Last Updated:
ಕನಿಷ್ಠ ಕೆರೆಗಳನ್ನಾದರೂ ಜೀವಂತವಾಗಿಟ್ಟುಕೊಂಡರೆ ಅಂತರ್ಜಲವನ್ನು ರಕ್ಷಿಸುವ ಕೆಲಸವಾಗಲಿದೆ. ಈ ನಿಟ್ಟಿನಲ್ಲಿ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಹುಟ್ಟಿಕೊಂಡ ಕೆರೆಗಳ ಚಿಂತನೆ ಭವಿಷ್ಯದ ದೃಷ್ಟಿಯಿಂದ ಅಮೂಲ್ಯವಾಗಿದೆ.
ದಕ್ಷಿಣ ಕನ್ನಡ: ಅಂತರ್ಜಲಕ್ಕೆ(Ground Water) ಜೀವ ತುಂಬುತ್ತಿದ್ದ ಕೆರೆಗಳು(Lakes) ಇಂದು ಕಣ್ಮರೆಯಾಗಿವೆ. ಹಾಗಾಗಿ ಭೂಮಿಯಲ್ಲಿನ(Earth) ನೀರಿನ ಮಟ್ಟ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಕೆಲ ವರ್ಷಗಳ ಹಿಂದೆ 150 ಫೀಟು ಅಡಿಯಲ್ಲಿ ಕೊಳವೆಬಾವಿಗಳಿಗೆ ಸಾಕಷ್ಟು ನೀರು ಸಿಗುತ್ತಿದ್ದ ದಿನಗಳು ಮರೆಯಾಗಿವೆ. 700 ಅಡಿಗಳು ಕೊರೆದರೂ ನೀರು ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿಯೇ ಮತ್ತೆ ಕೆರೆಗಳನ್ನು ಕಟ್ಟುವ ಕಾಯಕ ಆರಂಭವಾಗಿದೆ. ಉದ್ಯೋಗ ಖಾತರಿ ಯೋಜನೆ ಹಾಗೂ ಮತ್ತಿತರ ಯೋಜನೆಗಳ ಮೂಲಕ ಅವಿಭಜಿತ ಪುತ್ತೂರು ತಾಲೂಕಿನಲ್ಲಿ ಸುಮಾರು 20 ಕೆರೆಗಳ ಅಭಿವೃದ್ಧಿ ಮಾಡಲಾಗಿದೆ. ಭವಿಷ್ಯದ ಜನಾಂಗಕ್ಕೆ ನೀರು ಉಳಿಸುವ ಚಿಂತನೆಗೆ ಈ ಕೆರೆಗಳು ಸಾಕ್ಷಿಯಾಗಲಿವೆ.
ಒಂದು ಕಾಲದಲ್ಲಿ ಪ್ರತಿ ಮನೆಗೊಂದು ಕೆರೆ ಇತ್ತು. ಒಂದು ಗ್ರಾ.ಪಂ. ವ್ಯಾಪ್ತಿಯಲ್ಲಿ ಸರಿಸುಮಾರು 100 ಕ್ಕೂ ಹೆಚ್ಚು ಕೆರೆಗಳನ್ನು ಜೀವಂತವಾಗಿ ಕಾಣಬಹುದಿತ್ತು. ತಮ್ಮ ಭತ್ತದ ಕೃಷಿ ಹಾಗೂ ಅಡಿಕೆ ಕೃಷಿಗಳಿಗೆ ಈ ಕೆರೆಗಳಿಂದಲೇ ನೀರುಣಿಸುವ ಕೆಲಸ ನಡೆಯುತ್ತಿತ್ತು. ಮಳೆಗಾಲದಲ್ಲಿ ನೀರುಕ್ಕಿ ಹರಿಯುವ ಈ ಕೆರೆಗಳನ್ನು ನೋಡುವುದೇ ಖುಷಿಯ ವಿಚಾರವಾಗಿತ್ತು. ಗ್ರಾಮೀಣ ಭಾಗದಲ್ಲಿ ಕೆರೆಗಳಿಲ್ಲದ ರೈತರ ಮನೆಗಳನ್ನು ಕಾಣಲು ಸಾಧ್ಯವಿರಲಿಲ್ಲ. ಈ ಕೆರೆಗಳಿಂದ ಏತ ನೀರಾವರಿ ಪದ್ದತಿಯಲ್ಲಿ ನೀರು ತೆಗೆದು ಅಡಿಕೆ ಹಾಗೂ ಭತ್ತದ ಗದ್ದೆಗಳಿಗೆ ಹಾಯಿಸುತ್ತಿದ್ದ ರೈತರನ್ನು ಕಾಣುವುದು ದಿನನಿತ್ಯದ ನೋಟವಾಗಿತ್ತು. ಏಪ್ರಿಲ್ ಮೇ ತಿಂಗಳಲ್ಲಿ ಈ ಕೆರೆಗಳ ಕೆಸರು ತೆಗೆಯುವ ಕೆಲಸ ನಡೆಸಲಾಗುತ್ತಿತ್ತು. ಜೀವನದ ರೀತಿ ಬದಲಾಗುತ್ತಿದ್ದಂತೆ ಇದೇ ಕೆರೆಗಳಿಗೆ ಪಂಪು ಅಳವಡಿಕೆ ಮಾಡಿ ನೀರೆತ್ತುವ ಕಾಯಕ ನಡೆಸುತ್ತಿದ್ದರು. ಕಾಲ ಬದಲಾದ ಹಾಗೆ ಕೊಳವೆಬಾವಿಗಳ ಅಬ್ಬರ ಹೆಚ್ಚಾಗಿ ಈ ಕೆರೆಗಳು ರೈತರಿಂದ ದೂರ ಉಳಿಯಲಾರಂಭಿಸಿದೆ. ಕಾಲ ಕ್ರಮೇಣ ಜನತೆಯ ಮಾನಸಿಕತೆ ಬದಲಾದಂತೆ ಈ ಕೆರೆಗಳು ಅನಗತ್ಯ ಎಂಬ ಚಿಂತನೆಯಲ್ಲಿ ಮಣ್ಣು ತುಂಬಿಸಿಕೊಂಡು ಅಡಿಕೆ ತೋಟಗಳಾಗಿ ಬದಲಾದವು. ಅಲ್ಲಿಗೆ ಗ್ರಾಮೀಣ ಭಾಗದಲ್ಲಿದ್ದ 90 ಶೇಕಡಾದಷ್ಟು ಕೆರೆಗಳು ಕಣ್ಮರೆಯಾದವು.
ಇದರ ಪರಿಣಾಮ ಅಂತರ್ಜಲ ಕುಸಿತವಾಗುತ್ತಿದೆ. ಭತ್ತದ ಕೃಷಿಯೂ ರೈತರಿಂದ ದೂರ ಉಳಿಯಿತು. ಸುಮಾರು 6 ತಿಂಗಳ ಕಾಲ ಭೂಮಿಗೆ ನೀರುಣಿಸುತ್ತಿದ್ದ ಭತ್ತದ ಗದ್ದೆಗಳು ಹಾಗೂ ವರ್ಷದ 10 ತಿಂಗಳು ನೀರಿನ ಪಾತ್ರೆಯಾಗಿ ಉಳಿಯುತ್ತಿದ್ದ ಕೆರೆಗಳು ಹೇಳ ಹೆಸರಿಲ್ಲದಂತಾಗಿ ಮರೆಯಾಗಿಬಿಟ್ಟಿವೆ. ಆದರೆ ಇದೀಗ ಇಂತಹ ಕೆರೆಗಳ ಅಗತ್ಯತೆ ಬಗ್ಗೆ ಜನರಿಗೆ ಅರಿವಾಗತೊಡಗಿದೆ. ಊರಿಗೊಂದಾದರೂ ಕೆರೆ ಇರಬೇಕು ಎಂಬ ಯೋಚನೆ ಹುಟ್ಟಿಕೊಂಡಿದೆ. ಈ ಹಿನ್ನಲೆಯಲ್ಲಿಯೇ ಮಹತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ನಿರ್ಮಾಣವಾಗುತ್ತಿರುವ ಕೆರೆಗಳು ಮತ್ತೆ ಭೂಮಿಯಲ್ಲಿ ಅಂತರ್ಜಲದ ಮಟ್ಟದ ಏರಿಕೆಗೆ ಅರ್ಥ ಕಲ್ಪಿಸುವ ಕಾರ್ಯಕ್ಕೆ ಮುನ್ನುಡಿಯಾಗಿವೆ.
