Dakshina Kannada: 18 ವರ್ಷ ದೇಶ ಸೇವೆ- ನಿವೃತ್ತಿ ಬಳಿಕ ಕೃಷಿಯಲ್ಲಿ ಯಶಸ್ಸು ಕಂಡ ಮಾಜಿ ಸೈನಿಕ! | This Ex Service man growing dragon fruit

Dakshina Kannada: 18 ವರ್ಷ ದೇಶ ಸೇವೆ- ನಿವೃತ್ತಿ ಬಳಿಕ ಕೃಷಿಯಲ್ಲಿ ಯಶಸ್ಸು ಕಂಡ ಮಾಜಿ ಸೈನಿಕ! | This Ex Service man growing dragon fruit

Last Updated:

ಒಂದು ಎಕರೆಗೆ 500 ಕಂಬಗಳನ್ನು ಹಾಕಿ ಒಂದು ಕಂಬಕ್ಕೆ ನಾಲ್ಕು ಗಿಡಗಳಂತೆ ಎರಡು ಸಾವಿರ ಗಿಡ ನೆಟ್ಟಿದ್ದಾರೆ. ಒಂದು ಕಂಬದಿಂದ ಇನ್ನೊಂದು ಕಂಬಕ್ಕೆ ಎಂಟು ಅಡಿ ದೂರ ಇರಬೇಕು. ಒಂದು ಸಾಲಿನಿಂದ ಮತ್ತೊಂದು ಸಾಲಿಗೆ ಹತ್ತು ಅಡಿ ಅಗಲ ಇರಬೇಕು ಅಂತಾ ಗೋಪಾಲಕೃಷ್ಣ ಕಾಂಚೋಡು ಹೇಳುತ್ತಾರೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಅವರು ಹದಿನೆಂಟು ವರ್ಷಗಳ ಕಾಲ ದೇಶ ಸೇವೆ ಮಾಡಿದವರು. ಆರ್ಟಿಲರಿ, ಕಮಾಂಡೋ ಸರ್ವೀಸ್ ಮಾಡಿ ನಿವೃತ್ತಿಯಾದವರು. ದೇಶ ಸೇವೆ ಮಾಡಿ ನಿವೃತ್ತಿಯಾದರೂ ವಿಶ್ರಾಂತ ಜೀವನಕ್ಕೆ ಒಗ್ಗಿಕೊಂಡಿಲ್ಲ. ಜೈ ಜವಾನ್, ಜೈ ಕಿಸಾನ್ ಎಂಬ ವಾಕ್ಯವನ್ನು ಜೀವನದಲ್ಲಿ ಪಾಲಿಸಿಕೊಂಡು ಸರ್ಕಾರ ನೀಡಿದ ಭೂಮಿಯಲ್ಲೇ ಕೃಷಿ(Agriculture) ಮಾಡಿ ಸೈ ಎನಿಸಿಕೊಂಡಿದ್ದಾರೆ. ಇವರು ಬೆಳೆದ ಹಣ್ಣುಗಳು ದುಬೈ ರಾಷ್ಟ್ರಗಳಿಗೆ ಮಾರಾಟವಾಗುತ್ತಿದೆ.

ತಮ್ಮ ಡ್ರ್ಯಾಗನ್ ಫ್ರೂಟ್ ತೋಟದಲ್ಲಿ ಗಿಡಗಳ ಆರೈಕೆ ಮಾಡುತ್ತಿರುವ ಇವರು ಗೋಪಾಲಕೃಷ್ಣ ಕಾಂಚೋಡು. ಉಜಿರೆಯ ನಿವಾಸಿಯಾಗಿರುವ ಇವರು ಹದಿನೆಂಟು ವರ್ಷಗಳ‌ ಕಾಲ ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಸದ್ಯ ಕೃಷಿಯಲ್ಲಿ ಖುಷಿ ಕಂಡಿದ್ದಾರೆ. ನಡ ಗ್ರಾಮದಲ್ಲಿ ಸದ್ಯ ಒಂದು ಎಕರೆ ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯುತ್ತಿದ್ದಾರೆ. ಒಂದು ಎಕರೆಗೆ 500 ಕಂಬಗಳನ್ನು ಹಾಕಿ ಒಂದು ಕಂಬಕ್ಕೆ ನಾಲ್ಕು ಗಿಡಗಳಂತೆ ಎರಡು ಸಾವಿರ ಗಿಡ ನೆಟ್ಟಿದ್ದಾರೆ. ಒಂದು ಕಂಬದಿಂದ ಇನ್ನೊಂದು ಕಂಬಕ್ಕೆ ಎಂಟು ಅಡಿ ದೂರ ಇರಬೇಕು. ಒಂದು ಸಾಲಿನಿಂದ ಮತ್ತೊಂದು ಸಾಲಿಗೆ ಹತ್ತು ಅಡಿ ಅಗಲ ಇರಬೇಕು ಅಂತಾ ಗೋಪಾಲಕೃಷ್ಣ ಕಾಂಚೋಡು ಹೇಳುತ್ತಾರೆ.

ಇದನ್ನೂ ಓದಿ: Mandya: ಬೇಬಿ ಬೆಟ್ಟದಲ್ಲಿ ದನಗಳ ಜಾತ್ರೆ- ರಾಮ-ಲಕ್ಷ್ಮಣರನ್ನು ನೋಡಲು ಮುಗಿಬಿದ್ದ ರೈತರು!

