Dakshina Kannada: ಹೂಹಾಕುವ ಕಲ್ಲು; ತುಳುನಾಡಿನ ದೈವದ ಕಲ್ಲಿನಿಂದ ಹೆಸರು ಪಡೆದ ವಿಶಿಷ್ಟ ಹೆಸರಿನ ಊರಿನ ಕಥೆ | Dakshina kannada hoo hakuva kallu village has strange name

Dakshina Kannada: ಹೂಹಾಕುವ ಕಲ್ಲು; ತುಳುನಾಡಿನ ದೈವದ ಕಲ್ಲಿನಿಂದ ಹೆಸರು ಪಡೆದ ವಿಶಿಷ್ಟ ಹೆಸರಿನ ಊರಿನ ಕಥೆ | Dakshina kannada hoo hakuva kallu village has strange name

Last Updated:

ಉಳ್ಳಾಲ ತಾಲೂಕಿನ “ಹೂಹಾಕುವ ಕಲ್ಲು” ಎಂಬ ಊರಿನ ಹೆಸರು ಸ್ಥಳೀಯ ವೈದ್ಯನಾಥ ದೈವದ ಪಾದ ಇಟ್ಟ ಕಲ್ಲಿನಿಂದ ಬಂದಿದೆ. ಈ ಕಲ್ಲಿಗೆ ಹೂ ಹಾಕುವ ಪ್ರಥೆಯು ಗ್ರಾಮಸ್ಥರ ಧಾರ್ಮಿಕ ಆಚರಣೆ.

X

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಒಂದು ಊರಿನ ಹೆಸರು ಬದಲಾವಣೆ ಮಾಡೋದು, ಇಡೋದು ಇಂದು ಎಲ್ಲೆಡೆ ನಡೆದುಕೊಂಡು ಬರುತ್ತಿರುವ ವಿದ್ಯಮಾನ. (Nomenclature) ಕೆಲವು ಸಂದರ್ಭದಲ್ಲಿ ಊರಿಗೆ ಹೆಸರನ್ನು ಇಡಲಾಗುತ್ತದೆ, ಆದರೆ ಕೆಲವೊಮ್ಮೆ ಊರಿನಲ್ಲಿರುವ ವಿಶೇಷತೆಯಿಂದಲೇ ಆ ಊರಿಗೆ ಹೆಸರು ತನ್ನಿಂತಾನಾಗಿಯೇ ಬಂದಿರುತ್ತೆ. ಹೀಗೆ ಊರಿನ ಆ ವಿಶೇಷತೆಯಿಂದಲೇ ಹೆಸರು ಪಡೆದ ಊರುಗಳಲ್ಲಿ ಅತ್ಯಂತ ಆಕರ್ಷಣೆಯ ಹೆಸರು ಹೊಂದಿರುವ ಊರೊಂದು ದಕ್ಷಿಣಕನ್ನಡ ಜಿಲ್ಲೆಯ (Dakshina Kannada) ಉಳ್ಳಾಲ (Ullal) ತಾಲೂಕಿನಲ್ಲಿದೆ. ಹೌದು ಈ ವಿಶೇಷ ಹೆಸರಿನ ಊರೇ “ಹೂಹಾಕುವ ಕಲ್ಲು.”

ವೈದ್ಯನಾಥನ ಪಾದಕ್ಕೆ ಹೆಸರಾಯ್ತು ಊರು!

ಹೂ ಹಾಕುವ ಕಲ್ಲು ಎಂದಾಗ ಕೆಲವರಿಗೆ ಇದು ಊರಿನ ಹೆಸರೇ ಎನ್ನುವ ಗೊಂದಲ ಮೂಡೋದೂ ಸಹಜವೇ. ಹೌದು ಈ ಊರಿಗೆ ಹೆಸರು ಬರಲು ಇಲ್ಲಿರುವ ಒಂದು ಕಲ್ಲೇ ಕಾರಣ. ಈ ಕಲ್ಲಿನ ಮೇಲೆ ಇಲ್ಲೇ ಪಕ್ಕದಲ್ಲಿರುವ “ಕಾಣತೂರು ತೋಡಕುಕ್ಕಿನಾರ್” ದೈವ ಎಂದು ಸ್ಥಳೀಯ ತುಳು ಭಾಷೆಯಲ್ಲಿ ಕರೆಯುವ ವೈದ್ಯನಾಥ ದೈವ ಪಾದ ಇಟ್ಟಿತ್ತಂತೆ ಎನ್ನುವ ನಂಬಿಕೆ ಈ ಭಾಗದ ಜನರದ್ದು.

