Last Updated:
ಕಲ್ಲು, ಮಣ್ಣು, ಮರಳು ಮತ್ತು ಸಿಮೆಂಟ್ ಪೈಪು ಮುಂತಾದ ಪರಿಕರಗಳಿಂದ ನಿರ್ಮಿಸುತ್ತಿರುವ ಈ ತಾತ್ಕಾಲಿಕ ಸೇತುವೆ ಮಳೆಗಾಲದಲ್ಲಿ ನೆರೆ ನೀರಿಗೆ ಹಾನಿಯಾಗುತ್ತದೆ. ಬಳಿಕ ಮುಂದಿನ ವರ್ಷ ಬೇಸಿಗೆ ಕಾಲದಲ್ಲಿ ಮತ್ತೆ ಪುನರ್ ನಿರ್ಮಾಣ ಮಾಡಬೇಕಾಗುತ್ತದೆ.
ದಕ್ಷಿಣ ಕನ್ನಡ: ಮಕ್ಕಳು ಯುವಕರು, ವೃದ್ದರು ಎನ್ನದೇ, ರಾಜಕೀಯ ನೋಡದೇ ಗ್ರಾಮಕ್ಕೆ ಗ್ರಾಮವೇ ಒಂದಾಗಿ ಸೇತುವೆಯೊಂದನ್ನು(Bridge) ಕಟ್ಟುವ ಕೆಲಸವನ್ನು ದಕ್ಷಿಣ ಕನ್ನಡ ಜಿಲ್ಲೆಯ(Dakshina Kannada District) ಗ್ರಾಮವೊಂದರಲ್ಲಿ ಆರಂಭಿಸಿದ್ದಾರೆ. ಮಕ್ಕಳು, ವೃದ್ದರು ಸೇರಿದಂತೆ ಎಲ್ಲಾ ವಯೋಮಾನದ ಜನರೆಲ್ಲಾ ಸೇರಿ ಮಣ್ಣು, ಕಲ್ಲು, ಮರಳು ಹೊರುತ್ತಿರುವ ದೃಶ್ಯ ಕಂಡು ಬಂದದ್ದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಮಜ್ಜಾರುಕಡವು ಎಂಬಲ್ಲಿನ ಕುಮಾರಧಾರಾ ನದಿ(Kumaradhara River) ತೀರದಲ್ಲಿ.
ಇಲ್ಲಿನ ಬಳ್ಪ ಮತ್ತು ಕೇನ್ಯ ಗ್ರಾಮದ ಬಹುತೇಕ ಎಲ್ಲಾ ಗ್ರಾಮಸ್ಥರು ಸೇರಿಕೊಂಡು ತಮ್ಮ ಗ್ರಾಮಕ್ಕೊಂದು ತಾತ್ಕಾಲಿಕ ಸೇತುವೆ ನಿರ್ಮಿಸಲು ಮುಂದಾಗಿದ್ದಾರೆ. ಸಂಸದರ ಆದರ್ಶ ಗ್ರಾಮ ಬಳ್ಪ ಮತ್ತು ಕೇನ್ಯ ಗ್ರಾಮಸ್ಥರು ತಮ್ಮ ಅಗತ್ಯತೆಗಳಿಗಾಗಿ ತಾಲೂಕು ಕೇಂದ್ರ ಕಡಬವನ್ನು ಸಂಪರ್ಕಿಸಬೇಕಾದರೆ ಸುಳ್ಯ ತಾಲೂಕಿನ ಪಂಜ ಮೂಲಕ ಸುಮಾರು 20 ಕಿ.ಮೀ ಸಂಚರಿಸಬೇಕು. ಆದರೆ ತಮ್ಮ ಗ್ರಾಮದಲ್ಲಿ ಹರಿಯುತ್ತಿರುವ ಕುಮಾರಧಾರಾ ನದಿಯನ್ನು ದಾಟಿದರೆ ಬರೀ 6 ಕಿ.ಮೀ ಕ್ರಮಿಸಿದರೆ ಕಡಬ ತಾಲೂಕು ಕೇಂದ್ರ 3 ಕಿ.ಮೀ ಸಂಚರಿಸಿದರೆ ಮಂಗಳೂರು-ಬೆಂಗಳೂರು ನಡುವಿನ ಕೋಡಿಂಬಾಳ ರೈಲ್ವೆ ನಿಲ್ದಾಣ ಸಿಗುತ್ತದೆ.
ಇದನ್ನೂ ಓದಿ: Mandya: ಗೃಹಲಕ್ಷ್ಮಿ ಹಣದಲ್ಲಿ ಸರ್ಕಾರಿ ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆ ಕೊಟ್ಟ ಮಹಿಳೆ!