ಈ ಡ್ರ್ಯಾಗನ್ ಫ್ರೂಟ್‌ ಬೆಳೆಗೆ ಸಮೃದ್ಧವಾಗಿ ಬಿಸಿಲು ಬೀಳಬೇಕು. ಡ್ರ್ಯಾಗನ್ ಫ್ರೂಟ್ ಬೆಳೆಯ ನಡುವೆ ಉಪ ಬೆಳೆಯನ್ನೂ ಬೆಳೆಯಬಹುದು. ಕಾಂಚೋಡು ಅವರು ಬೆಳೆಯುವ ಡ್ರ್ಯಾಗನ್ ಫ್ರೂಟ್ ಗೆ ಭಾರೀ ಬೇಡಿಕೆಯಿದೆ. ಅರಬ್ ರಾಷ್ಟ್ರಗಳಿಗೆ ಕೊಚ್ಚಿ, ಕಲ್ಲಾಪು ಮಾರುಕಟ್ಟೆಯ ಮೂಲಕ ರವಾನೆಯಾಗುತ್ತಿದೆ. ಒಂದು ಕಂಬಕ್ಕೆ ವರ್ಷಕ್ಕೆ ಮೂರು ಬಾರಿ ವಿಂಗಡಿಸಿ ಗೊಬ್ಬರ ನೀಡಬೇಕು. ದನ, ಕೋಳಿ ಗೊಬ್ಬರ, ಹರಳಿಂಡಿ, ಕಹಿಬೇವು ಹಿಂಡಿ ಹಾಕಿದರೆ ಉತ್ತಮ ಬೆಳೆಯನ್ನು ನಿರೀಕ್ಷೆ ಮಾಡಬಹುದು. ಈ ಹಣ್ಣಿನಿಂದ ಪಾನೀಯ, ಬರ್ಪಿ, ಹಲ್ವ, ದೋಸೆ ಮಾಡಬಹುದು. ಸಿಪ್ಪೆಯಿಂದ ದೋಸೆ, ಇಡ್ಲಿಯನ್ನು ಮಾಡಬಹುದು. ಪ್ರಥಮ ವರ್ಷ‌ದಲ್ಲಿ ಆರು ಲಕ್ಷ ಹೂಡಿಕೆ ಮಾಡಿದರೆ ಆ ಹಣ ಐದು ವರ್ಷದಲ್ಲಿ ಪೂರ್ತಿಯಾಗಿ ವಾಪಸ್ ಬರುತ್ತದೆ. ಬೆಳೆದ ಎರಡನೇ ವರ್ಷದಲ್ಲಿ ಫಸಲು ಮಾರಾಟಕ್ಕೆ ಬರುತ್ತದೆ. ಗೋಪಾಲಕೃಷ್ಣ ಕಾಂಚೋಡು ಅವರು ನಾಲ್ಕು ವರ್ಷಗಳಿಂದ ಡ್ರ್ಯಾಗನ್ ಫ್ರೂಟ್ ಬೆಳೆಯುತ್ತಿದ್ದಾರೆ. ಮೂರನೇ ವರ್ಷ ಮೂರುವರೆ ಟನ್, ನಾಲ್ಕನೇ ವರ್ಷ ಹತ್ತು ಟನ್ ಬೆಳೆ ತೆಗೆದಿದ್ದಾರೆ. ಕಳೆದ ವರ್ಷ ಕೆಜಿಗೆ 175 ರೂಪಾಯಿಯಂತೆ ಮಾರಾಟ ಮಾಡಿದ್ದಾರೆ‌. ಈ ವರ್ಷ 150 ರಿಂದ 155 ರೂಪಾಯಿಯಂತೆ ಮಾರಾಟ ಮಾಡಿದ್ದಾರೆ.

ಗೋಪಾಲಕೃಷ್ಣ ಕಾಂಚೋಡು 1979 ರಲ್ಲಿ ಭಾರತೀಯ ಸೇನೆ ಸೇರಿ‌ 1997 ರ ತನಕ ಒಟ್ಟು 18 ವರ್ಷ ಸೇವೆ ಸಲ್ಲಿಸಿದ್ದಾರೆ. ಆರ್ಟಿಲರಿ, ಕಮಾಂಡೋ ಸರ್ವೀಸ್ ಮಾಡಿದ್ದಾರೆ. ಪ್ರಧಾನಿಗಳಿಗೆ ಕಮಾಂಡೋ ಭದ್ರತೆ ಒದಗಿಸಿದ್ದಾರೆ. ಪೋಕ್ರಾನ್ ಪರಮಾಣು ಪರೀಕ್ಷೆ ಸಂದರ್ಭದಲ್ಲಿ ಡಿ ಆರ್ ಡಿ ಒ ಅಧ್ಯಕ್ಷರಾಗಿದ್ದ ಅಬ್ದುಲ್ ಕಲಾಂ ಅವರ ಜೊತೆ ಒಂದು ತಿಂಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಐಪಿಕೆಎಫ್(ಇಂಡಿಯನ್ ಪೀಸ್ ಕೀಪಿಂಗ್ ಫೋರ್ಸ್‌) ನಲ್ಲಿ ಶ್ರೀಲಂಕಾದಲ್ಲಿ 23 ತಿಂಗಳ ಕಾಲ ಭಾಗವಹಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಆಪರೇಷನ್ ಸುರಕ್ಷಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಕೀರ್ತಿ ಗೋಪಾಲಕೃಷ್ಣ ಕಾಂಚೋಡು ಅವರಿಗೆ ಸಲ್ಲುತ್ತದೆ.