Dakshina Kannada: ತುಳುನಾಡಿನ ಕೃಷಿ, ಯಕ್ಷಗಾನ ಮತ್ತು ಉತ್ಸವಗಳ ಸಂಧಿಕಾಲ ಈ ʼಪತ್ತನಾಜೆʼ! | Pattanaje: A time of agriculture, Yakshagana and festivals in Tulu Nadu!

Dakshina Kannada: ತುಳುನಾಡಿನ ಕೃಷಿ, ಯಕ್ಷಗಾನ ಮತ್ತು ಉತ್ಸವಗಳ ಸಂಧಿಕಾಲ ಈ ʼಪತ್ತನಾಜೆʼ! | Pattanaje: A time of agriculture, Yakshagana and festivals in Tulu Nadu!

Last Updated:

ದಕ್ಷಿಣ ಕನ್ನಡ: ತುಳುನಾಡಿನ ಪತ್ತನಾಜೆ ಹಬ್ಬವು ಮೇ 24 ಅಥವಾ 25ರಂದು ನಡೆಯುತ್ತದೆ. ಈ ದಿನದ ಬಳಿಕ ಯಕ್ಷಗಾನ, ನೇಮ, ಉತ್ಸವಗಳು ನಿಂತು, ತುಳುವರು ಕೃಷಿಯತ್ತ ಮುಖ ಮಾಡುತ್ತಾರೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ತುಳುನಾಡಿನ ಆಚರಣೆ, ಆರಾಧನೆಗಳಲ್ಲಿ ಕೃಷಿ ಬದುಕು(Agriculture Life ) ಒಂದಿಲ್ಲೊಂದು ರೀತಿ ತಳುಕು ಹಾಕಿಕೊಂಡಿರುತ್ತದೆ. ಇದಕ್ಕೆ ಇದಕ್ಕೆ “ಪತ್ತನಾಜೆ”ಯೂ(Pattanaje) ಹೊರತಲ್ಲ. ಪತ್ತನಾಜೆ ಎಂದರೆ ಪ್ರಸ್ತುತ ಸಾಲಿನ ಜಾತ್ರೆ, ಅಂಕ, ಆಯನ, ನೇಮ, ಯಕ್ಷಗಾನಕ್ಕೆ ಸಾಂಪ್ರದಾಯಿಕ ತೆರೆಬೀಳುವ ದಿನವೆಂದೇ ನಂಬಿಕೆ ತುಳುವರಲ್ಲಿದೆ. ಇಂದಿಗೂ ಅದೇ ನಿಯಮ(Rules) ಚಾಲ್ತಿಯಲ್ಲಿದೆ. ವೃಷಭ ಸಂಕ್ರಮಣ ಕಳೆದು ಬರುವ ಹತ್ತನೇ ದಿನವೇ ಪತ್ತನಾಜೆ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಪತ್ತನಾಜೆಯು ಪ್ರತೀವರ್ಷ ಮೇ 24 ಅಥವಾ 25ರಂದು ಬರುತ್ತದೆ‌. ಆ ದಿನವೇ “ಪತ್ತನಾಜೆ”.

ಕೃಷಿಕರಾದ ತುಳುವರು ಭತ್ತದ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಪತ್ತನಾಜೆಯ ಗಡುವು ಇಟ್ಟುಕೊಂಡಿದ್ದಾರೆ. ಇದು ಋತುಪರಿವರ್ತನೆಯ ನಿರ್ದಿಷ್ಟ ಗಡುವಿನ ದಿನ. ಬೇಸಿಗೆ ಹಾಗೂ ಮಳೆಗಾಲದ ಸಂಧಿಕಾಲವೂ ಹೌದು‌. ಆದ್ದರಿಂದಲೇ ಈ ದಿನದ ಬಳಿಕ ತುಳುವರು ತಮ್ಮೆಲ್ಲಾ ಮನೋರಂಜನೆ, ಉತ್ಸವ, ಆಚರಣಾದಿಗಳಿಗೆ ಕೊಂಚ ವಿರಾಮ ನೀಡಿ ಕೃಷಿಯತ್ತ ಮುಖ ಮಾಡುತ್ತಾರೆ. ಆದ್ದರಿಂದ ಪತ್ತನಾಜೆ ಬಳಿಕ ದೈವಗಳು ಘಟ್ಟ ಹತ್ತುತ್ತವೆ. “ಪತ್ತನಾಜೆ ಬಂತು, ಇಳಿದ ಯಕ್ಷಗಾನ ನಿಂತಿತು” ಎಂಬಂಥಹ ನಂಬಿಕೆಗಳನ್ನು ರೂಢಿಸಿಕೊಂಡು ಬಂದಿದ್ದಾರೆ. ಈ ಮೂಲಕ ದೈವಗಳಿಗೆ ನಡೆಯುವ ನೇಮ, ಅಗೇಲು, ತಂಬಿಲ ಮುಕ್ತಾಯಗೊಂಡರೆ, ಯಕ್ಷಗಾನ ಮೇಳಗಳೂ ತಿರುಗಾಟ ಸ್ಥಗಿತಗೊಳಿಸುತ್ತವೆ. ಜೊತೆಗೆ ಮದುವೆ, ಗೃಹಪ್ರವೇಶ ಇನ್ನಿತರ ಶುಭಕಾರ್ಯಗಳು ಕಡಿಮೆಯಾಗುತ್ತದೆ.

