Last Updated:
ಆಟಿ ಕಳೆಂಜ ತುಳುನಾಡಿನ ಆಷಾಡ ಮಾಸದ ಸಂಪ್ರದಾಯ. ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಮನೆ ಮನೆಗೆ ತೆರಳಿ ಮಾರಿಯನ್ನು ಹೋಗಲಾಡಿಸುತ್ತಾರೆ. ಇತ್ತೀಚಿಗೆ ಈ ಆಚರಣೆ ಕೆಲವೇ ಭಾಗಗಳಿಗೆ ಸೀಮಿತವಾಗಿದೆ.
ದಕ್ಷಿಣ ಕನ್ನಡ: ತುಳುನಾಡಿನಲ್ಲಿ ಆಷಾಡ ಮಾಸವನ್ನು ಆಟಿ ತಿಂಗಳು (Aati Month) ಎಂದು ಕರೆಯುತ್ತಾರೆ. ಆಟಿ ತಿಂಗಳಿನಲ್ಲಿ ಭಾರೀ ಮಳೆಯಿದ್ದು (Rain), ತೀವ್ರ ರೋಗ ಕಾಡುವ ಮಾಸವೂ ಆಗಿದೆ. ಈ ರೋಗ ರುಜಿನಗಳನ್ನು ಹೋಗಲಾಡಿಸುವ ಅತಿಮಾನುಷ ಶಕ್ತಿಯೊಂದರ ಕಲ್ಪನೆಯಲ್ಲಿ ಆಟಿ ಕಳೆಂಜ ಎನ್ನುವ ವ್ಯಕ್ತಿಯ ಸೃಷ್ಠಿಯನ್ನು ತುಳುನಾಡಿನ ಸಂಸ್ಕøತಿಯಲ್ಲಿ ಮಾಡಲಾಗಿದೆ. ಆಟಿ ಕಳೆಂಜ ಆಷಾಡ ಮಾಸದ ಒಂದು ತಿಂಗಳು ತುಳುನಾಡಿನ ಪ್ರತಿ ಮನೆಗಳಿಗೆ ತೆರಳಿ, ಅಲ್ಲಿನ ಮಾರಿಯನ್ನು ಹೋಗಲಾಡಿಸುತ್ತಾನೆ ಎನ್ನುವ ನಂಬಿಕೆ. ಈ ಸಂಪ್ರದಾಯದ್ದಾಗಿದೆ. ಉಡುಪಿ (Udupi), ದಕ್ಷಿಣ ಕನ್ನಡ (Dakshina Kannada) ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಆಟಿ ಕಳೆಂಜ ಆಚರಣೆಯು ಇಂದಿಗೂ ಚಾಲ್ತಿಯಲ್ಲಿದ್ದು, ದೈವಗಳ ನರ್ತನವನ್ನು ಮಾಡುವ ನಲಿಕೆ ಜನಾಂಗಕ್ಕೆ ಸೇರಿದ ವ್ಯಕ್ತಿಗಳು ಆಟಿಕಳಂಜರಾಗಿ ಮನೆ ಮನೆಗೆ ಬರುತ್ತಾರೆ. ಕೆಲವು ಕಡೆಗಳಲ್ಲಿ ಕಳೆಂಜ ವೇಷಧಾರಿಗೆ ಬಣ್ಣದ ಮುಖವರ್ಣಿಕೆ ಇದ್ದರೆ, ಇನ್ನು ಕೆಲವು ಭಾಗದಲ್ಲಿ ಅಡಿಕೆ ಹಾಳೆಯನ್ನು ಮುಖವಾಡವಾಗಿ ಮಾಡಿರುತ್ತಾರೆ.
ಮನೆಗೆ ಬಂದ ಆಟಿ ಕಳಂಜನಿಗೆ ಮನೆ ಮಂದಿ ಅಕ್ಕಿ, ಉಪ್ಪು, ತೆಂಗಿನಕಾಯಿ, ಮೆಣಸು, ಇದ್ದಿಲಿನ ತುಂಡನ್ನು ನೀಡುತ್ತಾರೆ. ಈ ವಸ್ತುಗಳ ಬದಲಿಗೆ ಇಂದು ಹಣವನ್ನು ನೀಡುವ ವ್ಯವಸ್ಥೆಯೂ ಆರಂಭವಾಗಿದೆ. ಆಟಿ ಮಾಸದಲ್ಲಿ ತುಳುನಾಡಿನಲ್ಲಿ ಯಾವುದೇ ಶುಭ ಸಮಾರಂಭ, ನೇಮ-ಕೋಲ ಎಲ್ಲವೂ ನಿಂತು ಹೋಗುತ್ತದೆ. ಇದರಿಂದಾಗಿ ದೈವಗಳ ನರ್ತನ ಮತ್ತು ಸೇವೆ ಮಾಡುವ ಕುಟುಂಬಗಳಿಗೆ ಈ ಮಾಸದಲ್ಲಿ ಯಾವುದೇ ಉತ್ಪತ್ತಿಯೂ ಇರೋದಿಲ್ಲ.
ಈ ಕಾರಣಕ್ಕಾಗಿಯೂ ಆಟಿ ತಿಂಗಳಿನಲ್ಲಿ ಆಟಿ ಕಳೆಂಜ ಎನ್ನುವ ಆಚರಣೆ ನಡೆದುಕೊಂಡು ಬಂದಿರುವ ಸಾಧ್ಯತೆಯೂ ಹೆಚ್ಚಾಗಿದೆ. ಇದರಿಂದಾಗಿ ದೈವದ ಸೇವೆ ಮಾಡುವ ಕುಟುಂಬಗಳಿಗೂ ತಮ್ಮ ಜೀವನೋಪಾಯಕ್ಕೆ ಸಾಕಾಗುವಷ್ಟು ಹಣವೂ ದೊರೆಯುತ್ತದೆ.
ಇತ್ತೀಚಿನ ಕೆಲವು ವರ್ಷಗಳಲ್ಲಿ ಆಟಿ ಕಳೆಂಜ ಎನ್ನುವ ಸಾಂಪ್ರದಾಯಿಕ ಆಚರಣೆ ಕೇವಲ ಕೆಲವೇ ಭಾಗಕ್ಕೆ ಸೀಮಿತವಾಗುತ್ತಿದೆ. ಕಾಸರಗೋಡು ಮತ್ತು ಸುಳ್ಯ ಭಾಗದಲ್ಲಿ ಈ ಆಟಿ ಕಳೆಂಜಇನ್ನೂ ಕಂಡು ಬಂದರೆ, ಇನ್ನುಳಿದ ಕಡೆಗಳಲ್ಲಿ ಆಟಿ ಕಳೆಂಜ ಅಪರೂಪವಾಗಿ ಬಿಟ್ಟಿದೆ. ಆಟಿ ಕಳಂಜ ಊರಿನ ಮಾರಿ ತೆಗೆಯುತ್ತಾನೋ, ಇಲ್ಲವೋ ಎನ್ನುವುದು ಮುಖ್ಯವಾಗಿರದೆ, ಇಲ್ಲಿ ಸಂಪ್ರದಾಯವೊಂದರ ಉಳಿವು ಮುಖ್ಯವಾಗಿದೆ.
Dakshina Kannada,Karnataka
June 29, 2025 9:21 AM IST