Last Updated:
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಕುಮಾರಧಾರಾ ನದಿ ದಡದಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮಕ್ಕಳು ಮೊಸಳೆ ಕಂಡು ಮನೆಯವರಿಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಮೊಸಳೆಯನ್ನು ನದಿಗೆ ಹಿಂತಿರುಗಿಸಿದೆ.
ದಕ್ಷಿಣ ಕನ್ನಡ: ಮಳೆಗಾಲದ ಸಂದರ್ಭದಲ್ಲಿ (Monsoon Rains) ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆ. ಈ ಮಳೆ ನೀರಿನ ಪ್ರವಾಹ ಎಲ್ಲವನ್ನೂ ಕೊಚ್ಚಿಕೊಂಡು ಹರಿಯುತ್ತವೆ. ಹೀಗೆ ರಭಸದಿಂದ ಹರಿಯುವ ನೀರಿನಲ್ಲಿ ಕೆಲವೊಮ್ಮೆ ನೀರಿನಲ್ಲಿ ವಾಸಿಸುವ ಜಲಚರಗಳೂ (Aquatic) ತಬ್ಬಿಬ್ಬಾಗುತ್ತವೆ. ನೀರಿನ ರಭಸದಿಂದ ತಪ್ಪಿಸಿಕೊಳ್ಳಲು ಜಲಚರಗಳು ನದಿಯ ತೀರಕ್ಕೆ ಬರೋದು ಸಾಮಾನ್ಯವಾಗಿದೆ. ಆದರೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಉಪ್ಪಿನಂಗಡಿ ಸಮೀಪ ಹರಿಯುವ ಕುಮಾರಧಾರಾ ನದಿ (Kumaradhara River) ದಡದಲ್ಲಿ ಜನರಿಗೆ ಮೊಸಳೆ ಕಾಣಿಸಿಕೊಂಡಿದೆ.
ಉಪ್ಪಿನಂಗಡಿ ಸಮೀಪದ ನೆಕ್ಕಿಲ್ಲಾಡಿ ಎಂಬಲ್ಲಿನ ನಿವಾಸಿ ಶೇಕಬ್ಬ ಹಾಜಿ ಎಂಬವರು ಮನೆ ಕುಮಾರಧಾರಾ ನದಿ ತಟದಲ್ಲೇ ಇದ್ದು, ಜೂನ್ 18 ರಂದು ಮನೆಯ ಮಕ್ಕಳು ಆಟವಾಡಲೆಂದು ನದಿ ಕಿನಾರೆಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಕಿನಾರೆಗೆ ಮಕ್ಕಳು ಇನ್ನೇನು ತಲುಪಬೇಕು ಎನ್ನುವ ಸಮಯದಲ್ಲಿ ದೂರದಿಂದ ಕಿನಾರೆಯಲ್ಲಿ ಅಲುಗಾಡಿದ ಅನುಭವ ಮಕ್ಕಳಿಗೆ ಆಗಿದೆ. ಹತ್ತಿರಕ್ಕೆ ತೆರಳಿದ ಸಂದರ್ಭದಲ್ಲಿ ದೊಡ್ಡ ಗಾತ್ರದ ಮೊಸಳೆಯೊಂದು ಬಾಯಿ ಅಗಲಿಸಿ ವಿಶ್ರಾಂತಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ.
ತಕ್ಷಣವೇ ಮಕ್ಕಳು ಮನೆಯ ಹಿರಿಯ ಸದಸ್ಯರಿಗೆ ವಿಚಾರವನ್ನು ತಿಳಿಸಿದ್ದು,ಮನೆ ಮಂದಿ ಮೊಸಳೆಯ ಹತ್ತಿರಕ್ಕೆ ಹೋದ ಸಂದರ್ಭದಲ್ಲಿ ಎಲ್ಲರ ಮೇಲೂ ಆಕ್ರಮಣಕ್ಕೆ ಮುಂದಾಗಿದೆ. ತಕ್ಷಣವೇ ಮನೆ ಮಂದಿ ಅರಣ್ಯ ಇಲಾಖೆಗೆ ಈ ವಿಚಾರವನ್ನು ತಿಳಿಸಿದ್ದು, ಮೊಸಳೆ ಸೀದಾ ಕುಮಾರಧಾರಾ ನದಿಗೆ ಇಳಿದು ಮುಂದಕ್ಕೆ ಪ್ರಯಾಣ ಬೆಳೆಸಿದೆ.
ಕಳೆದ ವರ್ಷ ಉಪ್ಪಿನಂಗಡಿ ಬಳಿ ನೇತ್ರಾವತಿ ನದಿ ತೀರದಲ್ಲೂ ಎರಡು ಮೊಸಳೆಗಳು ಪತ್ತೆಯಾಗಿದ್ದವು. ಎರಡು ವರ್ಷಗಳಿಂದೀಚೆಗೆ ಈಭಾಗದ ಜನರಿಗೆ ನದಿಯಲ್ಲಿ ಮೊಸಳೆ ಇರುವ ವಿಚಾರ ತಿಳಿದಿದ್ದು, ನದಿಯಲ್ಲಿ ಮೀನು ಹಿಡಿಯಲು ತೆರಳುತ್ತಿದ್ದ ಜನ ಇನ್ನು ಮೊಸಳೆಯಿಂದ ತಮ್ಮನ್ನು ರಕ್ಷಿಸುವತ್ತ ಹೆಚ್ಚಿನ ಗಮನಹರಿಸಬೇಕಿದೆ. ಅಲ್ಲದೆ ಇತ್ತೀಚೆಗೆ ನದಿಗೆ ಯಥೇಚ್ಛವಾಗಿ ಮೀನು ಮರಿಗಳನ್ನು ಬಿಡಲಾಗಿದ್ದು, ಮೀನುಮರಿಗಳು ಇದೀಗ ಬೆಳೆದು ದೊಡ್ಡದಾಗಿದ್ದು, ಈ ಮೀನುಗಳ ಭೇಟೆಗಾಗಿಯೂ ಈ ಮೊಸಳೆಗಳು ನದಿಗೆ ಬಂದಿರುವ ಸಾಧ್ಯತೆಯೂ ಇದೆ.
Mangalore,Dakshina Kannada,Karnataka
June 20, 2025 3:35 PM IST