Last Updated:
ರಸ್ತೆ ಬದಿಯ ಮಾವಿನ ಮರದ ಕೆಳಗೆ ಮಕ್ಕಳು ಕಲ್ಲೆಸೆದು ಮಾವು ಕೀಳುವ ಕಾಲವೊಂದಿತ್ತು. ಆದರೆ ಯಾವಾಗ ಅರಣ್ಯ ಇಲಾಖೆ ರಸ್ತೆ ಬದಿಯ ಮಾವಿನ ಮರಗಳನ್ನು ಹರಾಜು ನೀಡಲು ಆರಂಭಿಸಿತೋ, ಅಂದಿನಿಂದ ಮಕ್ಕಳಾಟಕ್ಕೂ ಬ್ರೇಕ್ ಬಿದ್ದಿತ್ತು.
ದಕ್ಷಿಣ ಕನ್ನಡ: ಇದೀಗ ಎಲ್ಲೆಡೆ ಮಾವಿನ ಸೀಸನ್(Mango Season). ಖಾಸಗಿ ತೋಟದ ಒಳಗಿರುವ ಮಾವಿನ ಮರಗಳಲ್ಲಿ(Mango Trees), ರಸ್ತೆ ಬದಿಯಲ್ಲಿರುವ ಮಾವಿನ ಮರಗಳಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಾವಿನ ಹೂ ಮತ್ತು ಮಿಡಿಗಳು ತುಂಬಿ ಹೋಗಿವೆ. ಖಾಸಗಿ ತೋಟಗಳಲ್ಲಿರುವ ಮಾವಿನ ಮರಗಳ ಕಾಯಿಗಳನ್ನು ಅದಕ್ಕೆ ಸಂಬಂಧಪಟ್ಟವರು ಅವರಿಗೆ ಬೇಕಾದ ರೀತಿಯಲ್ಲಿ ಉಪಯೋಗಿಸುತ್ತಾರೆ. ಆದರೆ ರಸ್ತೆ ಬದಿಗಳಲ್ಲಿರುವ ಮರಗಳ ಮಾವಿನಕಾಯಿಗಳನ್ನು ತೆಗೆಯಲು ಅರಣ್ಯ ಇಲಾಖೆ(Forest Department) ಟೆಂಡರ್ ಕರೆದು ವಿಲೇವಾರಿ ಮಾಡುತ್ತದೆ. ಆದರೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈ ವ್ಯವಸ್ಥೆಗೆ ಶಾಸಕ ಅಶೋಕ್ ಕುಮಾರ್ ರೈ(MLA Ashok Kumar Rai) ಕೊಕ್ ನೀಡಿದ್ದಾರೆ.
ರಸ್ತೆ ಬದಿಯಲ್ಲಿರುವ ಮಾವಿನ ಮರಗಳನ್ನು ಯಾವುದೇ ಕಾರಣಕ್ಕೂ ಹರಾಜು ನೀಡಬಾರದು ಎಂದು ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ. ಈ ಮಾವಿನ ಮರದಲ್ಲಿರುವ ಮಾವುಗಳು ಹಕ್ಕಿಗಳಿಗೆ ಮತ್ತು ಸಾರ್ವಜನಿಕರು ಉಪಯೋಗಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಈ ಹಿಂದೆ ಹರಾಜು ಪಡೆದಿದ್ದ ಮಂದಿ ರಸ್ತೆ ಬದಿಯ ಮಾವಿನ ಮರಗಳಲ್ಲಿ ಮಾವಿನ ಮಿಡಿ ಆದ ತಕ್ಷಣವೇ ಅವುಗಳನ್ನೆಲ್ಲಾ ಕೊಯ್ದು ಮಾರಾಟ ಮಾಡುತ್ತಿದ್ದರು. ಇದರಿಂದ ಮಾವಿನ ಮರದಲ್ಲಿ ಮಾವಿನ ಹಣ್ಣು ಆಗುವುದೇ ತಪ್ಪಿದಂತಾಗಿತ್ತು. ಅಲ್ಲದೇ ಮರಗಳಲ್ಲಿ ಹಣ್ಣು ಆಗಲು ಕಾಯಿಗಳೇ ಇಲ್ಲದ ಕಾರಣ ಹಕ್ಕಿಗಳಿಗೆ ತಿನ್ನಲು ಮತ್ತು ಆ ಮರದ ವಂಶಾಭಿವೃದ್ಧಿಗೂ ಪ್ರಕ್ರಿಯೆ ಮುಳುವಾಗುತ್ತಿತ್ತು. ಹಕ್ಕಿಗಳು ಹಣ್ಣನ್ನು ತಿಂದು ಅದರ ಬೀಜವನ್ನು ಬೇರೊಂದು ಕಡೆ ಎಸೆಯುವುದರಿಂದ ಆ ಬೀಜಗಳು ಮೊಳಕೆಯೊಡೆದು ಮರವಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಕಾಡುಗಳಲ್ಲಿ ಮತ್ತು ಖಾಲಿ ಜಾಗಗಳಲ್ಲಿ ಕೇವಲ ಅಕೇಶಿಯಾ ಮರಗಳು ಮಾತ್ರ ಬೆಳೆಯಲು ಈ ವ್ಯವಸ್ಥೆ ಪರೋಕ್ಷವಾಗಿ ಕಾರಣವಾಗಿತ್ತು.
ಇದನ್ನೂ ಓದಿ: World Sparrow Day: ಗುಬ್ಬಚ್ಚಿಗಳಿಗೆ ಆಹಾರ, ನೀರು ಇಟ್ಟು ವಿಶ್ವ ಗುಬ್ಬಚ್ಚಿ ದಿನ ಆಚರಣೆ!
ಪುತ್ತೂರು ಶಾಸಕರ ಈ ಹೊಸ ಆಲೋಚನೆ ಮುಂದಿನ ದಿನಗಳಲ್ಲಿ ಸ್ಥಳೀಯ ಮಾವಿನ ತಳಿಗಳ ಅಭಿವೃದ್ಧಿಗೂ ಪೂರಕವಾಗಲಿದೆ ಎನ್ನಲಾಗಿದೆ. ರಸ್ತೆ ಬದಿಯ ಮಾವಿನ ಮರದ ಕೆಳಗೆ ಮಕ್ಕಳು ಕಲ್ಲೆಸೆದು ಮಾವು ಕೀಳುವ ಕಾಲವೊಂದಿತ್ತು. ಆದರೆ ಯಾವಾಗ ಅರಣ್ಯ ಇಲಾಖೆ ರಸ್ತೆ ಬದಿಯ ಮಾವಿನ ಮರಗಳನ್ನು ಹರಾಜು ನೀಡಲು ಆರಂಭಿಸಿತೋ, ಅಂದಿನಿಂದ ಮಕ್ಕಳಾಟಕ್ಕೂ ಬ್ರೇಕ್ ಬಿದ್ದಿತ್ತು. ಆದರೆ ಇದೀಗ ಮತ್ತೆ ಮಕ್ಕಳಾಟದ ಆ ದಿನಗಳನ್ನು ನೋಡುವ ಸಾಧ್ಯತೆಯೂ ಶಾಸಕ ಅಶೋಕ್ ಕುಮಾರ್ ರೈಗಳ ಈ ಯೋಜನೆಯಿಂದಾಗಲಿದೆ.
ಸ್ಥಳೀಯ ಮಾವಿನ ತಳಿಗಳ ವಂಶಾಭಿವೃದ್ಧಿಯ ಜೊತೆಗೆ ಮಕ್ಕಳಾಟವನ್ನು ಮತ್ತೆ ನೆನಪಿಸುವ ಈ ಪ್ರಯತ್ನ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಡೆಯಬೇಕಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಗಮನ ಹರಿಸಬೇಕಿದೆ.
Dakshina Kannada,Karnataka
March 27, 2025 12:00 PM IST