ಘಟ್ಟ ಇಳಿದ ದೈವ ಇಟ್ಟ ಪಾದ ಕಲ್ಲಿಗೆ ನೀಡಿತ್ತು ಪೂಜ್ಯ ಸ್ಥಾನ!

ತುಳುನಾಡಿನಲ್ಲಿ ಆರಾಧಿಸಿಕೊಂಡು‌ ಬರುತ್ತಿರುವ ಎಲ್ಲಾ ದೈವಗಳು ಘಟ್ಟ ಇಳಿದು ತುಳುನಾಡಿಗೆ ಬಂದಿರೋದು ಅನ್ನೋದು ದೈವದ ಪಾರ್ದನದಿಂದ ತಿಳಿದು ಬರುವ ಮಾಹಿತಿ. ಅದೇ ಪ್ರಕಾರ ಫಟ್ಟದಿಂದ ಇಳಿದು ಕಾಣತ್ತೂರು ಕ್ಷೇತ್ರದೆಡೆಗೆ ಬರುತ್ತಿದ್ದ ವೈದ್ಯನಾಥ ದೈವ ಸಂದರ್ಭದಲ್ಲಿ ಕಲ್ಲಿನ ಹಾಸಿನ ಮೇಲೆ ನಿಂತಿದ್ದರಂತೆ. ಆ ಬಳಿಕ ವೈದ್ಯನಾಥ ದೈವದ ಪಾದವಿದ್ದ ಜಾಗಕ್ಕೆ ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರು ಮತ್ತು ಗ್ರಾಮಸ್ಥರು ತಾಜಾ ಹೂವನ್ನು ಕಲ್ಲಿನ ಮೇಲೆ ಇಟ್ಟು ಹೋಗುತ್ತಿದ್ದರಂತೆ. ಈ ಪ್ರಕ್ರಿಯೆ ನಿರಂತರವಾಗಿ ಮುಂದುವರಿದು ಇಡೀ ಊರಿಗೆ ಹೂ ಹಾಕುವ ಕಲ್ಲು ಎನ್ನುವ ಹೆಸರೇ ನಿಕ್ಕಿ ಆಗಿ ಹೋಗಿದೆ. ಬಯಲು ಪ್ರದೇಶದಲ್ಲಿದ್ದ ಗೋಲಾಕಾರಣ ಕಲ್ಲಿಗೆ ಆಟೋ ಚಾಲಕರು, ಬಸ್ ಚಾಲಕರು, ಸ್ಥಳೀಯ ಗ್ರಾಮಸ್ಥರು ಪ್ರತೀ ದಿನ ತಾಜಾ ಹೂಗಳನ್ನು ಹಾಕಿ ಪ್ರಾರ್ಥನೆ ಆರಂಭಿಸಿದ್ದರು.ಆ ಬಳಿಕದ ದಿನಗಳಲ್ಲಿ ಕಲ್ಲು ಇದ್ದ ಜಾಗವನ್ನು ಅಭಿವೃದ್ಧಿಪಡಿಸಲಾಯಿತು.

ಕಲ್ಲಿಗೆ ಹೂವು ಹಾಕದೇ ದಿನ ಪ್ರಾರಂಭವಿಲ್ಲ

ಕಲ್ಲು ಇದ್ದ ಜಾಗದಲ್ಲಿ ಭಜನಾ ಮಂದಿರವನ್ನು ಸ್ಥಾಪಿಸಿ, ಕಲ್ಲನ್ನು ಮಂದಿರದ ಒಳಗೆ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಇಂದಿಗೂ ಈ ಭಾಗದಲ್ಲಿ ಸಂಚರಿಸುವ ಬಸ್ ಹಾಗು ಆಟೋ ಚಾಲಕರು ಈ ಕಲ್ಲಿನ ಮೇಲೆ ಹೂಗಳನ್ನು ಇಟ್ಟ ಬಳಿಕವೇ ತಮ್ಮ ದಿನದ ಕರ್ತವ್ಯಕ್ಕೆ ತೆರಳುತ್ತಿದ್ದಾರೆ. ಪ್ರತಿದಿನವೂ ಇಲ್ಲಿ ವೈದ್ಯನಾಥನ ಕಲ್ಲಿಗೆ ಹೂಗಳನ್ನು ಇಟ್ಟು ದೀಪ‌ ಹಚ್ಚಲಾಗಿತ್ತಿದೆ. ವರ್ಷಕ್ಕೆ ಎರಡು-ಮೂರು ಬಾರಿ ಇಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳೂ ನಡೆದುಕೊಂಡು ಬರುತ್ತಿದೆ.