Last Updated:
10-14 ದಿನಗಳವರೆಗೆ ಕಡಲಿನಲ್ಲಿದ್ದು ಮೀನುಗಾರಿಕೆ ನಡೆಸುವ ಆಳಸಮುದ್ರ ಮೀನುಗಾರಿಕೆಗೆ ಸಿಬ್ಬಂದಿಯ ಸಂಬಳ, ಡೀಸೆಲ್, ಮಂಜುಗಡ್ಡೆ ಸೇರಿದಂತೆ ಪ್ರತಿ ಬೋಟ್ ಮಾಲಕರಿಗೆ ಸುಮಾರು 5ಲಕ್ಷ ರೂ. ಖರ್ಚು ತಗುಲುತ್ತದೆ.
ದಕ್ಷಿಣ ಕನ್ನಡ: ಕರಾವಳಿಯ ವಾಣಿಜ್ಯ ವಹಿವಾಟುಗಳಲ್ಲಿ ಮತ್ಸ್ಯೋದ್ಯಮವೂ ಒಂದು. ವರ್ಷಕ್ಕೆ ಸಾವಿರಾರು ಕೋಟಿಗಳ ವ್ಯವಹಾರವಾಗುವ ಮತ್ಸೋದ್ಯಮದಿಂದ(Fishing) ಸಾವಿರಾರು ಕುಟುಂಬಗಳ ಜೀವನ ನಡೆಯುತ್ತದೆ. ಆದರೆ 2 ದಶಕಗಳಲ್ಲಿಯೇ ಮೊದಲ ಬಾರಿಗೆ ಅತೀ ದೊಡ್ಡದಾದ ಮತ್ಸ್ಯಕ್ಷಾಮ ಮೀನುಗಾರಿಕೆಗೆ ಭಾರಿ ಹೊಡೆತ ನೀಡಿದೆ. ಕಳೆದ ಜೂನ್ನಿಂದ ಸೆಪ್ಟೆಂಬರ್ವರೆಗೆ ಸುರಿದ ಮಳೆ ಕರಾವಳಿಯಲ್ಲಿ (Fish famine) ಮೀನುಗಾರರಿಗೆ(Fishermen) ಅಪಾರ ನಿರೀಕ್ಷೆ ಹುಟ್ಟಿಸಿತ್ತು. ಇದು ಮೀನುಗಾರರನ್ನು ಲಾಭದ ಹಾದಿಗೆ ಕೊಂಡೊಯ್ಯಲಿದೆ ಎಂಬ ಭರವಸೆಯನ್ನು ಮೂಡಿಸಿತ್ತು. ಆದರೆ ಮೀನುಗಾರಿಕೆ ಋತು ಆರಂಭವಾಗುತ್ತಿದ್ದಂತೆ ಮೀನುಗಾರರ ನಿರೀಕ್ಷೆ ಹುಸಿಯಾಗಿದೆ. ಆಗಸ್ಟ್ನಿಂದ ಆರಂಭವಾದ ಈ ಮೀನುಗಾರಿಕಾ ಋತುವಿನಲ್ಲಿ ಮೀನುಗಾರರು ನಷ್ಟವನ್ನೇ ಅನುಭವಿಸಿದ್ದಾರೆ.
10-14 ದಿನಗಳವರೆಗೆ ಕಡಲಿನಲ್ಲಿದ್ದು ಮೀನುಗಾರಿಕೆ ನಡೆಸುವ ಆಳಸಮುದ್ರ ಮೀನುಗಾರಿಕೆಗೆ ಸಿಬ್ಬಂದಿಯ ಸಂಬಳ, ಡೀಸೆಲ್, ಮಂಜುಗಡ್ಡೆ ಸೇರಿದಂತೆ ಪ್ರತಿ ಬೋಟ್ ಮಾಲಕರಿಗೆ ಸುಮಾರು 5ಲಕ್ಷ ರೂ. ಖರ್ಚು ತಗುಲುತ್ತದೆ. ಬೋಟ್ ಮಾಲಕರಿಗೆ 7-8 ಲಕ್ಷ ರೂ.ಗಳ ಮೀನುಗಳು ಸಿಕ್ಕಿದರೆ ಮಾತ್ರ ಲಾಭ ಬರುತ್ತದೆ. ಆದರೆ ಆಳಸಮುದ್ರ ಮೀನುಗಾರಿಕೆಗೆ ಹೋದ ಬೋಟ್ಗಳಿಗೆ 2-4 ಲಕ್ಷದವರೆಗೆ ಮಾತ್ರ ಮೀನುಗಳು ಸಿಗುತ್ತಿದೆ. ಇದರಿಂದ ಪ್ರತಿ ಬೋಟ್ ಮಾಲಕರು ನಷ್ಟವನ್ನು ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: Mandya: ದಸರಾಗೂ ಮುನ್ನ KRSನಲ್ಲಿ ಕಾವೇರಿ ಆರತಿ- ಡಿಸಿಎಂ ಡಿಕೆ ಶಿವಕುಮಾರ್ ಸುಳಿವು
ಮಂಗಳೂರಿನಲ್ಲಿ 2023-24ರಲ್ಲಿ (ಏಪ್ರಿಲ್ನಿಂದ ಮಾರ್ಚ್ವರೆಗೆ) 2,39,758 ಮೆಟ್ರಕ್ ಟನ್ ಮೀನುಗಳು ಸಿಕ್ಕಿದ್ದರೆ, 2024-25 ರಲ್ಲಿ 1,71,795 ಮೆಟ್ರಲ್ ಟನ್ಗಳಷ್ಟು ಮಾತ್ರ ಮೀನುಗಳು ದೊರಕಿದೆ. ನಷ್ಟವನ್ನು ಅನುಭವಿಸಿದ ಬೋಟ್ ಮಾಲಕರು ಮೀನುಗಾರಿಕೆ ಮುಂದುವರೆಸಲಾಗದೆ ಬೋಟ್ಗಳನ್ನು ಬಂದರಿನಲ್ಲಿ ಲಂಗರು ಹಾಕಿ ಮೀನುಗಾರಿಕೆ ಸ್ಥಗಿತಗೊಳಿಸಿದ್ದಾರೆ. ಜನವರಿಯಲ್ಲಿ ಶೇಕಡ 60ರಷ್ಟು ಬೋಟ್ಗಳು ಲಂಗರು ಹಾಕಿದ್ದರೆ, ಈವರೆಗೆ ಶೇಕಡ 80ರಷ್ಟು ಬೋಟ್ಗಳು ಮೀನುಗಾರಿಕೆ ಸ್ಥಗಿತಗೊಳಿಸಿ ಲಂಗರು ಹಾಕಿದೆ.
20 ವರ್ಷಗಳ ಹಿಂದೊಮ್ಮೆ ಈ ರೀತಿಯ ಮತ್ಸ್ಯಕ್ಷಾಮ ಕಾಡಿತ್ತು ಎಂಬುದನ್ನು ಮೀನುಗಾರರು ಹೇಳುತ್ತಾರೆ. ಪರಿಣಾಮ ಕಡಲಮಕ್ಕಳು ಕಡಲಿನಲ್ಲಿ ಮೀನಿಲ್ಲದೆ ಆತಂಕಿತರಾಗಿದ್ದಾರೆ.
Dakshina Kannada,Karnataka
April 28, 2025 11:07 AM IST