Dakshina Kannada: ಹೆದ್ದಾರಿಯಲ್ಲಿ ಸತ್ತು ಬಿದ್ದ ನಾಗರಹಾವಿಗೆ ತುಳುನಾಡಿನ ಜನರ ಸ್ಪಂದನೆ! | Dakshina Kannada: People of Tulu Nadu express their condolences over a cobra that fell dead on the highway!

Dakshina Kannada: ಹೆದ್ದಾರಿಯಲ್ಲಿ ಸತ್ತು ಬಿದ್ದ ನಾಗರಹಾವಿಗೆ ತುಳುನಾಡಿನ ಜನರ ಸ್ಪಂದನೆ! | Dakshina Kannada: People of Tulu Nadu express their condolences over a cobra that fell dead on the highway!

Last Updated:

ಯಾವ ರೀತಿ ವ್ಯಕ್ತಿಯೊಬ್ಬ ಸತ್ತಲ್ಲಿ ಅವನ ಕ್ರಿಯಗಳನ್ನು ಮಾಡಲಾಗುತ್ತದೋ, ಅದಕ್ಕಿಂತಲೂ ಹೆಚ್ಚಿನ ಕ್ರಮಗಳನ್ನು ಬಳಸಿಕೊಂಡು ಸರ್ಪದ ಸಂಸ್ಕಾರವನ್ನು ನಡೆಸಲಾಗುತ್ತದೆ. ಸಂಸ್ಕಾರ ನಡೆಸುವ ಅರ್ಚಕನಿಗೆ 16 ದಿನಗಳು ಸೂತಕವೂ ಇರುತ್ತದೆ. ಸರ್ಪದ ಸಂಸ್ಕಾರ ನಡೆಸಿದ ಬಳಕ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ಪೂಜೆಯನ್ನೂ ಮಾಡಬೇಕಾಗುತ್ತದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ತುಳುನಾಡಿನ ಮಣ್ಣು ನಾಗನ ಭೂಮಿ, ಇಲ್ಲಿನ ಪ್ರತಿಯೊಂದು ವಸ್ತು ನಾಗನಿಗೆ ಸೇರಿದ್ದು ಎನ್ನುವ ನಂಬಿಕೆ ತುಳುನಾಡಿನ ಎಲ್ಲೆಡೆ ಇಂದಿಗೂ ಪ್ರಚಲಿತದಲ್ಲಿದೆ. ನಾಗನಿಗೆ ಪೂಜೆ ಸಲ್ಲಿಸಿದ ಬಳಿಕವೇ ಇಲ್ಲಿನ ಕೃಷಿಕರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಇಲ್ಲಿನ ಪ್ರತಿಯೊಂದು ಕೃಷಿಭೂಮಿಯಲ್ಲೂ ನಾಗನ ಕಟ್ಟೆಗಳಿವೆ. ದಕ್ಷಿಣ ಭಾರತದ(South India) ಅತ್ಯಂತ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ(Kukke Subrahmanya) ಇರೋದೂ ತುಳುನಾಡಿನ ಮಣ್ಣಿನಲ್ಲಿ. ಪ್ರತೀ ನಾಗರಪಂಚಮಿಯ(Nagarapanchami) ತುಳುನಾಡಿನ ಪ್ರತಿಯೊಂದು ಕುಟುಂಬ ತಮ್ಮ ತಮ್ಮ ಕುಟುಂಬದ ಮೂಲನಾಗನಿಗೆ ತನಿ ಎರೆಯುತ್ತಾರೆ. ಇಷ್ಟೊಂದು ನಂಬಿಕೆಯ, ಭಯ-ಭಕ್ತಿ ಕೇವಲ ತೋರ್ಪಡಿಕೆಗಾಗಿಯಲ್ಲ, ಇದು ಇಲ್ಲಿನ ಪ್ರತಿಯೊಬ್ಬನ ನರ-ನಾಡಿಯಲ್ಲಿ ಹರಿಯುವಂತಹುದಾಗಿದೆ.

