Last Updated:
ಪುತ್ತೂರು ನಗರ ಸಭೆ ಇ-ತ್ಯಾಜ್ಯ ಸಂಗ್ರಹಿಸಿ ವೈಜ್ಞಾನಿಕ ವಿಲೇವಾರಿ ಮಾಡಲು ಹೊಸ ಯೋಜನೆ ಆರಂಭಿಸಿದೆ. ಮಂಗಳೂರಿನ ಖಾಸಗಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು, ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಿದೆ.
ದಕ್ಷಿಣ ಕನ್ನಡ: ಹಸಿತ್ಯಾಜ್ಯದಿಂದ ಸಿಎನ್ಜಿ ಉತ್ಪಾದಿಸುವ (CNG Production From Vegetable Waste) ಮೂಲಕ ರಾಜ್ಯದಲ್ಲಿ ಮಾದರಿಯಾಗಿಸಿಕೊಂಡಿದ್ದ, ಪುತ್ತೂರು ನಗರ ಸಭೆ (Puttur City Corporation ) ಇದೀಗ ಮತ್ತೊಂದು ಹೊಸ ಯೋಜನೆ ಕೈಗೆತ್ತಿಕೊಂಡಿದೆ. ನಿತ್ಯ ಬಳಕೆಯ ಇಲೆಕ್ಟ್ರಾನಿಕ್ಸ್ ಉಪಕರಣಗಳ ತ್ಯಾಜ್ಯ ಸಂಗ್ರಹಿಸಿ (E-waste) ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಮುಂದಾಗಿದೆ.
ಪುತ್ತೂರು ನಗರ ಸಭೆಯಿಂದ ಸಂಗ್ರಹವಾಗುವ ತ್ಯಾಜ್ಯದ ಜೊತೆಯಾಗಿ ಬರುತ್ತಿರುವ ಇಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ವಿಂಗಡಿಸಿ ವಿಲೇವಾರಿ ಮಾಡುವ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ನಗರ ಸಭಾ ಕಚೇರಿ ಬಳಿ ಘಟಕ ನಿರ್ಮಿಸಿ, ಅದರಲ್ಲಿ ಸಂಗ್ರಹಿಸುವ ಕಾರ್ಯ ಆರಂಭಗೊಂಡಿದೆ. ನಗರ ಸಭೆಯಲ್ಲಿ ಸಂಗ್ರಹವಾದ ಇ-ತ್ಯಾಜ್ಯವನ್ನು ಮಂಗಳೂರಿನ ಬೈಕಂಪಾಡಿಯಲ್ಲಿರುವ ಮೂಕಾಂಬಿಕಾ ಮೆಟಲ್ ರಿಫೈನರ್ ಎಂಬ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ನಗರ ಸಭೆಯಿಂದ ಸಂಗ್ರಹಿಸಿದ ಇ ತ್ಯಾಜ್ಯವನ್ನು ವಿಲೇವಾರಿಗೆ ಮಂಗಳೂರಿನ ಖಾಸಗಿ ಸಂಸ್ಥೆಗೆ ನೀಡಲಾಗುತ್ತದೆ.
ಪ್ರಾರಂಭದಲ್ಲಿ ನಗರ ಸಭೆಯ ಪ್ರತಿ ಮನೆ ಮನೆಯಿಂದ ಇ-ತ್ಯಾಜ್ಯ ಸಂಗ್ರಹಕ್ಕೆ ಚಾಲನೆ ನೀಡಲಾಗವುದು. ಗ್ರಾಮೀಣ ಪ್ರದೇಶಗಳಲ್ಲಿರುವ ಇ-ತ್ಯಾಜ್ಯವನ್ನು ಸಂಗ್ರಹಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಅವರ ಮೂಲಕ ಇ-ತ್ಯಾಜ್ಯ ಸಂಗ್ರಹ ಕೇಂದ್ರ ತೆರೆದು ಅಲ್ಲಿಯೂ ತ್ಯಾಜ್ಯ ಸಂಗ್ರಹಣೆಗೆ ಚಾಲನೆ ನೀಡಲಾಗುತ್ತದೆ. ಶಿಕ್ಷಣ ಸಂಸ್ಥೆಗಳಿಂದ ಸಂಗ್ರಹವಾಗುವ ಇ-ತ್ಯಾಜ್ಯವನ್ನು ನಗರ ಸಭೆಯಿಂದ ತಿಂಗಳಿಗೊಂದು ಬಾರಿ ಸಂಗ್ರಹಿಸಿ ಮಂಗಳೂರಿಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ.
ಇ-ತ್ಯಾಜ್ಯ ಎಂದರೇನು?
ಸಾರ್ವಜನಿಕರಿಂದ ಸಂಗ್ರಹವಾಗುವ ಇ-ತ್ಯಾಜ್ಯವನ್ನು ನೇರವಾಗಿ ಮಂಗೂರಿನ ಸಂಸ್ಥೆಗೆ ನೀಡಲಾಗುತ್ತದೆ. ಅಲ್ಲಿ ಅವರು ವಿವಿಧ ಬಿಡಿ ಭಾಗಗಳನ್ನು ಪ್ರತ್ಯೇಕಿಸಿ ವೈಜ್ಞಾನಿಕ ವಿಧಾನದಲ್ಲಿ ವಿಲೇವಾರಿ ಮಾಡಲಿದ್ದಾರೆ. ದಿನ ನಿತ್ಯದ ಬಳಕೆಯಲ್ಲಿರುವ ಮೊಬೈಲ್, ಅದರ ವಿವಿಧ ಬಿಡಿ ಭಾಗಗಳು, ಟ್ಯೂಬ್ ಲೈಟ್, ಎಲ್ಇಡಿ ಬಲ್ಬ್, ಕೇಬಲ್, ಮದರ್ ಬೋರ್ಡ್ಗಳು ಬ್ಯಾಟರಿ, ಕಂಪ್ಯೂಟರ್ ಮತ್ತು ವಿವಿಧ ಬಾಗಗಳು, ಸಿಮ್ ಕಾರ್ಡ್, ಬ್ಯಾಟರಿಗಳು ಸೇರಿದಂತೆ ವಿವಿಧ ಇಲೆಕ್ಟ್ರಾನಿಕ್ ಉಪಕರಣಗಳ ಬಿಡಿ ಭಾಗಗಳನ್ನು ಬಳಕೆ ಮಾಡಿ ಬಿಸಾಡುವ ಉಪಕರಣಗಳನ್ನು ಒಳಗೊಂಡಿದೆ.
ಸಾರ್ವಜನಿಕರು ನಗರಸಭೆಯೊಂದಿಗೆ ಕೈಜೋಡಿಸಲು ಮನವಿ
ರಿಮೋಟ್ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಕೆ ಮಾಡುವ ಬ್ಯಾಟಿರಿಗಳು ಸರಿಯಾಗಿ ವಿಲೇವಾರಿಯಾಗುವುದಿಲ್ಲ. ಅದು ಬಹಳಷ್ಟು ಅಪಾಯಕಾರಿಯಾಗಿದೆ. ಒಂದು ಬ್ಯಾಟರಿಯಿಂದ ಒಂದು ಎಕರೆಯಷ್ಟು ವಿಷ ಉತ್ಪಾದಿಸುವ ಶಕ್ತಿಯಿದೆ. ಭೂಮಿಯ ಫಲವತ್ತೆತೆ ನಾಶ ಮಾಡುವ ಶಕ್ತಿಯಿದೆ, ಹೀಗಾಗಿ ಬಳಸಿದ ಬ್ಯಾಟರಿಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ನಗರ ಸಭೆಯ ಇ-ತ್ಯಾಜ್ಯ ಸಂಗ್ರಹ ಘಟಕಕ್ಕೆ ನೀಡಿ ನೂತನ ವ್ಯವವಸ್ಥೆಗೆ ಸಾರ್ವಜನಿಕರು ಕೈಜೋಡಿಸಲು ನಗರಸಭೆ ಸಾರ್ವಜನಿಕರ ಸಹಕಾರವನ್ನೂ ಕೋರಿದೆ.
ಬೀದಿ ನಾಟಕ, ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ
ಇ-ತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಸಂಪೂರ್ಣ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಉದ್ದಿಮೆ ಹಾಗೂ ಸಾರ್ವಜನಿಕರಿಗೆ ಬಟ್ಟೆ ಚೀಲ ವಿತರಣೆ ಮಾಡುವುದು. ಇ-ತ್ಯಾಜ್ಯ ಮತ್ತು ಪ್ಲಾಸ್ಟಿಕ ತ್ಯಾಜ್ಯಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ಕಳೆದ ಮೇ.ತಿಂಗಳಿಂದ ಜಾಗೃತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದ್ದು ಬೀದಿ ನಾಟಕ, ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ, ಚರ್ಚೆಗಳನ್ನು ನಡೆಸುವ ಮೂಲಕ ಹಲವು ಕಾರ್ಯಕ್ರಮಗಳನ್ನು ಈಗಾಗಲೇ ನಡೆಸಲಾಗಿದೆ ಎಂದು ನಗರಸಭಾ ಆಯುಕ್ತ ಮಧು.ಎಸ್.ಮನೋಹರ್ ಮಾಹಿತಿ ನೀಡಿದ್ದಾರೆ.
Dakshina Kannada,Karnataka
June 12, 2025 11:32 AM IST