Last Updated:
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಘಟ್ಟದಲ್ಲಿ ಹುಟ್ಟು ನೀರಿನ ಸೆಲೆಗಳು ಜೀವಂತವಾಗಿದೆ. ಸಾಮಾನ್ಯವಾಗಿ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನೀರಿನ ಸೆಲೆ ಬತ್ತಿ ಹೋಗುತ್ತವೆ.
ದಕ್ಷಿಣ ಕನ್ನಡ: ಕರಾವಳಿಯಲ್ಲಿ(Coastal) ಬೇಸಿಗೆ ಮಳೆ ಇಳೆಗೆ ಹರ್ಷ ತಂದಿದೆ. ಕಾದ ಕಬ್ಬಿಣದಂತಾಗಿದ್ದ ಭೂಮಿಗೆ ಮಳೆ(Rainfall) ತಂಪೆರೆದಿದೆ. ಅದರ ಜೊತೆಗೆ ಬಿರು ಬೇಸಿಗೆಯ ತಾಪಕ್ಕೆ ಒಣಗಿದ್ದ ಹುಲ್ಲುಗಾವಲುಗಳಿಗೂ ಮಳೆ ಜೀವಕಳೆ ತಂದಿದೆ. ಪಶ್ಚಿಮಘಟ್ಟ(Western Ghat) ಮತ್ತು ಅದರ ತಪ್ಪಲಿನ ಭಾಗದಲ್ಲಿ ನಿರಂತರವಾಗಿ ಪ್ರತಿ ದಿನ ಉತ್ತಮ ಮಳೆಯಾಗುತ್ತಿದ್ದು, ಪಶ್ಚಿಮ ಘಟ್ಟದಿಂದ ಹರಿದುಬರುವ ಹಳ್ಳ- ತೊರೆಗಳಲ್ಲಿ ನೀರಿನ ಒರತೆ ಜಾಸ್ತಿಯಾಗಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಘಟ್ಟದಲ್ಲಿ ಹುಟ್ಟು ನೀರಿನ ಸೆಲೆಗಳು ಜೀವಂತವಾಗಿದೆ. ಸಾಮಾನ್ಯವಾಗಿ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನೀರಿನ ಸೆಲೆ ಬತ್ತಿ ಹೋಗುತ್ತವೆ. ಅರಣ್ಯಗಳಿಂದ ಬರುವ ಸಣ್ಣ ಹಳ್ಳ, ತೊರೆಗಳಲ್ಲಿ ನೀರಿನ ಹರಿವು ಕ್ಷೀಣವಾಗುತ್ತದೆ. ಆದರೆ ಈ ಬಾರಿ ಬೇಸಿಗೆ ಮಳೆ ಉತ್ತಮವಾಗಿ ಸುರಿದಿರೋದ್ರರಿಂದ ಹಳ್ಳ, ತೊರೆಗಳು ಜೀವ ತುಂಬಿ ಹರಿಯುತ್ತಿವೆ.
ಇದನ್ನೂ ಓದಿ: Dakshina Kannnada: ಪೊಳಲಿ ಶ್ರೀರಾಜರಾಜೇಶ್ವರಿ ಜಾತ್ರೆಯಲ್ಲಿ ಕಲ್ಲಂಗಡಿ ಹಣ್ಣೇ ಪ್ರಸಾದ!
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸೇರಿದಂತೆ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ನೀರಿನ ಸೆಲೆಗಳಿಗೆ ಮಳೆಯ ಬಿರುಸು ಚೈತನ್ಯ ನೀಡಿದೆ. ಕಾಡಿನಿಂದ ಹರಿದು ಬರುವ ಶುದ್ಧ ನೀರು ಮಳೆಯ ಕಾರಣದಿಂದ ತುಂಬಿ ಹರಿಯುತ್ತಿದ್ದು, ಹೊಳೆ ಸಮೀಪದ ನಿವಾಸಿಗಳಲ್ಲಿ ಖುಷಿ ತಂದಿದೆ. ಸಾಮಾನ್ಯವಾಗಿ ಈ ಹೊಳೆಗಳಿಗೆ ಬೇಸಿಗೆ ಕಾಲದಲ್ಲಿ ಕಟ್ಟು ನಿರ್ಮಿಸಿ ತೋಟಗಳ ಅಂತರ್ಜಲ ವೃದ್ಧಿ ಮಾಡುತ್ತಿದ್ದ ಕೃಷಿಕರಿಗೆ ಈ ಬಾರಿ ನೀರಿನ ಅಭಾವ ಅಷ್ಟಾಗಿ ಕಾಣಿಸಿಲ್ಲ.
ಜೋರಾಗಿ ಸುರಿದ ಮಳೆಗೆ ಹೊಳೆಯಲ್ಲಿ ನೀರು ತುಂಬಿ ಹಲವು ಕಡೆಗಳಲ್ಲಿ ಕೃಷಿಕರಿಂದ ನಿರ್ಮಾಣದ ಕಟ್ಟು ಕೂಡಾ ಕೊಚ್ಚಿ ಹೋಗಿದೆ. ಮಳೆ ಮತ್ತೂ ಕೆಲ ದಿನ ಮುಂದುವರಿಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಘಟ್ಟದ ತಪ್ಪಲಿನ ಜನರು ಈ ಬಾರಿ ನೀರಿನ ಅಭಾವವನ್ನು ನೀಗಿದ ಸಮಾಧಾನದಲ್ಲಿದ್ದಾರೆ.
Dakshina Kannada,Karnataka
April 09, 2025 2:15 PM IST