Last Updated:
ಗುರುವಾಯನಕೆರೆ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಮುಖ ಆಕರ್ಷಣೆ. 15 ಎಕರೆ ವಿಸ್ತೀರ್ಣದ ಈ ಕೆರೆ ಸೂರ್ಯಾಸ್ತದ ಸಮಯದಲ್ಲಿ ಚಿನ್ನದಂತೆ ಹೊಳೆಯುತ್ತದೆ. ಆದರೆ, ಅಭಿವೃದ್ಧಿ ಕಾರ್ಯಗಳು ಶೂನ್ಯವಾಗಿವೆ.
ದಕ್ಷಿಣ ಕನ್ನಡ: ರಸ್ತೆಯ ಬದಿಯಲ್ಲಿ ವಿಶಾಲವಾದ ಕೆರೆ (Lake View). ಸೂರ್ಯ ಸಂಪೂರ್ಣ (Sunset) ಅಸ್ತಂಗತವಾಗುವ ಹೊತ್ತಿಗೆ ಕೆಂಪು ಬಣ್ಣಕ್ಕೆ ತಿರುಗಿದ ಆಕಾಶ. ಆಕಾಶದ ಕೆಂಪು ಬಣ್ಣ ಆ ಕೆರೆಯ ನೀರಿನ ಮೇಲೆ ಆವರಿಸಿದಾಗ ಚಿನ್ನದ (Gold) ರೀತಿ ಹೊಳೆದ ನೀರು. ಹೌದು, ಇದು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ (Guruvayanakere Lake) ಪ್ರತಿದಿನದ ಸೂರ್ಯಾಸ್ತದ ಚಿತ್ರಣ.
ಸುಮಾರು ಹದಿನೈದು ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಕೆರೆ ಗುರುವಾಯನಕೆರೆ. ಈ ಕೆರೆಯ ಹೆಸರೇ ಇಡೀ ಊರಿಗೆ ಬಂದಿರೋದು ಇನ್ನೊಂದು ವಿಶೇಷ. ಗುರುವಾಯನಕೆರೆ ಜಿಲ್ಲೆಯ ಅತೀ ಮುಖ್ಯ ಜಂಕ್ಷನ್ ಗಳಲ್ಲಿ ಒಂದು. ಬೆಳ್ತಂಗಡಿ-ಉಪ್ಪಿನಂಗಡಿ-ಮಂಗಳೂರು-ಉಡುಪಿ ಭಾಗವನ್ನು ಸಂಧಿಸುವ ಅತೀ ಮುಖ್ಯ ಪ್ರದೇಶ. ಗುರುವಾಯನಕೆರೆ ಎಂಬ ಪ್ರದೇಶದ ಪ್ರಮುಖ ಆಕರ್ಷಣೆ ಈ ಕೆರೆ. ಗುರುವಾಯನಕೆರೆ ಪೇಟೆಯಿಂದ ಉಡುಪಿ ಅಥವಾ ಮೂಡಬಿದಿರೆಯ ದಾರಿಯಲ್ಲಿ ಸಾಗುವ ಪೇಟೆಗೆ ತಾಗಿಕೊಂಡೇ ಇರುವ ಈ ಕೆರೆಯ ದರ್ಶನ ವಾಗುತ್ತದೆ. 14.71 ಎಕರೆ ವ್ಯಾಪ್ತಿಯಲ್ಲಿ ಆವರಿಸಿಕೊಂಡಿರುವ ಕೆರೆ ಈ ದಾರಿಯ ಪ್ರಯಾಣಿಕರ ನೆಚ್ಚಿನ ಸ್ಥಳವೂ ಹೌದು. ಮುಂಜಾನೆ ಮತ್ತು ಮುಸ್ಸಂಜೆ ಪ್ರಶಾಂತವಾದ ಕೆರೆಯ ಬದಿ ವಿಹಾರ ಮಾಡೋದು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಆದರೆ ಪ್ರವಾಸೋದ್ಯಮಕ್ಕೆ ವಿಫುಲವಾದ ಅವಕಾಶ ಇದ್ದರೂ ಕೆರೆಯ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ.
ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಕೆರೆ ಅಭಿವೃದ್ಧಿಗೆ ಮಾತ್ರ ನಾನಾ ಅಡ್ಡಿಯುಂಟಾಗುತ್ತಿದೆ. ಕಳೆದ ವರ್ಷ ಉಪಲೋಕಾಯುಕ್ತರ ತಂಡ ಕೆರೆ ಅಭಿವೃದ್ಧಿಗೆ ಸಭೆಗಳನ್ನು ಮಾಡಿತ್ತು. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆರೆ ಅಭಿವೃದ್ಧಿಯ ಭರವಸೆ ನೀಡಲಾಗಿತ್ತು. ಆದರೆ ಭರವಸೆ ಮಾತ್ರ ಭರವಸೆಯಾಗಿಯೇ ಉಳಿದು ಕೆರೆ ನಿಷ್ಪ್ರಯೋಜಕ ಎಂಬಂತಾಗಿದೆ.
ಕೆರೆಯ ಸುತ್ತಾ ವಾಕಿಂಗ್ ಟ್ರ್ಯಾಕ್, ಕೆರೆಯಲ್ಲಿ ಜಲಕ್ರೀಡೆ, ಪಾರ್ಕ್ ಮುಂತಾದ ಸೌಕರ್ಯಗಳನ್ನು ಕಲ್ಪಿಸಿದರೆ, ಜಿಲ್ಲೆಯ ಅತೀ ಪ್ರೇಕ್ಷಣೀಯ ಸ್ಥಳಗಳ ಪಟ್ಟಿಗೆ ಈ ಕೆರೆಯ ಸೇರ್ಪಡೆಯಾಗಲಿದೆ. ಆದರೆ ಕೆರೆಗೆ ತ್ಯಾಜ್ಯಗಳನ್ನು ಎಸೆಯೋದು, ಪಕ್ಕದ ಕಟ್ಟಡಗಳ ಮಲಿನ ನೀರು ಕೆರೆಗೆ ಹರಿಸೋದರಿಂದ ಕೆರೆ ಮಾಲಿನ್ಯವಾಗುತ್ತಿದೆ. ಪ್ರಕೃತಿಯ ಅದ್ಭುತ ಸ್ಥಳ ಮಲಿನವಾಗದೇ ಪೀಳಿಗೆ ಸುಂದರ ತಾಣವಾಗಲಿ ಅನ್ನೋದು ನಾಗರಿಕರ ಆಶಯ.
Dakshina Kannada,Karnataka
May 15, 2025 11:56 AM IST