ಪತ್ತನಾಜೆಯಂದು ಹತ್ತು ಹನಿಯಾದರೂ ಮಳೆ ಸುರಿಯುತ್ತದೆ‌ ಎಂಬ ನಂಬಿಕೆ ತುಳುನಾಡಿನಲ್ಲಿ ಚಾಲ್ತಿಯಲ್ಲಿದೆ‌. ಅಂದರೆ ಪತ್ತನಾಜೆ ಮಳೆಗಾಲ ಆರಂಭಕ್ಕೆ ಮುಹೂರ್ತದ ದಿನವೆಂದೇ ನಂಬಿಕೆ. ಈ ದಿನ ಗದ್ದೆ ಉಳುಮೆ ಮಾಡುವ ಕೆಲಸ ಆರಂಭಿಸುತ್ತಾರೆ. ಮುಂದಿನ ಮಳೆಗಾಲ ಪೂರ್ತಿ ಕೃಷಿಯಲ್ಲಿ ತೊಡುಗುವ ಕಾರಣ ಪತ್ತನಾಜೆ ಕೃಷಿ ಚಟುವಟಿಕೆಗಳಿಗೆ ನಾಂದಿ ಹಾಡುವ ದಿನವೆಂದರೆ ತಪ್ಪಿಲ್ಲ‌. ಇಂದು ಕೃಷಿ ಬದುಕಿನಿಂದ ತುಳುವರು ವಿಮುಖರಾಗುತ್ತಿದ್ದರೂ, ಯಕ್ಷಗಾನ ಮೇಳ ತಿರುಗಾಟ, ನೇಮ, ಉತ್ಸವಗಳು ಮಾತ್ರ ಇಂದಿಗೂ ಪತ್ತನಾಜೆ ಬಳಿಕ ಇಲ್ಲವೇ ಇಲ್ಲ ಎನ್ನಬಹುದು.

ಈ ಬಾರಿಯ ಯಕ್ಷಗಾನ ಮೇಳಗಳ ತಿರುಗಾಟಕ್ಕೆ ಅಂತಿಮ ತೆರೆ ಎಳೆಯುವ ಕಾಲ ಸನ್ನಿಹಿತವಾಗಿದೆ. ನಾಳೆಯಿಂದ ಹೆಚ್ಚಿನ ಎಲ್ಲಾ ಯಕ್ಷಗಾನ ಮೇಳಗಳ ಕಲಾವಿದರು ತಮ್ಮ ಗೆಜ್ಜೆ ಬಿಚ್ಚಲಿದ್ದಾರೆ. ಈ ಮೂಲಕ ಸುಮಾರು ಆರು ತಿಂಗಳ ಯಕ್ಷಗಾನ ಮೇಳಗಳ ತಿರುಗಾಟ ಸ್ತಬ್ಧವಾಗಲಿದೆ‌. ಜೊತೆಗೆ ಧ್ವಜವೇರಿ ಆಗುವ ಉತ್ಸವ ಸಂಪ್ರದಾಯ ಮಾದರಿಯ ನೇಮ, ಆಯನಗಳು ಮುಕ್ತಾಯವಾಗುತ್ತದೆ.