Last Updated:
ಮಂಗಳೂರಿನ ಸಸಿಹಿತ್ಲು ಬೀಚ್ ಪ್ರವಾಸಿಗರ ಅಚ್ಚು ಮೆಚ್ಚಿನ ತಾಣವಾಗಿದೆ. ವಯಸ್ಕರಿಗೆ 20 ರೂಪಾಯಿ, ಮಕ್ಕಳಿಗೆ 10 ರೂಪಾಯಿ ಟಿಕೆಟ್ ದರ. ಸೀವಾಕ್ ಪಾಥ್, ನದಿ-ಕಡಲ ಸೇರುವ ಎಂಡ್ ಪಾಯಿಂಟ್, ಹಸಿರ ನಡುವೆ ಕಡಲ ನೀರು ನದಿ ಸೇರೋ ದೃಶ್ಯ ಆಕರ್ಷಕ.
ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಗೆ ಪ್ರವಾಸಕ್ಕೆ ಬರುವ ಅತೀ ಹೆಚ್ಚು ಪ್ರವಾಸಿಗರು (Tourist) ಹೋಗೋದು ಒಂದು ದೇವಸ್ಥಾನಗಳಿಗೆ (Hindu Temple) ಇಲ್ಲವಾದರೆ ಬೀಚ್ಗಳಿಗೆ. ಮಂಗಳೂರಿನ ಪ್ರಸಿದ್ಧ ಬೀಚ್ಗಳಲ್ಲಿ (Mangaluru Beach) ಈ ಸಮಯದಲ್ಲಿ ಪ್ರವಾಸಿಗರ ದಂಡೇ ನೆರೆದಿರುತ್ತದೆ. ಆದರೆ ಪ್ರವಾಸಿಗರು ಇನ್ನೂ ತಲುಪದ ಹಲವು ಸ್ಥಾನಗಳು ಮಂಗಳೂರಿನಲ್ಲಿವೆ. ಮಂಗಳೂರಿನಿಂದ ಕೆಲವೇ ಕೆಲವು ಕಿಲೊಮೀಟರ್ ದೂರವಿರುವ ಸುರತ್ಕಲ್ನ ಮುಕ್ಕದ ಸಸಿಹಿತ್ಲು ಬೀಚ್ (Sasihitlu Beach) ಈಗ ನಿಜಕ್ಕೂ ಹೆಚ್ಚು ಪ್ರವಾಸಿಗರ ಪಾಲಿನ ಸ್ವರ್ಗವಾಗಿದೆ.
ಸಸಹಿತ್ಲು ಬೀಚ್ ಪ್ರವಾಸಿಗರ ಅಚ್ಚು ಮೆಚ್ಚಿನ ತಾಣವಾಗಿತ್ತು. ಒಂದೆಡೆ ಕಡಲು ಮತ್ತೊಂದೆಡೆ ಶಾಂಭವಿ ನದಿ ಸೇರುವ ಎಂಡ್ ಪಾಯಿಂಟ್ ಸಸಹಿತ್ಲು. ಆದರೆ ಇದೀಗ ಸಸಿಹಿತ್ಲು ಬೀಚ್ನ ಸೌಂದರ್ಯಕ್ಕೆ ಅದ್ಭುತ ಸ್ಪರ್ಶ ನೀಡಲಾಗಿದೆ. ಮುಕ್ಕದಿಂದ ಎಡಕ್ಕೆ ಸಾಗಿ ಕಡಲ ತೀರದ ದಾರಿಯಲ್ಲೇ ಹೋದಾಗ ಸಸಿಹಿತ್ಲು ಬೀಚ್ ಗೆ ಪ್ರವೇಶ ಸಿಗುತ್ತದೆ.
ವಯಸ್ಕರಿಗೆ 20 ರೂಪಾಯಿ, ಮಕ್ಕಳಿಗೆ 10 ರೂಪಾಯಿ ಟಿಕೆಟ್ ದರವೂ ಇದೆ. ಆದರೆ ಕೊಟ್ಟ ಹಣಕ್ಕೆ ಸಸಿಹಿತ್ಲು ಬೀಚ್ ನಲ್ಲಿ ಮೋಸ ಆಗೋಕೆ ಸಾಧ್ಯವೇ ಇಲ್ಲ. ಯಾಕೆಂದರೆ ಅದ್ಭುತ ಪೃಕೃತಿಯ ಗಣಿ ಸಸಿಹಿತ್ಲು ಬೀಚ್. ಎಂಡ್ ಪಾಯಿಂಟ್ ನಲ್ಲಿ ನೂತನ ಸೀವಾಕ್ ನಿರ್ಮಾಣ ಆಗಿದ್ದು, ಸಂಜೆಯ ವೇಳೆಯ ವಾಯು ವಿಹಾರಕ್ಕೆ ಹೇಳಿ ಮಾಡಿಸಿದ ಜಾಗವಾಗಿದೆ.
ಸೀ ವಾಕ್ ಎಂಡ್ ತನಕ ದ್ವಿಚಕ್ರ ವಾಹನಗಳು ಹೋಗುತ್ತವೆ. ಕಾರ್ನಲ್ಲಿ ಬಂದ ಪ್ರವಾಸಿಗರು ನದಿ ಮತ್ತು ಸಮುದ್ರ ಸೇರುವ ನಡುವಿನ ಜಾಗದಲ್ಲೇ ನಡೆದುಕೊಂಡು ಹೋಗಬಹುದು. ಮುನ್ನೂರು ಮೀಟರ್ನಷ್ಟು ಸೀವಾಕ್ ಪಾಥ್ ಇರೋದರಿಂದ ಕಡಲ ತಂಗಾಳಿಯಲ್ಲಿ ವಿಹಾರ ಮಾಡೋದರ ಅನುಭವ ವರ್ಣಿಸಲು ಅಸಾಧ್ಯ. ಸೀವಾಕ್ನ ಇನ್ನೊಂದು ಬದಿ ಮತ್ತೊಂದು ಸೀವಾಕ್ ಇದೆ. ಆ ಭಾಗಕ್ಕೆ ಹೆಜಮಾಡಿ ಮೂಲಕ ಸಂಪರ್ಕವಿದೆ. ಇಲ್ಲಿ ಕಲ್ಲಿನ ಮೇಲೆ ನಿಂತು ಮೀನಿಗೆ ಗಾಳ ಹಾಕೋರು ಕೂಡಾ ಇದ್ದಾರೆ. ಹಸಿರ ನಡುವೆ ಕಡಲ ನೀರು ನದಿ ಸೇರೋದನ್ನು ನೋಡೋದು ಕೂಡಾ ಅದ್ಭುತವೇ. ಒಟ್ಟಿನಲ್ಲಿ ಮಂಗಳೂರಿಗೆ ತೆರಳುವ ಪ್ರವಾಸಿಗರು ಸಸಿಹಿತ್ಲು ಎಂಡ್ ಪಾಯಿಂಟ್ ಗೆ ಒಮ್ಮೆ ಭೇಟಿ ನೀಡಿದರೆ ಬಂದ ಪ್ರವಾಸಕ್ಕೇ ಒಂದು ಅರ್ಥ ಸಿಗೋದು ಮಾತ್ರ ಸುಳ್ಳಲ್ಲ.
Dakshina Kannada,Karnataka