Last Updated:
ಪ್ರಶ್ನಾಚಿಂತನೆಯಲ್ಲಿ ಮುಗೇರರ ಮೂಲ ದೇವರಾದ ಬೆರ್ಮೆರ್ ಗೆ ಸಂಬಂಧಪಟ್ಟ ಜಾಗ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ ಇದೀಗ ಬೆರ್ಮೆರ್ ಮತ್ತು ವೀರ ಪುರುಷರಾದ ಮುಗೇರ್ಕಳರ ಆರಾಧನೆಗೆ ಕ್ಷೇತ್ರವನ್ನು ನಿರ್ಮಿಸುವ ಕಾರ್ಯ ಆರಂಭಗೊಂಡಿದೆ.
ದಕ್ಷಿಣ ಕನ್ನಡ: ತುಳುನಾಡಿನ(Tulunadu) ದೈವಾರಾಧನೆಯಲ್ಲಿ ಅತ್ಯಂತ ಮುಂಚೂಣಿಯಲ್ಲಿದ್ದವರು ಇಲ್ಲಿನ ಮೂಲನಿವಾಸಿಗಳಲ್ಲಿ ಒಬ್ಬರಾದ ಮುಗೇರರು(Mugeraru). ಈ ಮುಗೇರ ಸಮುದಾಯದ ಮೂಲ ದೇವರು ಬೆರ್ಮೆರ್ (ಬ್ರಹ್ಮರು) ಆಗಿದ್ದರೂ, ಈ ದೇವರ ಮೂಲಸ್ಥಾನ ಯಾವುದು ಎನ್ನುವ ಮಾಹಿತಿ ಮಾತ್ರ ಈ ಸಮುದಾಯಕ್ಕೆ ತಿಳಿದಿರಲಿಲ್ಲ. ಇದೀಗ ಈ ಸಮುದಾಯದ ಮೂಲದೇವರಾದ ಬೆರ್ಮೆರ್ ರ ಮೂಲಸ್ಥಾನ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ(Dakshina Kannada District) ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಸಮೀಪದ ಬೆರ್ಮೆರೆಗುಂಡ ಎಂಬಲ್ಲಿ ಈ ಮೂಲದೇವರು ನೆಲೆಯಾಗಿದ್ದರು ಎನ್ನುವ ವಿಚಾರ ಪ್ರಶ್ನಾಚಿಂತನೆಯಿಂದ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಆರು ಜಿಲ್ಲೆಗಳ ಮುಗೇರ ಸಮುದಾಯ ಕ್ಷೇತ್ರಕ್ಕೆ ಆಗಮಿಸಿ ಕಾಣಿಕೆ ಮತ್ತು ಪೂಜೆ ಸಮರ್ಪಿಸುತ್ತಿದೆ.
ತುಳುನಾಡಿನ ಮೂಲನಿವಾಸಿಗಳೆಂದೇ ಕರೆಯಲ್ಪಡುವ ಮುಗೇರ ಸಮುದಾಯ ದೈವಾರಾಧನೆಯನ್ನು ಆರಾಧಿಸಿಕೊಂಡು ಬಂದ ಸಮುದಾಯವಾಗಿದೆ. ಇಲ್ಲಿ ಆರಾಧನೆಗೊಳಪಡುವ ಎಲ್ಲಾ ದೈವಗಳ ಪಾರ್ದನಗಳಲ್ಲಿ ಬೆರ್ಮೆರ್ ಎನ್ನುವ ಹೆಸರು ಉಲ್ಲೇಖಗೊಳ್ಳುತ್ತದೆ. ಈ ಕಾರಣಕ್ಕೆ ಎಲ್ಲಾ ದೈವಗಳ ಮೂಲ ಬೆರ್ಮೆರ್ ಆಗಿದ್ದರೂ, ತುಳುನಾಡಿನಲ್ಲಿ ಈವರೆಗೂ ಬೆರ್ಮೆರ್ ಮೂಲ ಸ್ಥಾನವನ್ನು ಹುಡುಕಲು ಮಾತ್ರ ಸಾಧ್ಯವಾಗಿರಲಿಲ್ಲ. ದೈವಗಳ ಸಂಧಿ-ಪಾರ್ದನಗಳಲ್ಲಿ ಎಷ್ಟೇ ಅಧ್ಯಯನ ಮಾಡಿದರೂ, ಈ ಬಗ್ಗೆ ಉಲ್ಲೇಖಗಳು ಸಿಗುತ್ತಿರಲಿಲ್ಲ. ಆ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಬೆಟ್ಟಂಪಾಡಿ ಸಮೀಪದಲ್ಲಿ ಬೆರ್ಮೆರೆಗುಂಡ ಎನ್ನುವ ಜಾಗದ ವಿಚಾರ ಬೆಳಕಿಗೆ ಬಂದಿದೆ.
ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದ ದಲಿತ ಸಂಘಟನೆಗಳು ಮತ್ತು ಮುಖಂಡರು ಬೆಟ್ಟಂಪಾಡಿ ಸಮೀಪದ ಸ್ಥಳಕ್ಕೆ ಬಂದಾಗ ಜಾಗ ಬೇರೊಬ್ಬರ ಅಧೀನದಲ್ಲಿರುವ ವಿಚಾರ ತಿಳಿಯುತ್ತದೆ. ತಮ್ಮ ಉದ್ಧೇಶವನ್ನು ಜಾಗಕ್ಕೆ ಸಂಬಂಧಪಟ್ಟವರಲ್ಲಿ ತಿಳಿಸಿದ ಸಂದರ್ಭದಲ್ಲಿ ಜಾಗದಲ್ಲಿ ಪ್ರಶ್ನಾಚಿಂತನೆ ಇಡಲು ನಿರ್ಧರಿಸಲಾಯಿತು. ಪ್ರಶ್ನಾಚಿಂತನೆಯಲ್ಲಿ ಮುಗೇರರ ಮೂಲ ದೇವರಾದ ಬೆರ್ಮೆರ್ ಗೆ ಸಂಬಂಧಪಟ್ಟ ಜಾಗ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ ಇದೀಗ ಬೆರ್ಮೆರ್ ಮತ್ತು ವೀರ ಪುರುಷರಾದ ಮುಗೇರ್ಕಳರ ಆರಾಧನೆಗೆ ಕ್ಷೇತ್ರವನ್ನು ನಿರ್ಮಿಸುವ ಕಾರ್ಯ ಆರಂಭಗೊಂಡಿದೆ.
ಸುಮಾರು 25 ಸೆಂಟ್ಸ್ ಜಾಗವನ್ನು ಕೃಷಿಕರಾದ ವೆಂಕಟರಮಣ ಬೋರ್ಕರ್ ಕುಟುಂಬ ಮುಗೇರ ಸಮುದಾಯಕ್ಕೆ ಉಚಿತವಾಗಿ ನೀಡಿದ್ದಾರೆ. ಮುಗೇರರ ವೀರ ಪುರುಷ ಸಹೋದರರಾದ ಮುದ್ದ ಮತ್ತು ಕಳರರು ಇದೇ ಜಾಗದಲ್ಲಿ ಬೆರ್ಮೆರ್ಲ್ಲಿ ಐಕ್ಯವಾದ ಬಗ್ಗೆ ಉಲ್ಲೇಖಗಳೂ ದೈವಗಳ ಸಂಧಿಯಲ್ಲಿ ಕಂಡು ಬರುತ್ತದೆ. ಮನುಷ್ಯ ರೂಪದಲ್ಲಿದ್ದ ಈ ಸೋದರರು ಇಲ್ಲಿಗೆ ಸಮೀಪದ ಪಡುಮಲೆ ಬಳ್ಳಾಲರ ಬಳಿಗೆ ಹೋಗಿ, ಊರಿಗೆ ಉಪದ್ರ ಕೊಡುತ್ತಿದ್ದ ಮಾರಿಗಳನ್ನು ಓಡಿಸಲು ಕಾಡಿನತ್ತ ಹೆಜ್ಜೆ ಹಾಕುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಕೆರೆಯೊಂದು ಕಾಣಸಿಕ್ಕಿ, ಅದರಲ್ಲಿ ಚಿನ್ನದ ಮೀನುಗಳನ್ನು ಕಂಡು ಅವುಗಳನ್ನು ಹಿಡಿಯಲು ಹೋಗಿ ನೀರಿನಲ್ಲಿ ಐಕ್ಯರಾಗುತ್ತಾರೆ ಎನ್ನುವ ಕಥೆಯೂ ಬರುತ್ತದೆ. ಸಂಧಿಯಲ್ಲಿ ಬರುವ ಕೆರೆಯು ಇಂದಿಗೂ ಇದ್ದು, ಈ ಕೆರೆಯೊಳಗೆ ದೇಯಿ ಬೈದೆದಿಯ ಉಂಗುರವು ಬಿದ್ದಿದೆ ಎನ್ನುವ ಉಲ್ಲೇಖವೂ ಇದೆ.
ಸದ್ಯ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಮುಗೇರ ಸಮುದಾಯ ಮತ್ತು ಇತರ ಸಮಾಜ ಮುಂದಾಗಿದೆ. ಕೇವಲ 9 ತಿಂಗಳ ಒಳಗೆ ಕ್ಷೇತ್ರದ ಜೀರ್ಣದ್ಧಾರ ಮಾಡಲೂ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
Dakshina Kannada,Karnataka
May 03, 2025 12:41 PM IST