Dakshina Kannada: ಮಕ್ಕಳ ಭವಿಷ್ಯಕ್ಕೆ ಬುನಾದಿ; ಕನ್ನಡ ಶಾಲೆ ಮಕ್ಕಳಿಗೆ ಇಂಗ್ಲಿಷ್ ಸಂವಹನ, ಕೌಶಲ್ಯಾಭಿವೃದ್ಧಿಗೆ ಹೊಸ ಯೋಜನೆ | Dakshina Kannada 10 Government Schools Start English Training For Students

Dakshina Kannada: ಮಕ್ಕಳ ಭವಿಷ್ಯಕ್ಕೆ ಬುನಾದಿ; ಕನ್ನಡ ಶಾಲೆ ಮಕ್ಕಳಿಗೆ ಇಂಗ್ಲಿಷ್ ಸಂವಹನ, ಕೌಶಲ್ಯಾಭಿವೃದ್ಧಿಗೆ ಹೊಸ ಯೋಜನೆ | Dakshina Kannada 10 Government Schools Start English Training For Students

ದಕ್ಷಿಣ ಕನ್ನಡದ ಮಕ್ಕಳಿಗೆ ಇಂಗ್ಲಿಷ್ ಬಲ

ಜನಶಿಕ್ಷಣ ಟ್ರಸ್ಟ್ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಿದ್ದು, ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ಸಹಯೋಗದಲ್ಲಿ ಜಿಲ್ಲೆಯ 10 ಸರ್ಕಾರಿ ಶಾಲೆಗಳಲ್ಲಿ ಈ ಯೋಜನೆಯನ್ನು ಮೊದಲ ಬಾರಿಗೆ ಜಾರಿಗೆ ತರಲಾಗಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ, ಭಾಷೆಯ ಬಗ್ಗೆ ಹಿಂಜರಿತ ಮನೋಭಾವವನ್ನು ತೊಡೆದುಹಾಕುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಇಂಗ್ಲಿಷ್ ತರಬೇತಿಯ ಜೊತೆಗೆ ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿಗೂ ಈ ಯೋಜನೆ ಪೂರಕವಾಗಲಿದೆ.

ಜನಶಿಕ್ಷಣ ಟ್ರಸ್ಟ್‌ನಿಂದ ಸರ್ಕಾರಿ ಶಾಲೆಗಳಿಗೆ ಇಂಗ್ಲಿಷ್ ಕಲಿಕೆ

ಮೊದಲ ಬಾರಿಗೆ ಜಿಲ್ಲೆಯ ಉಳ್ಳಾಲ ತಾಲೂಕಿನ 10 ಸರ್ಕಾರಿ ಶಾಲೆಗಳಲ್ಲಿ ಈ ಯೋಜನೆ ಜಾರಿಗೆ ಬರಲಿದ್ದು, 5 ರಿಂದ 7ರ ತನಕದ ಮಕ್ಕಳಿಗೆ ದಿನಕ್ಕೆ 1 ಗಂಟೆಗಳ ತರಗತಿಯನ್ನು ನೀಡಲಾಗುತ್ತದೆ. ಶಾಲೆಯ ಸಮಯದ ಬದಲು ಬೆಳಗ್ಗೆ ಶಾಲಾ ಸಮಯ ಆರಂಭವಾಗುವ ಒಂದು ಗಂಟೆ ಮೊದಲು ಮತ್ತು ಬಿಟ್ಟ ಬಳಿಕ ಒಂದು ಗಂಟೆ ಈ ತರಗತಿಗಳು ನಡೆಯಲಿವೆ. ಈ ಕುರಿತು ಇಲಾಖಾ ಮಟ್ಟದಲ್ಲಿ ಚರ್ಚೆಗಳು ನಡೆದು ಇದೀಗ ತರಗತಿಗಳನ್ನು ನಡೆಸಲು ಇಲಾಖೆ ಅನುಮತಿಯನ್ನೂ ನೀಡಿದೆ.

