Last Updated:
ದೇವಸ್ಥಾನದ ವತಿಯಿಂದ ಕಂಗನಾ ಅವರಿಗೆ ಶೇಷವಸ್ತ್ರ, ಪ್ರಸಾದ ನೀಡಿ ಗೌರವಿಸಲಾಯಿತು ಕೆಂಪು ಸೀರೆ, ತಲೆಗೆ ಮಲ್ಲಿಗೆ ಹೂವು ಇಟ್ಟು ಬಂದ ಕಂಗನಾ ಪಕ್ಕಾ ತುಳುನಾಡ ಕುವರಿಯಂತೆ ಮಿಂಚಿದ್ದಾರೆ.
ದಕ್ಷಿಣ ಕನ್ನಡ: ಬಾಲಿವುಡ್ ಸ್ಟಾರ್ ನಟಿ, ಸಂಸದೆ ಕಂಗನಾ ರಣಾವತ್(Kangana Ranaut) ಕರಾವಳಿಯಲ್ಲಿ ಟೆಂಪಲ್ ರನ್(Temple) ಮಾಡಿದ್ದಾರೆ. ಕಾಪು ಬಳಿಕ ಕಟೀಲು ಕ್ಷೇತ್ರಕ್ಕೂ ಪಕ್ಕಾ ತುಳುನಾಡಿನ ಕುವರಿಯಂತೆ ಆಗಮಿಸಿ ಮಧ್ಯಾಹ್ನದ ಮಹಾಪೂಜೆಯಲ್ಲಿ ಭಾಗವಹಿಸಿದ್ದಾರೆ. ದೇವಸ್ಥಾನದಲ್ಲೇ(Temple) ಅನ್ನಪ್ರಸಾದ ಸ್ವೀಕರಿಸಿ ಶ್ರೀ ದೇವಿ ಮಹಾತ್ಮೆಯನ್ನು ಕೊಂಡಾಡಿದ್ದಾರೆ.
ಬಾಲಿವುಡ್ ಸ್ಟಾರ್ ನಟಿ, ಮಂಡಿ ಕ್ಷೇತ್ರದ ಸಂಸದೆ ಕಂಗನಾ ರಣಾವತ್ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸೋಮವಾರ ಕಾಪು ಹೊಸಮಾರಿಗುಡಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಭಾಗಿಯಾದ ಕಂಗನಾ ಇಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಕಟೀಲು ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವ ಕಂಗನಾ ದೇವಿಯ ಆಲಯದ ಬಗ್ಗೆ ಕೊಂಡಾಡಿದ್ದಾರೆ.
ಮಂಗಳವಾರದ ಮಧ್ಯಾಹ್ನದ ಮಹಾಪೂಜೆಯ ವೇಳೆಯೇ ಕಟೀಲು ಕ್ಷೇತ್ರಕ್ಕೆ ಆಗಮಿಸಿದ ಕಂಗನಾ ರಣಾವತ್, ದೇವಿಯ ಮಹಾಪೂಜೆಯನ್ನು ಕಣ್ತುಂಬಿಕೊಂಡಿದ್ದಾರೆ. ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಜೊತೆಗೆ ಆಗಮಿಸಿದ ಅವರು ದೇವಿಗೆ ಮಲ್ಲಿಗೆ ಹೂವು, ಸೀಯಾಳ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನದ ವತಿಯಿಂದ ಕಂಗನಾ ಅವರಿಗೆ ಶೇಷವಸ್ತ್ರ, ಪ್ರಸಾದ ನೀಡಿ ಗೌರವಿಸಲಾಯಿತು ಕೆಂಪು ಸೀರೆ, ತಲೆಗೆ ಮಲ್ಲಿಗೆ ಹೂವು ಇಟ್ಟು ಬಂದ ಕಂಗನಾ ಪಕ್ಕಾ ತುಳುನಾಡ ಕುವರಿಯಂತೆ ಮಿಂಚಿದ್ದಾರೆ.
ಇದನ್ನೂ ಓದಿ: Uttara Kannada: ಮೊದಲ ಬಾರಿಗೆ ʼಹಳ್ಳಿ ಹಬ್ಬʼ ಆಚರಣೆ- ಕುಣಿದು ಕುಪ್ಪಳಿಸಿದ ನಾರಿಮಣಿಯರು!
ಈ ವೇಳೆ ಮಾತನಾಡಿದ ಕಂಗನಾ, ದೇವಿಯ ದರ್ಶನಕ್ಕೆ ಬಂದಿದ್ದೇನೆ. ನಿನ್ನೆ ಕಾಪು ಮಾರಿಗುಡಿ, ಇಂದು ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದೇನೆ. ತಾಯಿಯ ದರ್ಶನ ಪಡೆದಿದ್ದೇನೆ. ಬಹಳ ವರ್ಷಗಳಿಂದ ಈ ಭಾಗಕ್ಕೆ ಬರಬೇಕೆಂಬ ಅಭಿಲಾಷೆ ಇತ್ತು. ತಾಯಿ ತನ್ನ ಆಶೀರ್ವಾದ ನೀಡಲು ಕರೆಸಿಕೊಂಡಿದ್ದಾಳೆ ಎಂದು ಹೇಳಿದ್ದಾರೆ. ಕಳೆದ ವಾರವಷ್ಟೇ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕಟೀಲು ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಇದೀಗ ಕಂಗನಾ ಕೂಡಾ ಭೇಟಿ ನೀಡಿದ್ದಾರೆ. ಕಟೀಲು ಕ್ಷೇತ್ರಕ್ಕೆ ಬಾಲಿವುಡ್, ಸ್ಯಾಂಡಲ್ ವುಡ್ ನಟ-ನಟಿಯರು, ಪ್ರಸಿದ್ಧ ಕ್ರಿಕೆಟ್ ತಾರೆಯರು ಆಗಮಿಸಿದ್ದರು. ಕಟೀಲು ಕ್ಷೇತ್ರಕ್ಕೆ ಕಂಗನಾ ಮೊದಲ ಬಾರಿಗೆ ಭೇಟಿ ನೀಡಿದ್ದು, ದೇವಸ್ಥಾನದ ಅನ್ನಪ್ರಸಾದ ಸ್ವೀಕರಿಸಿ ತೆರಳಿರೋದು ಅರ್ಚಕರಿಗೂ ಖುಷಿ ತಂದಿದೆ.
ಒಟ್ಟಿನಲ್ಲಿ ಕಳೆದೆರಡು ದಿನಗಳಿಂದ ಕರಾವಳಿಯಲ್ಲಿ ಟೆಂಪಲ್ ರನ್ ಮಾಡುತ್ತಿರುವ ಕಂಗನಾ ಎರಡು ಪುರಾಣ ಪ್ರಸಿದ್ಧ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ಬಾಲಿವುಡ್ ಸ್ಟಾರ್ಗಳು ಈ ಹಿಂದೆಯೂ ಕರಾವಳಿಯ ದೇವಸ್ಥಾನಗಳಿಗೆ ಭೇಟಿ ನೀಡುವ ಸಂಪ್ರದಾಯ ಇಟ್ಟುಕೊಂಡಿದ್ದು, ಇಂದಿಗೂ ಅದು ಮುಂದುವರಿಯುತ್ತಾ ಬಂದಿರೋದು ವಿಶೇಷವಾಗಿದೆ.
Dakshina Kannada,Karnataka
March 05, 2025 11:05 AM IST