Last Updated:
ಕದ್ರಿ ಮಂಜುನಾಥ ದೇವರ ಮತ್ತು ಜಾರಂದಾಯ ದೈವದ 48 ವರ್ಷಗಳ ಬಳಿಕ ಅಪೂರ್ವ ಭೇಟಿ ಮಂಗಳೂರಿನಲ್ಲಿ ನಡೆದಿದ್ದು, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ.
ದಕ್ಷಿಣ ಕನ್ನಡ: 48 ವರ್ಷಗಳ ಹಿಂದೆ ನಿಂತು ಹೋಗಿದ್ದ ಧರ್ಮ ಭೇಟಿಗೆ ಮಂಗಳೂರು(Mangaluru) ಮತ್ತೆ ಸಾಕ್ಷಿಯಾಗಿದೆ. ಅರಸು ಧರ್ಮ ಜಾರಂದಾಯ ದೈವ ಮತ್ತು ಕದ್ರಿ ಮಂಜುನಾಥ ದೇವರ ಭೇಟಿ 48 ವರ್ಷಗಳ ಬಳಿಕ ನಡೆದಿದೆ. ಈ ಮೂಲಕ ಕದ್ರಿ ಮಂಜುನಾಥನ ಕ್ಷೇತ್ರ(Kadri Manjunatha Temple) ಗತವೈಭವದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಬಾಳೆಬೈಲು ಶ್ರೀ ಅರಸು ಧರ್ಮ ಜಾರಂದಾಯ ದೈವ, ನೇಮದಲ್ಲಿ ಮಂಜುನಾಥ ದೇವರ ಜೊತೆಗಿನ ಮಾಯದ ಭೇಟಿ ಸಾಕು, ಜೋಗದ ಭೇಟಿ ಬೇಕು ಎಂದು ಪ್ರಸ್ತಾಪವನ್ನಿಟ್ಟಿತ್ತು. ಪ್ರತಿ ವರ್ಷ ನೇಮೋತ್ಸವ ಆದಾಗ ದೈವ ಈ ಪ್ರಸ್ತಾಪವನ್ನಿಟ್ಟುಕೊಂಡೇ ಬಂದಿತ್ತು. ಗ್ರಾಮದೊಳಗಿನ ಸಮಸ್ಯೆಗಳಿಗೆ(Village Problems) ಈ ಭೇಟಿ ಪರಿಹಾರ ಎಂಬ ಸೂಚನೆಯನ್ನೂ ದೈವ ನೀಡಿತ್ತು. ಈ ಬಗ್ಗೆ ಪ್ರಶ್ನಾ ಚಿಂತನೆಯನ್ನು ಮಾಡಿದಾಗ ದೈವ ದೇವರ ಜೋಗದ ಭೇಟಿಗೆ ಇದು ಸಕಾಲ. ಈ ಭೇಟಿಯಿಂದ ಗ್ರಾಮ, ನಾಡಿಗೆ ಸುಭಿಕ್ಷೆಯಾಗಲಿದೆ ಅಂತಾ ಕಂಡುಬಂದಿದೆ.
ದೈವದ ಮಾತಿನಂತೆಯೇ 48 ವರ್ಷಗಳ ಬಳಿಕ ಕದ್ರಿ ದೇವರು ಮತ್ತು ಜಾರಂದಾಯ ದೈವದ ಅಪೂರ್ವ ಭೇಟಿಯಾಗಿದೆ. ಆದಿತ್ಯವಾರ ಸಂಜೆಯ ವೇಳೆಗೆ ಕೆಪಿಟಿ ಉದಯನಗರದಲ್ಲಿರುವ ಬಾಳೆಬೈಲು ಶ್ರೀ ಅರಸು ಜಾರಂದಾಯ ಬಂಟ ಮತ್ತು ವಾರಾಹಿ ದೈವಸ್ಥಾನ,ಕಲ್ಲಪಟ್ಟೆ ಭಂಡಾರ ದೈವಸ್ಥಾನದಿಂದ ಶ್ರೀ ಅರಸು ಜಾರಂದಾಯ, ಬಂಟ ದೈವಗಳ ಭಂಡಾರ ಸಕಲ ಬಿರುದಾವಳಿಯೊಂದಿಗೆ ಹೊರಟು ರಾತ್ರಿ ಎಂಟು ಗಂಟೆಯ ವೇಳೆಗೆ ಕದ್ರಿ ಕ್ಷೇತ್ರವನ್ನು ತಲುಪಿದೆ. ಕದ್ರಿ ದೇವಸ್ಥಾನದ ಗೋಪುರ ಬಳಿ ದೈವ ಜಾರಂದಾಯವನ್ನು ದೇವಸ್ಥಾನದ ಸಮಿತಿ ಸ್ವಾಗತಿಸಿದೆ.
ಬಳಿಕ ದೈವ-ದೇವರ ಅಪೂರ್ವ ಭೇಟಿಯಾಗಿದೆ. ಈ ಅಪರೂಪದ ಕ್ಷಣವನ್ನು ಚೆಂಡೆ, ವಾದ್ಯ ಘೋಷದೊಂದಿಗೆ ಸಿಡಿಮದ್ದು ಪ್ರದರ್ಶನದ ಮೂಲಕ ಭಕ್ತರು ಕಣ್ತುಂಬಿಕೊಂಡಿದ್ದಾರೆ. ದೇವರ ಬೆಳ್ಳಿ ರಥೋತ್ಸವದ ಬಳಿಕ ಧರ್ಮ ದೈವ ಜಾರಂದಾಯ ಹಿಂದಿರುಗಿದೆ. ಆ ಐತಿಹಾಸಿಕ ಕ್ಷಣಕ್ಕೆ ಸಾವಿರಾರು ಜನ ಸಾಕ್ಷಿಯಾಗಿದ್ದಾರೆ.48 ವರ್ಷದ ಹಿಂದೆ ಯಾವುದೋ ಕಾರಣಕ್ಕೆ ನಿಂತು ಹೋಗಿದ್ದ ಧರ್ಮ ನಡೆ ಈಗ ಮತ್ತೆ ಆರಂಭವಾಗಿದ್ದು ಭಕ್ತರಿಗೆ ನೆಮ್ಮದಿ ತಂದಿದೆ.
Dakshina Kannada,Karnataka
May 22, 2025 11:40 AM IST