Last Updated:
ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಮುಕ್ತಾಯಗೊಂಡಿದೆ. ಜಾತ್ರೋತ್ಸವದ ಕೊನೆಯ ದಿನ ಸುಬ್ರಹ್ಮಣ್ಯ ಸ್ವಾಮಿಗೆ ನಡೆದ ಬಂಡಿ ಉತ್ಸವ ಹೇಗಿತ್ತು ಅಂತಾ ನೀವೇ ನೋಡಿ.
ದಕ್ಷಿಣ ಕನ್ನಡ: ಸುಳ್ಯ ತಾಲೂಕಿನ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ (Kukke Subrahmanya) ನಡೆಯುತ್ತಿದ್ದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವಕ್ಕೆ (Champashasthi Festival) ತೆರೆಬಿದ್ದಿದೆ. ಜಾತ್ರೋತ್ಸವದ ಕೊನೆಯ ದಿನದ ಧಾರ್ಮಿಕ ಆಚರಣೆಯಾಗಿ ಸುಬ್ರಹ್ಮಣ್ಯ ಸ್ವಾಮಿಗೆ ಬಂಡಿ ಉತ್ಸವವನ್ನು ನೆರವೇರಿಸಲಾಯಿತು. ವಿಶಿಷ್ಟ ಸಂಪ್ರದಾಯ ಹಾಗೂ ವಿಭಿನ್ನ ಧಾರ್ಮಿಕ ಕಾರ್ಯಕ್ರಮಗಳಿಗೆ ಈ ಬಂಡಿ ಉತ್ಸವ ಸಾಕ್ಷಿಯಾಯಿತು (Dakshina Kannada News).
ನೀರಿನಲ್ಲಿ ದೇವರ ಬಂಡಿ ರಥೋತ್ಸವ
ಬಂಡಿ ಉತ್ಸವದ ನಿಮಿತ್ತ ದೇವಸ್ಥಾನದ ಹೊರಾಂಗಣದ ಸುತ್ತಲೂ ನೀರನ್ನು ತುಂಬಿಸಲಾಗಿತ್ತು. ರಾತ್ರಿ ಮಹಾಪೂಜೆಯ ಬಳಿಕ ನೀರಿನಲ್ಲಿ ಶ್ರೀ ದೇವರ ದೀಪಾರಾಧನೆಯುಕ್ತ ಪಲ್ಲಕ್ಕಿ ಉತ್ಸವ ನಡೆಯಿತು. ನಂತರ ನೀರಿನಲ್ಲಿ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ರಥೋತ್ಸವವು ಭಕ್ತ ಸಾಗರದ ನಡುವೆ ಸಂಭ್ರಮದಿಂದ ನೆರವೇರಿತು.
ಇದನ್ನೂ ಓದಿ: Belagavi: ಕಾಗವಾಡದ ಈ ಗ್ರಾಮದಲ್ಲಿ ವಾರದ ಆ ಒಂದು ದಿನ ದೇವರಿಗೆ ಮೀಸಲು; ಮುಸ್ಲಿಮರೂ ಪಾಲಿಸುತ್ತಾರೆ ಈ ನಿಯಮ!
ಸಾವಿರಾರು ಭಕ್ತರು ಭಾಗಿ
ವಿವಿಧ ಸಂಗೀತ ವಾದ್ಯಗಳ ಜೊತೆ ನೀರಿನಲ್ಲಿ ಪಲ್ಲಕ್ಕಿ ಉತ್ಸವ ನಡೆದ ಬಳಿಕ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಚಂಪಾಷಷ್ಠಿ ಉತ್ಸವಗಳು ಸಮಾಪ್ತಿಯಾಗುತ್ತವೆ. ಚಂಪಾಷಷ್ಠಿ ಜಾತ್ರೋತ್ಸವವು ಅದ್ಧೂರಿಯಾಗಿ ನಡೆಯುವುದರ ಜೊತೆಗೆ ಉತ್ಸವದ ಮುಕ್ತಾಯವನ್ನೂ ಸಾವಿರಾರು ಭಕ್ತರು ಕಣ್ತುಂಬಿಕೊಂಡರು.
ಆನೆಯ ನೀರಾಟ ನೋಡಿ ಜನರ ಸಂತಸ
ಇನ್ನು, ಬಂಡಿ ಉತ್ಸವದ ಬಳಿಕ ಹೊರಾಂಗಣದಲ್ಲಿರುವ ನೀರಿನಲ್ಲಿ ದೇವಸ್ಥಾನದ ಆನೆ ಯಶಸ್ವಿಯ ನೀರಾಟ ಎಲ್ಲರ ಗಮನ ಸೆಳೆಯಿತು. ನೀರಿನಲ್ಲಿ ಮಕ್ಕಳು, ದೊಡ್ಡವರ ಜೊತೆ ಯಶಸ್ವಿ ಆನೆಯ ತುಂಟಾಟ ಅಲ್ಲಿ ಸೇರಿದ್ದ ಜನರಲ್ಲಿ ಸಂತೋಷದ ಕಡಲಲ್ಲಿ ತೇಲಿಸಿತು. ಒಂದು ಕಡೆ ಮಕ್ಕಳು ಆನೆಗೆ ನೀರು ಹಾಕಿ ಎಂಜಾಯ್ ಮಾಡಿದ್ರೆ, ಆನೆಯೂ ಮಕ್ಕಳ ಸಂತೋಷವನ್ನು ನೋಡಿ ಎಂಜಾಯ್ ಮಾಡುತ್ತಿರುವಂತೆ ಕಾಣುತ್ತಿತ್ತು.
Dakshina Kannada,Karnataka
December 13, 2024 3:34 PM IST