Last Updated:
ದಿನ ಕಳೆದಂತೆ ನಮ್ಮ ಆಹಾರ ಪದ್ದತಿ ಬದಲಾಗುತ್ತಿದೆ. ಯುವ ಜನತೆಯಲ್ಲಿ ಕ್ಯಾನ್ಸರ್ ಹೆಚ್ಚಾಗುತ್ತಿರುವುದಲ್ಲದೆ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯೂ ಏರುತ್ತಿದೆ. ಈ ನಡುವೆ ಕರಾವಳಿಯಲ್ಲಿಯೂ ಈ ಮಾರಣಾಂತಿಕ ಕಾಯಿಲೆ ಹೆಚ್ಚಾಗಿದ್ದು, 4 ತಿಂಗಳ ವರದಿ ಬೆಚ್ಚಿ ಬೀಳುಸ್ತಿದೆ.
ಮಂಗಳೂರು: ದಿನ ಕಳೆದಂತೆ ಕ್ಯಾನ್ಸರ್ ಪ್ರಕರಣಗಳು (Cancer Cases in Coastal Karnataka) ಏರುತ್ತಲೇ ಇವೆ. ಈ ಕಾಯಿಲೆಗೆ ದೊಡ್ಡವರು. ಚಿಕ್ಕವರು ಎಂಬ ಬೇಧವಿಲ್ಲ. ಅದರಲ್ಲೂ ಇತ್ತೀಚೆಗೆ ಯುವಜನರಲ್ಲಿ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೆಲ ತಿಂಗಳ ಹಿಂದಷ್ಟೆ ಗೃಹ ಆರೋಗ್ಯ ಯೋಜನೆ (Griha Arogya Scheme) ಜಾರಿಗೆ ತಂದಿತ್ತು. 30 ವರ್ಷ ಮೇಲ್ಪಟ್ಟವರಲ್ಲಿ ಬಿ.ಪಿ, ಶುಗರ್, ಕ್ಯಾನ್ಸರ್ನಂತಹ ಸಾಂಕ್ರಾಮಿಕವಲ್ಲದ ರೋಗಗಳನ್ನು ಮುಂಚಿತವಾಗಿ ಪತ್ತೆಹಚ್ಚಬೇಕು. ಹಾಗೆ ಫ್ರೀ ಚಿಕಿತ್ಸೆ (Free Treatment) ಮೂಲಕ ಸಾವುಗಳನ್ನು ತಡೆಯೋದು ಇದ್ರ ಗುರಿಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kananda) ನಡೆಸಿದ ತಪಾಸಣೆ ವೇಳೆ ಬೆಚ್ಚಿ ಬೀಳಿಸುವ ಅಂಕಿ ಅಂಶಗಳು ಬೆಳಕಿಗೆ ಬಂದಿದೆ.
ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಇವರು ನೀಡಿದ ವರದಿಯಲ್ಲಿ ಎಲ್ಲರೂ ಗಂಭೀರವಾಗಿ ಯೋಚಿಸಬೇಕಾದ ಅಂಕಿಅಂಶಗಳು ಬೆಳಕಿಗೆ ಬಂದಿದೆ. ಅದೇನಂದ್ರೆ, ಕೇವಲ 4 ತಿಂಗಳ ಅಂತರದಲ್ಲಿ 371 ಮಂದಿಯಲ್ಲಿ ಕ್ಯಾನ್ಸರ್ ಇರೋದು ಪತ್ತೆಯಾಗಿದೆ. ಇದರಲ್ಲಿ 183 ಮಂದಿಯಲ್ಲಿ ಬಾಯಿ ಕ್ಯಾನ್ಸರ್, 123 ಮಂದಿಗೆ ಸ್ತನ ಕ್ಯಾನ್ಸರ್, 65 ಮಂದಿಗೆ ಗರ್ಭ ಕಂಠದ ಕ್ಯಾನ್ಸರ್ ಇರೋದು ಪತ್ತೆಯಾಗಿದೆ.
ಅನಗತ್ಯವಾಗಿ ಯಾವುದೇ ಪ್ರಕರಣಗಳು ಏರುಪೇರು ಆಗಿಲ್ಲ. ಈ ಹಿಂದೆ ವರದಿಯಾಗುತ್ತಿದ್ದ ಪ್ರಕರಣಗಳು ಕಂಡು ಬಂದಿದೆ. ಆದರೆ ಯಾವುದೇ ರೀತಿಯ ಗಣನೀಯ ಪ್ರಕರಣಗಳು ಏರಿಕೆ ಆಗಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ತಿಳಿಸಿದ್ದಾರೆ.
ಕೇವಲ ಕ್ಯಾನ್ಸರ್ ಮಾತ್ರವಲ್ಲ ಮಧುಮೇಹ, ಅಧಿಕ ರಕ್ತದೊತ್ತಡದಂತಹ ರೋಗಗಳ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಯಾನ್ಸರ್, ಹೃದ್ರೋಗ ಚಿಕಿತ್ಸೆಗೆಗೆಂದೆ ಪ್ರತ್ಯೇಕ ಸರ್ಕಾರಿ ಆಸ್ಪತ್ರೆ ಇಲ್ಲ. ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಗಳ ಘಟಕ ಸ್ಥಾಪನೆಗೂ ಒತ್ತಾಯ ಕೇಳಿ ಬಂದಿದೆ. ನಗರ ಹೊರವಲಯದ ಮೂಡುಶೆಡ್ಡೆ ಬದಲು ಸರ್ಕಾರಿ ಜಿಲ್ಲಾಸ್ಪತ್ರೆ ವೆನ್ಲಾಕ್ ಆವರಣದಲ್ಲಿ ಘಟಕ ಸ್ಥಾಪಿಸುವಂತೆ ಒತ್ತಾಯ ಕೇಳಿ ಬಂದಿದೆ. ಈ ನಡುವೆ ಬದಲಾದ ಆಹಾರ ಕ್ರಮವನ್ನು ಕ್ರಮಬದ್ದಗೊಳಿಸಿ ಎಂಬ ಎಚ್ಚರಿಕೆಯನ್ನು ವೈದ್ಯರು ನೀಡಿದ್ದಾರೆ.
ಒಟ್ನಲ್ಲಿ ಕ್ಯಾನ್ಸರ್, ಹೃದ್ರೋಗ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಜನ ಇನ್ನಾದರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. (ವರದಿ: ಕಿಶನ್ ಶೆಟ್ಟಿ, ನ್ಯೂಸ್ 18, ಮಂಗಳೂರು)
Dakshina Kannada,Karnataka
Dec 28, 2025 11:57 AM IST