ಉಳ್ಳಾಲದ 10 ಶಾಲೆಗಳಲ್ಲಿ ಇಂಗ್ಲಿಷ್ ಸಂವಹನ ತರಬೇತಿ ಆರಂಭ

ಮಕ್ಕಳಿಗೆ ಇಂಗ್ಲಿಷ್ ಭಾಷೆಯ ಮೇಲಿನ ಹಿಡಿತ, ಸಂವಹನ ಸಾಧಿಸಲು ಈ ತರಗತಿಗಳು ಪೂರಕವಾಗಲಿದ್ದು, ಮೂರು ವರ್ಷಗಳ ಕೋರ್ಸ್ ಮಾದರಿಯಲ್ಲಿ ಈ ವ್ಯವಸ್ಥೆ ಇರಲಿದೆ. ಪ್ರತಿ ವಿದ್ಯಾರ್ಥಿಯ ಒಂದು ವರ್ಷದ ಬೆಳವಣಿಗೆಯ ವರದಿಯನ್ನು ಸಂಗ್ರಹಿಸಿ ಅದನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಲಾಗುತ್ತದೆ. ಪ್ರತಿ ವಿದ್ಯಾರ್ಥಿಯು ಮೂರು ವರ್ಷಗಳ ಕೋರ್ಸ್ ಮುಗಿಸಿದಲ್ಲಿ, ವಿದ್ಯಾರ್ಥಿಯಲ್ಲಿ ಅಮೂಲಾಗ್ರ ಬದಲಾವಣೆಯಾಗಲಿದೆ ಎನ್ನುವ ವಿಶ್ವಾಸ ಆಯೋಜಕರದ್ದಾಗಿದೆ. ಮಕ್ಕಳಿಗೆ ತರಗತಿ ನಡೆಸುವ ಶಿಕ್ಷಕ, ಶಿಕ್ಷಕಿಯರನ್ನು ದೇಶಪಾಂಡೆ ಫೌಂಡೇಶನ್ ಆಯ್ಕೆ ಮಾಡಲಿದ್ದು, ಆಯ್ಕೆಯಾದವರಿಗೆ ಫೌಂಡೇಶನ್‌ನ ಕೇಂದ್ರ ಕಚೇರಿಯಲ್ಲಿ 15 ದಿನಗಳ ತರಬೇತಿಯನ್ನೂ ನೀಡಲಾಗುತ್ತದೆ. ಆಯಾ ಶಾಲೆಯ ವ್ಯಾಪ್ತಿಗೆ ಸೇರಿದ ಶಿಕ್ಷಕರನ್ನೇ ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತದೆ.

ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ಕಳೆದ ಹಲವು ವರ್ಷಗಳಿಂದ ದೇಶದ ನಾಲ್ಕು ರಾಜ್ಯಗಳಲ್ಲಿ ಈ ರೀತಿಯ ತರಗತಿಗಳನ್ನು ನಡೆಸುತ್ತಿದೆ. ತೆಲಂಗಾಣ, ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕದಲ್ಲಿ ಈ ರೀತಿಯ ತರಬೇತಿಯನ್ನು ನೀಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಈ ತರಬೇತಿಯನ್ನು ನಡೆಸಲಾಗುತ್ತಿದ್ದು, ಮಕ್ಕಳಿಂದ ಪುಸ್ತಕಗಳಿಗೆ ಬೇಕಾದ ಹಣವನ್ನು ಮಾತ್ರ ಪಡೆಯಲಾಗುತ್ತದೆ. ಮಕ್ಕಳು ಮಾತ್ರವಲ್ಲ, ಅವರ ಪೋಷಕರಿಗೂ ಈ ತರಬೇತಿಯನ್ನು ನೀಡಲಾಗುತ್ತದೆ. ಉಳ್ಳಾಲ ತಾಲೂಕಿನಲ್ಲಿ ಆಯ್ಕೆಯಾದ ಹತ್ತು ಶಾಲೆಗಳಲ್ಲಿ ಹೂಹಾಕುವ ಕಲ್ಲು ಶಾಲೆ, ಮೊಂಟೆಪದವು ಕೆಪಿಎಸ್ ಶಾಲೆ, ಕಲ್ಕಟ್ಟ, ಕುತ್ತಾರು, ಬೆಳ್ಮ, ದೇರಳಕಟ್ಟೆ, ಕೊಣಾಜೆ, ಪದವು, ಇರಾ, ಪರಪ್ಪು ಶಾಲೆಗಳು ಸೇರಿಕೊಂಡಿದೆ. ಪ್ರತಿ ಶಾಲೆಯಿಂದ 25 ಮಕ್ಕಳಂತೆ 600 ಮಕ್ಕಳು ಈ ತರಬೇತಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.