ಕಾಡು ಗುಡ್ಡಗಳು ಭತ್ತದ ಗದ್ದೆಗಳು, ಕೆರೆಗಳು ಇದ್ದಾಗ ಸಾಕಷ್ಟು ನೀರು ಭೂಮಿಯಲ್ಲಿ ಅಂತರ್ಜಲ ಹೆಚ್ಚಿಸಲು ಅನುಕೂಲ ಮಾಡಿಕೊಡುತ್ತಿದ್ದವು. ಆದರೆ ಈಗ ಗುಡ್ಡಗಳು ಅಡಿಕೆ ತೋಟಗಳಾಗಿವೆ. ಕಾಡುಗಳು ನಾಶವಾಗಿವೆ. ಭತ್ತದ ಗದ್ದೆಗಳು ಉಳಿದುಕೊಂಡಿಲ್ಲ. ಕೆರೆಗಳನ್ನು ಜನರೇ ನಾಮಾವಶೇಷ ಮಾಡಿದ್ದಾರೆ. ಹಾಗಾಗಿ ಎಷ್ಟೇ ಮಳೆ ಬಂದರೂ ನೀರನ್ನು ಭೂಮಿಗೆ ಇಂಗಿಸುವ ಅವಕಾಶಗಳೇ ಇಲ್ಲದಂತಾಗಿದೆ. ಭೂಮಿಯ ಅಂತರ್ಜಲ ಎಂಬುವುದು ನಾವು ಬ್ಯಾಂಕಿನಲ್ಲಿ ಹಣ ಇಟ್ಟಂತೆ ತೆಗೆಯುತ್ತಲೇ ಹೋದರೆ ಅದು ಖಾಲಿಯಾಗುತ್ತಾ ಹೋಗುತ್ತದೆ. ಕಾಲ ಕಾಲಕ್ಕೆ ಮತ್ತೆ ಅದಕ್ಕೆ ಹಣ ತುಂಬಿಸಿದಾಗ ಮಾತ್ರ ಅದು ಬದಿಕೆಗೆ ಭರವಸೆಯ ಶಕ್ತಿಯಾಗುತ್ತದೆ. ಹಾಗೆಯೇ ಭೂಮಿಗೆ ನೀರು ಇಂಗಿಸುವ ಅವಕಾಶಗಳನ್ನು ದೂರ ಮಾಡುತ್ತಲೇ ಹೋದರೆ ಮುಂದೊಂದು ದಿನ ಅಂತರ್ಜಲವೇ ಖಾಲಿಯಾಗುವ ಸಂದರ್ಭ ಬರಲಿದೆ. ಹಾಗಾಗಿ ಕನಿಷ್ಠ ಕೆರೆಗಳನ್ನಾದರೂ ಜೀವಂತವಾಗಿಟ್ಟುಕೊಂಡರೆ ಅಂತರ್ಜಲವನ್ನು ರಕ್ಷಿಸುವ ಕೆಲಸವಾಗಲಿದೆ. ಈ ನಿಟ್ಟಿನಲ್ಲಿ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಹುಟ್ಟಿಕೊಂಡ ಕೆರೆಗಳ ಚಿಂತನೆ ಭವಿಷ್ಯದ ದೃಷ್ಟಿಯಿಂದ ಅಮೂಲ್ಯವಾಗಿದೆ.
ಪುತ್ತೂರು ತಾಲೂಕಿನಲ್ಲಿ ಮತ್ತೆ ಚೈತನ್ಯ ಪಡೆದ ಕೆರೆಗಳ ಪಟ್ಟಿ ಈ ರೀತಿ ಇದ್ದು, ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಕೆರೆಮೂಲೆ ಕೆರೆ, ಬನ್ನೂರು ಸದಾಶಿವ ತೀರ್ಥ ಕೆರೆ, ಒಳಮೊಗ್ರು ಅಜಲಡ್ಕ ಕೆರೆ, ಬಡಗನ್ನೂರಿನ ಪುಂಡಿಕಾಯಿ ಕೆರೆ, ಕೆದಂಬಾಡಿಯ ಬೋಲೋಡಿ ಕೆರೆ, ಹಿರೆಬಂಡಾಡಿಯ ಅಡ್ಕಾಳ್ ಕೆರೆ, ಅರಿಯಡ್ಕದ ಕೌಡಿಚ್ಚಾರು ಪಲ್ಲ ಮದಕ ಕೆರೆ, ಬಜತ್ತೂರಿನ ಮೇಲೂರು ಕೆರೆ, ನೆಕ್ಕಿಲಾಡಿಯ ಮೈಂದನಡ್ಕ ಕೆರೆ, ಬೆಟ್ಟಂಪಾಡಿ ಮಹಾಲಿಂಗೇಶ್ವರ ದೇಗುಲ ಕಲ್ಯಾಣಿ ಹಾಗೂ ಕಡಬ ತಾಲೂಕಿನ ರಾಮಕುಂಜ ಅಮೈ ಕೆರೆ, ಸವಣೂರಿನ ಕೊಂಬ ಕೆರೆ, ಉತ್ತೂರಿನ ಸುಳ್ಯ ಕೆರೆ, ಬಳ್ಪ ಬೋಗರಾಯನ ಕೆರೆ, ಏನೇಕಲ್ಲು ಅಂಗಾರವರ್ಮ ಕೆರೆ, ಸುಬ್ರಹ್ಮಣ್ಯ ಬಸವನಮೂಲೆ ಕೆರೆ, ಗೋಳಿತೊಟ್ಟು ಪುಲಾರ ಕೆರೆ, ಕುಟ್ರುಪಾಡಿಯ ಹಳೆಸ್ಟೇಶನ್ ಕೆರೆ, ಹಳೆನೇರೆಂಕಿ ಎತ್ತರಪಡ್ಪು ಕೆರೆ, ಎಡಮಂಗಲ ಕೇರ್ಪಡಿ ಮಹಿಷಮರ್ದಿನಿ ದೇಗುಲದ ಕಲ್ಯಾಣಿ.
Dakshina Kannada,Karnataka
April 30, 2025 11:00 AM IST