Last Updated:
ಯಕ್ಷಗಾನದಲ್ಲಿ ಇತ್ತೀಚೆಗೆ ಭಾರೀ ಪ್ರಸಿದ್ಧಿಯಾಗಿರುವ ವೇಷ ಗುಳಿಗ ವೇಷ. ಸಸಿಹಿತ್ಲು ಮೇಳದ ಉಮೇಶ್ ಕೊಳಂಬೆ ಈ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದು, ನೂರಾರು ಜನರನ್ನು ಆಕರ್ಷಿಸುತ್ತಿದ್ದಾರೆ.
ಮಂಗಳೂರು: ಕರಾವಳಿಯ (coastal karnataka) ಜನರ ಜೀವನದಲ್ಲಿ ಹಾಸುಹೊಕ್ಕಾಗಿರೋದು ಯಕ್ಷಗಾನ (yakshagana). ಪ್ರತೀ ದಿನ ರಾತ್ರಿ ಚೆಂಡೆಯ ಅಬ್ಬರ ಕೇಳದ ಊರುಗಳಿಲ್ಲ. ಹತ್ತಾರು ಯಕ್ಷಗಾನ ಮೇಳಗಳು ಕರಾವಳಿಯಲ್ಲಿ ಇದ್ದರೂ, ಪ್ರತೀ ದಿನ ಯಕ್ಷಗಾನ ನಡೆಯುತ್ತಿದ್ದರೂ ಯಕ್ಷಗಾನ ಪ್ರೇಕ್ಷಕರಿಗೇನೂ ಕೊರತೆಯಿಲ್ಲ. ಯಕ್ಷಗಾನದಲ್ಲಿ ಹಲವು ಪ್ರಸಿದ್ಧ ವೇಷಗಳಿದ್ದರೂ ಇತ್ತೀಚೆಗೆ ಭಾರೀ ಪ್ರಸಿದ್ಧಿಯಾಗಿರುವ ವೇಷ ಗುಳಿಗ ವೇಷ (guliga). ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ಯಕ್ಷಗಾನ ಮೇಳದ ಭಗವತಿ ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಬರುವ ಗುಳಿಗ ವೇಷ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡುತ್ತಿದೆ.
ದಿವಂಗತ ಕಣಿಲ ಕಣ್ಣಪ್ಪ ವಿರಚಿತ, ಆದಿ ಸುದಿಪು ಆಧಾರಿತ ಭಗವತಿ ಕ್ಷೇತ್ರ ಮಹಾತ್ಮೆ ಪ್ರಸಂಗ ಎಲ್ಲರ ಅಚ್ಚು ಮೆಚ್ಚಿನ ಪ್ರಸಂಗಗಳಲ್ಲಿ ಒಂದು. ಪ್ರಸಂಗದಲ್ಲಿ ಶ್ರೀ ದೇವಿ ದಾರಿಗನು ಎಂಬ ಅಸುರನ ಬಳಿ ಶ್ರೀ ಚಕ್ರ ಪಡೆಯಲು ಅಜ್ಜಿ ವೇಷದಲ್ಲಿ ಬರುವ ಗುಳಿಗನ ಪ್ರವೇಶವಾಗುತ್ತದೆ. ಈ ಸಂದರ್ಭವನ್ನು ಯಕ್ಷಗಾನ ಪ್ರಸಂಗದಲ್ಲಿ ಅದ್ಭುತವಾಗಿ ತೋರಿಸಲಾಗಿದೆ.
ಗುಳಿಗ ಪಾತ್ರವನ್ನು ಸಸಿಹಿತ್ಲು ಮೇಳದ ಉಮೇಶ್ ಕೊಳಂಬೆ ಎಂಬ ಕಲಾವಿದ ಅದ್ಭುತವಾಗಿ ನಿರ್ವಹಿಸುತ್ತಿದ್ದು, ಗುಳಿಗನ ಪ್ರವೇಶವನ್ನು ಕಾಣಲೆಂದೇ ನೂರಾರು ಜನ ಬರುತ್ತಾರೆ. ತೆಂಗಿನ ಗರಿಯ ದೀವಿಟಿಗೆಯಲ್ಲಿ ಯಕ್ಷಗಾನದ ರಂಗಸ್ಥಳಕ್ಕೆ ಬರುವ ಗುಳಿಗ ವೇಷಧಾರಿ ಎಲ್ಲರನ್ನೂ ತನ್ನ ಅಬ್ಬರದ ಮೂಲಕವೇ ಬೆಚ್ಚಿ ಬೀಳುವಂತೆ ಮಾಡುತ್ತಾರೆ.
ಅಬ್ಬರದ ಬೆಂಕಿಯ ಕೆನ್ನಾಲಿಗೆ ನಡುವೆ ಸಭಾ ಪ್ರವೇಶವಾಗುತ್ತದೆ. ಬಳಿಕ ಅತ್ತಿಂದಿತ್ತ ಓಡಾಡಿ ಬೆಂಕಿಯ ಜೊತೆಗೆ ಸರಸವಾಡಿ, ಗುಳಿಗನ ನೈಜ ಅಬ್ಬರದ ಅನಾವರಣ ಮಾಡುತ್ತಾರೆ. ಕುದಿಯುವ ಸಿಟ್ಟಿನ ಗುಳಿಗನ ಪ್ರವೇಶ ಕಲಾ ಆರಾಧಕರಿಗೆ ಬೇರೆಯ ಲೋಕವನ್ನೇ ತಂದಿದ್ದು ಮಾತ್ರ ಸುಳ್ಳಲ್ಲ.
Dakshina Kannada,Karnataka