ಈ ನಿಟ್ಟಿನಲ್ಲಿ ಗ್ರಾಮಸ್ಥರೇ ಸೇರಿಕೊಂಡು ಕುಮಾರಧಾರಾ ನದಿಯ ಮಜ್ಜಾರುಕಡವು ಎಂಬಲ್ಲಿ ತಾತ್ಕಾಲಿಕ ಸೇತುವೆಯೊಂದನ್ನು ನಿರ್ಮಾಣ ಮಾಡಲು ತೀರ್ಮಾನಿಸಿದರು. ಸೇತುವೆ ನಿರ್ಮಾಣ ಸಮಿತಿಯನ್ನು ರಚಿಸಿ ಗ್ರಾಮಸ್ಥರ ಸಹಕಾರ ಪಡೆದು ಸುಮಾರು ಐದು ಲಕ್ಷ ರೂಪಾಯಿ ಮೊತ್ತವನ್ನು ಸಂಗ್ರಹಿಸುವ ಗುರಿಯೊಂದಿಗೆ ಬೇಸಿಗೆ ಕಾಲದಲ್ಲಿ ಮಾತ್ರ ಉಪಯೋಗಕ್ಕೆ ಬರುವಂತಹ ತಾತ್ಕಾಲಿಕ ಸೇತುವೆ ಕೆಲಸ ಆರಂಭಿಸಿದ್ದಾರೆ. ಬಳ್ಪ,ಕೇನ್ಯ,ಮಜ್ಜಾರು ಭಾಗದ ವೃದ್ದರು, ಯುವಕರು ಮಕ್ಕಳೆನ್ನದೇ ಸುಮಾರು 200 ಕ್ಕೂ ಅಧಿಕ ಮಂದಿ ಗ್ರಾಮಸ್ಥರು ಶ್ರಮದಾನದ ಮೂಲಕ ಸೇತುವೆ ಕೆಲಸಕ್ಕೆ ಸಹಕಾರ ನೀಡುತ್ತಿದ್ದಾರೆ.
ಕಲ್ಲು, ಮಣ್ಣು, ಮರಳು ಮತ್ತು ಸಿಮೆಂಟ್ ಪೈಪು ಮುಂತಾದ ಪರಿಕರಗಳಿಂದ ನಿರ್ಮಿಸುತ್ತಿರುವ ಈ ತಾತ್ಕಾಲಿಕ ಸೇತುವೆ ಮಳೆಗಾಲದಲ್ಲಿ ನೆರೆ ನೀರಿಗೆ ಹಾನಿಯಾಗುತ್ತದೆ. ಬಳಿಕ ಮುಂದಿನ ವರ್ಷ ಬೇಸಿಗೆ ಕಾಲದಲ್ಲಿ ಮತ್ತೆ ಪುನರ್ ನಿರ್ಮಾಣ ಮಾಡಬೇಕಾಗುತ್ತದೆ. ಈ ಸಂಪರ್ಕ ಸೇತುವೆ ಕಡಬ, ಕೋಡಿಂಬಾಳ ರೈಲ್ವೆ ನಿಲ್ದಾಣ , ಪ್ರಸಿದ್ಧ ಪ್ರವಾಸಿ ಮತ್ತು ಕಾರಣಿಕ ಕ್ಷೇತ್ರಗಳಾದ ಮಜ್ಜಾರು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಸೇರಿದಂತೆ ಮಂಗಳೂರು ಮತ್ತು ಸುಳ್ಯ, ಮಡಿಕೇರಿ, ಕೇರಳ ಕಡೆಗೂ ಸಂಪರ್ಕ ಕೊಂಡಿಯಾಗಲಿದೆ.
ಆದ್ದರಿಂದ ಸರಕಾರವು ಈ ಭಾಗದಲ್ಲಿ ಸುಮಾರು 200 ರಿಂದ 300ಮೀ ಉದ್ದದ ಒಂದು ಸುಸಜ್ಜಿತವಾದ ಸೇತುವೆ ನಿರ್ಮಿಸಲು ಮುಂದಾಗಬೇಕಿದೆ. ಸಂಸದರ ಆದರ್ಶ ಗ್ರಾಮವಾಗಿರುವುದರಿಂದ ಈ ಸೇತುವೆ ಸಂಪರ್ಕ ಕಲ್ಪಿಸುವ ಬಳ್ಪ ಗ್ರಾಮದ ರಸ್ತೆಗಳು ಬಹುತೇಕ ಎಲ್ಲಾ ಕಡೆಗಳಲ್ಲಿ ಈಗಾಗಲೇ ಕಾಂಕ್ರೀಟೀಕರಣವಾಗಿದೆ. ಆದ್ದರಿಂದ ಸಂಬಂಧಿಸಿದ ಇಲಾಖಾಧಿಕಾರಿಗಳು ಮತ್ತು ರಾಜಕಾರಣಿಗಳು ಈ ಭಾಗದಲ್ಲಿ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Dakshina Kannada,Karnataka
February 25, 2025 11:13 AM IST