಫೈನಲ್ (Semi-final) ಆಡಲು ಸಜ್ಜಾಗಿವೆ. ತವರಿನಲ್ಲಿ ಹರ್ಮನ್ಪ್ರೀತ್ ಕೌರ್ (Harmanpreet Kaur) ಮುನ್ನಡೆಸುತ್ತಿರುವ ಭಾರತ ವನಿತೆಯರ ತಂಡ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇದರ ನಡುವೆ ಭಾರತ ತಂಡಕ್ಕೆ ಆಘಾತ ಎದುರಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಮಹಿಳಾ ಏಕದಿನ ವಿಶ್ವಕಪ್ 2025 ರ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತ ತಂಡವು ದೊಡ್ಡ ಹಿನ್ನಡೆ ಅನುಭವಿಸಿದೆ. ಸ್ಟಾರ್ ಓಪನರ್ ಪ್ರತೀಕಾ ರಾವಲ್ ಗಾಯದ ಕಾರಣದಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ.
ನವಿ ಮುಂಬೈನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಅಂತಿಮ ಲೀಗ್ ಹಂತದ ಪಂದ್ಯದಲ್ಲಿ ಕ್ಯಾಚ್ ತೆಗೆದುಕೊಳ್ಳುವಾಗ ಪ್ರತೀಕಾ ಗಾಯಗೊಂಡಿದ್ದರು. ಇದರಿಂದಾಗಿ ಅವರು ಮೈದಾನದಿಂದ ಹೊರಹೋಗಬೇಕಾಗಿದೆ. ಅವರು ಬಿದ್ದು ಗಾಯಗೊಂಡ ರೀತಿ ನೋಡಿದರೆ ನಾಕೌಟ್ ಪಂದ್ಯಗಳಲ್ಲಿ ಆಡುವುದು ಅನುಮಾನ ಎನ್ನಲಾಗಿತ್ತು.
ಗಾಯಗೊಂಡಿದ್ದೇಗೆ?
ನವಿ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ಪಂದ್ಯ ಮಳೆಯಿಂದಾಗಿ ಫಲಿತಾಂಶರಹಿತವಾಗಿ ಕೊನೆಗೊಂಡಿತು. 27 ಓವರ್ಗಳಿಗೆ ಮೊಟಕುಗೊಳಿಸಲಾದ ಈ ಪಂದ್ಯದಲ್ಲಿ ಬಾಂಗ್ಲಾದೇಶ ಮೊದಲು ಬ್ಯಾಟ್ ಮಾಡಿ 9 ವಿಕೆಟ್ಗಳ ನಷ್ಟಕ್ಕೆ 119 ರನ್ಗಳಿಸಿತು . ಬಾಂಗ್ಲಾದೇಶ ತಂಡದ ಇನ್ನಿಂಗ್ಸ್ನ 21 ನೇ ಓವರ್ನಲ್ಲಿ ಪ್ರತೀಕಾ ರಾವಲ್ ಗಾಯಗೊಂಡರು.
ದೀಪ್ತಿ ಶರ್ಮಾ ಎಸೆತದಲ್ಲಿ ಶರ್ಮಿನ್ ಅಖ್ತರ್ ಮಿಡ್ವಿಕೆಟ್ ಕಡೆಗೆ ಚೆಂಡನ್ನು ಹೊಡೆದರು. ಚೆಂಡನ್ನು ತಡೆಯಲು ವೇಗವಆಗಿ ರಾವಲ್ ಓಡಿಹೋದರು. ಆದರೆ ಅವರ ಕಾಲು ಇದ್ದಕ್ಕಿದ್ದಂತೆ ಜಾರಿ ಮೊಣಕಾಲು ತಿರುಚಲ್ಪಟ್ಟಿತು. ರಾವಲ್ ನೋವಿನಿಂದ ನರಳುತ್ತಾ ನೆಲಕ್ಕೆ ಬಿದ್ದರು. ಇದಾದ ನಂತರ, ಅವರು ಫಿಸಿಯೋ ಸಹಾಯದಿಂದ ಮೈದಾನದಿಂದ ಹೊರಗೆ ಹೋದರು.
ಪ್ರತೀಕಾ ರಾವಲ್ ಭಾರತದ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಲು ಬರಲಿಲ್ಲ. ಅವರ ಸ್ಥಾನದಲ್ಲಿ, ಸ್ಮೃತಿ ಮಂಧಾನ ಅವರೊಂದಿಗೆ ಅಮನ್ಜೋತ್ ಕೌರ್ ಇನ್ನಿಂಗ್ಸ್ ತೆರೆದರು. ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. ಪರಿಣಾಮ ಭಾರತ 8.4 ಓವರ್ಗಳ ಕಾಲ ಬ್ಯಾಟಿಂಗ್ ಮಾಡಿತು. ಅಮನ್ಜೋತ್ ಅಜೇಯ 15 ರನ್ ಗಳಿಸಿದರೆ, ಸ್ಮೃತಿ ಮಂಧಾನ ಅಜೇಯ 34 ರನ್ ಗಳಿಸಿದರು.
ಪ್ರತೀಕಾ ಅವರು ಗಾಯಗೊಳ್ಳುವ ಮೊದಲು, ಟೀಮ್ ಇಂಡಿಯಾ ಮತ್ತೊಂದು ಸಮಸ್ಯೆಯನ್ನು ಎದುರಿಸಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಸಮಯದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ರಿಚಾ ಘೋಷ್ ಕೂಡ ಗಾಯಗೊಂಡಿದ್ದರು. ಈ ಕಾರಣದಿಂದಾಗಿ, ಬಾಂಗ್ಲಾದೇಶ ಪಂದ್ಯಕ್ಕೆ ಅವರಿಗೆ ವಿಶ್ರಾಂತಿ ನೀಡಲಾಯಿತು.
ಸೆಮಿಫೈನಲ್ ಪಂದ್ಯಕ್ಕೆ ರಿಚಾ ಲಭ್ಯರಿರುತ್ತಾರೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಪ್ರಸ್ತುತ ಯಾವುದೇ ಮಾಹಿತಿ ಇಲ್ಲ. ಗಾಯಗಳ ಸಮಸ್ಯೆಯಿಂದಾಗಿ ಸೆಮಿಫೈನಲ್ನಲ್ಲಿ ಬಲಿಷ್ಠ ಆಸೀಸ್ ತಂಡವನ್ನು ಟೀಮ್ ಇಂಡಿಯಾ ಎಷ್ಟರ ಮಟ್ಟಿಗೆ ಎದುರಿಸಬಲ್ಲದು ಎಂಬುದನ್ನು ಕಾದು ನೋಡಬೇಕಾಗಿದೆ.
October 27, 2025 5:50 PM IST