ಇದಕ್ಕೆ ಸಾಕ್ಷಿ ಎನ್ನುವಂತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಾಗರಹಾವೊಂದಕ್ಕೆ ಇಲ್ಲಿನ ಜನ ತೋರ್ಪಡಿಸಿದ ಶ್ರದ್ಧಾಭಕ್ತಿಯೇ ಒಂದು ಉದಾಹರಣೆ. ಕಾಸರಗೋಡು- ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಆದಂ ಕುದ್ರು ಎಂಬಲ್ಲಿ ರಸ್ತೆ ದಾಟುತ್ತಿದ್ದ ನಾಗರಹಾವೊಂದಕ್ಕೆ ಯಾವುದೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಅದು ಸಾವನ್ನಪ್ಪಿತ್ತು. ಸಾವನ್ನಪ್ಪಿದ್ದ ನಾಗರಹಾವನ್ನು ಸ್ಥಳೀಯರು ಸೇರಿ ಅದರ ಸಂಸ್ಕಾರವನ್ನೂ ನಡೆಸಿದ್ದರು. ಯಾವ ರೀತಿ ವ್ಯಕ್ತಿಯೊಬ್ಬ ಸತ್ತಲ್ಲಿ ಅವನ ಕ್ರಿಯಗಳನ್ನು ಮಾಡಲಾಗುತ್ತದೋ, ಅದಕ್ಕಿಂತಲೂ ಹೆಚ್ಚಿನ ಕ್ರಮಗಳನ್ನು ಬಳಸಿಕೊಂಡು ಸರ್ಪದ ಸಂಸ್ಕಾರವನ್ನು ನಡೆಸಲಾಗುತ್ತದೆ. ಸಂಸ್ಕಾರ ನಡೆಸುವ ಅರ್ಚಕನಿಗೆ 16 ದಿನಗಳು ಸೂತಕವೂ ಇರುತ್ತದೆ. ಸರ್ಪದ ಸಂಸ್ಕಾರ ನಡೆಸಿದ ಬಳಕ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ಪೂಜೆಯನ್ನೂ ಮಾಡಬೇಕಾಗುತ್ತದೆ.

ನಾಗರಹಾವು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಹಿನ್ನಲೆಯಲ್ಲಿ ಅದರ ಸಂಸ್ಕಾರದ ಜವಾಬ್ದಾರಿ ಹೊತ್ತವರು ಸಂಸ್ಕಾರ ಕ್ರಿಯೆಗಳಿಗಾಗಿ ಪ್ರಯಾಣಿಕರ ಸಹಭಾಗಿತ್ವಕ್ಕಾಗಿ, ಹಾವು ಸಾವನ್ನಪ್ಪಿದ್ದ ಜಾಗದಲ್ಲಿ ಬಿಳಿ ಬಟ್ಟೆಯನ್ನು ಇರಿಸಿ, ನಿಧಿ ಸಂಗ್ರಹಕ್ಕೆ ಚೀಲವೊಂದನ್ನ ಇರಿಸಿದ್ದರು. ಇರಿಸಿದ ಕೆಲವೇ ಗಂಟೆಗಳಲ್ಲಿ ರಸ್ತೆಯಲ್ಲಿ ಓಡಾಡುವ ಬಹುತೇಕ ಎಲ್ಲಾ ವಾಹನ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಿ ತಮ್ಮ ಕೈಲಾದ ಹಣವನ್ನು ಚೀಲಕ್ಕೆ ಹಾಕಿದ್ದಾರೆ. ಒಂದು ಸಂದರ್ಭದಲ್ಲಿ ಈ ಭಾಗದ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಕೂಡಾ ಆಗಿ, ಟ್ರಾಫಿಕ್ ಪೋಲೀಸರು ಬಂದು ಟ್ರಾಫಿಕ್ ಕ್ಲಿಯರ್ ಮಾಡಬೇಕಾಯಿತು. ನಾಗನ ಸಾವಿನ ಸುದ್ಧಿ ಕೇಳಿ ಈ ಜನ ತಮ್ಮ ಬ್ಯುಸಿ ಸಮಯವನ್ನೂ ಲೆಕ್ಕಿಸದೆ ಹರಕೆ ಹಾಕಿದ್ದಾರೆ.

ತುಳುನಾಡಿನಲ್ಲಿ ನಾಗ ಎಷ್ಟು ಪವರಫುಲ್ ಅನ್ನೋದಕ್ಕೆ ಇಂಥ ಘಟನೆಗಳು ಸಾಕ್ಷಿಯಂತಿದೆ. ಇಲ್ಲಿನ ಜನ ನಾಗ ಮತ್ತು ದೈವದ ನಂಬಿಕೆ ವಿಚಾರದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಲು ಇಂದಿಗೂ ಸಿದ್ಧರಿಲ್ಲ ಎನ್ನೋದನ್ನು ಈ ಘಟನೆ ತೋರಿಸಿಕೊಟ್ಟಿದೆ.