Last Updated:
ಸವಣೂರು ಸೀತಾರಾಮ ರೈ, ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ, ಸನ್ಮಾನದಲ್ಲಿ ಸಿಕ್ಕ ಪೇಟಗಳನ್ನು ಶೋಕೇಸ್ನಲ್ಲಿ ಅಂದವಾಗಿ ಜೋಡಿಸಿ ಇಟ್ಟುಕೊಂಡಿದ್ದಾರೆ.
ದಕ್ಷಿಣಕನ್ನಡ: ಆಗಸ್ಟ್ ತಿಂಗಳು (August) ಬಂತೆಂದರೆ ಸಾಕು ಸ್ವಾತಂತ್ರ್ಯ ದಿನಾಚರಣೆ, ಕೃಷ್ಣ ಜನ್ಮಾಷ್ಟಮಿ ಮುಂದುವರೆದು ಸಾರ್ವಜನಿಕ ಗಣೇಶೋತ್ಸವಗಳ ಸಹಿತ ಸಾಲು ಸಾಲು ಸಮಾರಂಭಗಳು ನಡೆಯುತ್ತವೆ. ಆ ಸಮಯದಲ್ಲಿ ಸಮಾಜದಲ್ಲಿ ಹಲವು ಸೇವೆಗಳ (Service) ಮೂಲಕ, ಸಾಧನೆಗಳ (Achieve) ಮೂಲಕ ಗಮನಸೆಳೆದವರಿಗೆ ಸಮಾಜ ಗುರುತಿಸಿ ಸನ್ಮಾನಿಸೋದು ಸಾಮಾನ್ಯ. ಸನ್ಮಾನ ಎಂದಾಕ್ಷಣ ಒಂದು ಮೈಸೂರು ಪೇಟ, ಹಣ್ಣು ಹಂಪಲು, ಶಾಲು ಎಲ್ಲಾ ಸೇರಿಕೊಂಡಿರುತ್ತದೆ. ಹೀಗೆ ಸನ್ಮಾನ ಸ್ವೀಕರಿಸಿದ ವ್ಯಕ್ತಿಗಳು ಹಣ್ಣುಹಂಪಲುಗಳನ್ನು ಉಪಯೋಗಿಸಿ, ಶಾಲನ್ನು ತನ್ನ ಇತರೆ ಕೆಲಸಗಳಿಗೆ (Work) ಬಳಸಿಕೊಳ್ಳುತ್ತಾರೆ. ಆದರೆ ಪೇಟವನ್ನು ಏನು ಮಾಡೋದು ಎಂದು ಚಿಂತಿಸಿ, ಬಳಿಕ ಅದನ್ನು ಮೂಲೆಗೆ ಎಸೆಯೋದೇ ಹೆಚ್ಚು. ಆದರೆ ಇಲ್ಲೊಬ್ಬರು ತಮಗೆ ಸಿಕ್ಕ ಸನ್ಮಾನದ ಪೇಟಗಳನ್ನೆಲ್ಲಾ ಅಚ್ಚುಕಟ್ಟಾಗಿ ಜೋಡಿಸಿ ಇಟ್ಟುಕೊಂಡಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರಿನ ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ, ಸಹಕಾರಿ ರತ್ನ ಪ್ರಶಸ್ತಿ ಪಡೆದಿರುವ ಸವಣೂರು ಸೀತಾರಾಮ ರೈ ತಮ್ಮನ್ನು ಗುರುತಿಸಿದವರನ್ನು ಗೌರವಿಸಿ ಅವರು ನೀಡಿದ ಪೇಟಗಳನ್ನು ಅಂದವಾಗಿ ಜೋಡಿಸಿಟ್ಟು ಪೇಟಕ್ಕೆ ಸಲ್ಲಬೇಕಾದ ಗೌರವವನ್ನು ನೀಡಿದ್ದಾರೆ. ತನ್ನ ಮನೆಯ ಕೋಣೆಯ ಒಂದು ಪಾರ್ಶ್ವವನ್ನು ಈ ಪೇಟಗಳ ಜೋಡಣೆಗಾಗಿಯೇ ಬಳಸಿಕೊಂಡಿದ್ದಾರೆ. ಪೇಟಗಳನ್ನು ಇಡಲೆಂದೇ ಒಂದು ಶೋಕೇಸ್ ಮಾಡಿಕೊಂಡಿರುವ ಸೀತಾರಾಮ ರೈಗಳು ತನಗೆ ಸಿಕ್ಕ ಗೌರವಕ್ಕೆ ತಕ್ಕ ಮನ್ನಣೆಯನ್ನೂ ನೀಡಿದ್ದಾರೆ.
ಶಿಕ್ಷಣ ಕ್ಷೇತ್ರ, ಧಾರ್ಮಿಕ ಕ್ಷೇತ್ರ, ಸಹಕಾರಿ ಕ್ಷೇತ್ರ ಹೀಗೆ ಎಲ್ಲಾ ಕ್ಷೇತ್ರಗಳನ್ನೂ ತಮ್ಮನ್ನು ಗುರುತಿಸಿಕೊಂಡಿರುವ ಸೀತಾರಾಮ ರೈಗಳಿಗೆ ವರ್ಷಪೂರ್ತಿ ಒಂದಲ್ಲ ಒಂದು ಕ್ಷೇತ್ರದಲ್ಲಿ ಸನ್ಮಾನ ನಡೆಯೋದು ಸಾಮಾನ್ಯ. ಹೀಗೆ ಸನ್ಮಾನದಲ್ಲಿ ಸಿಗುವ ಪೇಟವು ಯಾರಿಗೂ ಯಾವುದೇ ಪ್ರಯೋಜನಕ್ಕೆ ಬರೋದಿಲ್ಲ ಅನ್ನೋದು ಎಲ್ಲರಿಗೂ ತಿಳಿದ ಸತ್ಯ. ಆ ಕಾರಣಕ್ಕಾಗಿಯೇ ತಮಗೆ ಸಿಕ್ಕಿದ ಪೇಟಗಳನ್ನು ಡಂಪ್ ಮಾಡಿದವರ ಸಂಖ್ಯೆಯೇ ಹೆಚ್ಚು.
ಸರಳತೆಗೆ ಹೆಸರುವಾಸಿ ಸೀತಾರಾಮ್ ರೈ
ಸೀತಾರಾಮ ರೈ ಓರ್ವ ಉದ್ಯಮಿಯ ಜೊತೆಗೆ ಹಲವು ಸಾಮಾಜಿಕ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡವರು. ಅವರಿಗೆ ಸನ್ಮಾನ, ಗೌರವಗಳಿಗೆ ಕೊರತೆಯಿಲ್ಲದಿದ್ದರೂ, ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ಸಿಕ್ಕಿದ ಪೇಟಗಳಿಂದ ಹಿಡಿದು ದೊಡ್ಡ ಮಟ್ಟದ ಸನ್ಮಾನದಲ್ಲಿ ಸಿಕ್ಕಿದ ಪೇಟಗಳನ್ನೂ ಇವರು ಒಟ್ಟಿಗೆ ಜೋಡಿಸಿ ಇಡುವ ಮೂಲಕ ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ತೂಗಿ ಇಟ್ಟಿರೋದು ಮಾತ್ರ ಇವರ ಸಿಂಪ್ಲಿಸಿಟಿಗೆ ಒಂದು ಸಾಕ್ಷಿಯೂ ಆಗಿದೆ.
Dakshina Kannada,Karnataka
August 19, 2025 12:09 PM IST