Last Updated:
ಭಾರತೀಯ ಸೇನೆ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ದಾಳಿ ಮಾಡಿತ್ತು. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪದ್ಮನಾಭ ಗೌಡರನ್ನು ಪುತ್ತೂರಿನಲ್ಲಿ ಗೌರವಿಸಲಾಯಿತು. 40 ವರ್ಷಗಳಿಂದ ಬಿಎಸ್ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ದಕ್ಷಿಣ ಕನ್ನಡ: ಪಹಲ್ಗಾಮ್ ನಲ್ಲಿ (pahalgam) ಉಗ್ರರ ದಾಳಿಯಾದ (terror attack) ಬಳಿಕ ಭಾರತೀಯ ಸೇನೆ (indian army) ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಉಗ್ರರ ಮೇಲೆ ದಾಳಿ ನಡೆಸಿದೆ. ಸೇನೆಯ ಈ ದಿಟ್ಟ ಉತ್ತರಕ್ಕೆ ದೇಶ ಮಾತ್ರವಲ್ಲದೆ, ಇಡೀ ವಿಶ್ವದಿಂದಲೇ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಈ ಸಾಹಸಮಯ ಕಾರ್ಯಾಚರಣೆಯಲ್ಲಿ ತೊಡಗಿಕೊಂಡ ಸೈನಿಕರ ಗೌರವ ಸಾರ್ವಜನಿಕ ವಲಯದಲ್ಲಿ ದುಪ್ಪಟ್ಟಾಗಿದೆ. ಕಾರ್ಯಾಚರಣೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾಗಿಯಾದ ಸೈನಿಕರನ್ನು (army jawan) ಗೌರವಿಸೋದೇ ಇಂದು ಭಾರತೀಯರ ಒಂದು ಸುಯೋಗ.
ಅಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ದಕ್ಷಿಣಕನ್ನಡ ಜಿಲ್ಲೆಯ ಸಿಂದಗಿ ಕೆಮ್ಮಾಯಿಯ ಪದ್ಮನಾಭ ಗೌಡರನ್ನು ಗೌರವಿಸುವ ಕಾರ್ಯಕ್ರಮವೊಂದು ಪುತ್ತೂರಿನಲ್ಲಿ ನಡೆದಿದೆ. ಅತ್ಯಂತ ರಹಸ್ಯವಾಗಿ ಪ್ಲ್ಯಾನ್ ಮಾಡಿದ ಕಾರ್ಯಾಚರಣೆಯ ಬಳಿಕ ಸೈನಿಕರಿಗೆ ಕೆಲವು ದಿನಗಳ ರಜೆಯನ್ನು ನೀಡಲಾಗಿದೆ. ಇದೇ ರೀತಿ ಮನೆಗೆ ಬಂದ ಪದ್ಮನಾಭ ಗೌಡರಿಗೆ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಗೌರವ ಸಲ್ಲಿಸಲಾಗಿದೆ.
ಕಾರ್ಯಾಚರಣೆಯ ಭಾಗವಾಗಿ ಇದ್ದ ತಂಡವೊಂದರ ನೇತೃತ್ವ ವಹಿಸಿಕೊಂಡಿದ್ದ ಪದ್ಮನಾಭ ಗೌಡ ಕಳೆದ ನಲ್ವತ್ತು ವರ್ಷದಿಂದ ಬಿಎಸ್ಎಫ್ ನಲ್ಲಿ ಸೈನಿಕನಾಗಿ ದುಡಿಯುತ್ತಿದ್ದಾರೆ. ಓರ್ವ ಸೈನಿಕನಿಗೆ ದೇಶದ ಜನರೇ ಬಲವಾಗಿದ್ದು, ದೇಶದ ಜನರೆಲ್ಲಾ ಸೈನಿಕನ ಹಿಂದೆ ಇದ್ದಾರೆ ಎಂದು ತಿಳಿದಾಗ ಸೈನಿಕನಲ್ಲಿ ದೈರ್ಯ ದುಪ್ಪಟ್ಟಾಗುತ್ತದೆ ಎನ್ನುವುದು ಪದ್ಮನಾಭ ಗೌಡರ ಅಭಿಪ್ರಾಯ. ಸೈನಿಕ ಯಾವುದೇ ಫಲಾಪೇಕ್ಷೆಗಳಿಲ್ಲದೆ ದೇಶಕ್ಕಾಗಿ ದುಡಿಯುತ್ತಿದ್ದು, ಪ್ರತಿಯೊಬ್ಬ ಭಾರತೀಯ ಸೈನದ ಜೊತೆ ನಿಲ್ಲಬೇಕು ಎನ್ನುತ್ತಾರೆ ಪದ್ಮನಾಭ ಗೌಡ.
ಪುತ್ತೂರಿನ ಪ್ರತಿಷ್ಠಿತ ಮನೆತನಕ್ಕೆ ಸೇರಿದ ಪದ್ಮನಾಭ ಗೌಡರ ಕುಟುಂಬದ ಮೂವರು ಸದಸ್ಯರು ಭಾರತೀಯ ಸೇನೆಯಲ್ಲಿ ದುಡಿದವರಾಗಿದ್ದು, ಎಳವೆಯಿಂದಲೇ ಭಾರತದ ಸೈನ್ಯದಲ್ಲಿ ಸೇರಬೇಕೆನ್ನುವ ಇಚ್ಛೆ ಪದ್ಮನಾಭ ಗೌಡರದ್ದಾಗಿತ್ತು. ತಮ್ಮ ಇಚ್ಛೆಯನ್ನು ಸುಮಾರು 40 ವರ್ಷಗಳ ಹಿಂದೆಯೇ ಪೂರೈಸಿಕೊಂಡಿರುವ ಪದ್ಮನಾಭ ಗೌಡರು ಮುಂದೆಯೂ ದೇಶಕ್ಕಾಗಿ ದುಡಿಯಲು ಸಿದ್ಧವಾಗಿದ್ದಾರೆ.
Dakshina Kannada,Karnataka
June 10, 2025 4:10 PM IST