ವಳಾಲು ಬಸದಿಯ ಜೀರ್ಣೋದ್ಧಾರದಲ್ಲಿ ಐತಿಹಾಸಿಕ ಆವಿಷ್ಕಾರ
ಸುಮಾರು 12ನೇ ಶತಮಾನದಲ್ಲಿ ಕನ್ನಡ ಲಿಪಿಯಲ್ಲಿ ಸಂಸ್ಕೃತವನ್ನು ಬರೆಯಲಾಗಿರುವ ಈ ನಿಷಿಧಿಯಲ್ಲಿ ಮಾಘನಂದಿ ಮುನಿಗಳ ಶಿಷ್ಯ ತ್ರಿಭುವನ ಕೀರ್ತಿ ಮುನಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಜತೆಗೆ, ಮೇದಿ ಅಥವಾ ಮೈದಿ ಶೆಟ್ಟಿ ಎಂಬವರು ಈ ನಿಷಿಧಿಯನ್ನು ಮಾಡಿಸಿದ್ದಾರೆ ಎಂಬ ಉಲ್ಲೇಖವಿದೆ. ಮಾಘ ನಂದಿ ಹಾಗೂ ಭುವನಕೀರ್ತಿ ಜಿನ ಮುನಿಗಳ ಹೆಸರನ್ನು ಶಿಲ್ಪದ ಮೇಲ್ಗಡೆ ಬರೆಯಲಾಗಿರುವುದು ವಿಶೇಷವಾಗಿದೆ.
ಸರಳ ಶಿಲಾನ್ಯಾಸದೊಂದಿಗೆ ವಳಾಲು ಜಿನಮಂದಿರದ ನವೀಕರಣಕ್ಕೆ ಚಾಲನೆ
ನಿಷಿಧಿಯ ಸಾರಾಂಶ ನೋಡುವುದಾದ್ರೆ, ಮೂಲ ಸಂಘ ಕುಂದಕುಂದಾನ್ವಯ ಬಲಾತ್ಕಾರಗಣ ಸರಸ್ವತಿಗಚ್ಚ ಮುನಿ ಪರಂಪರೆಗೆ ಸೇರಿದ ಮುನಿಗಳು ಮಾಘನಂದಿ ಸಿದ್ಧಾಂತಿಗಳು. ಈ ಮಾಘನಂದಿ ಮುನಿಗಳು ರಾಜಗುರುಗಳು, ಮಂಡಲ ಆಚಾರ್ಯರು, ಮಹಾವಾದಿಗಳಿಗೆ ಮಾದೀಶ್ವರರಾಜರೂ, ವಾದಿಪಿತಾಮಹರೂ, ವಿದ್ವತ್ತು ಹೊಂದಿದವರ ಚಕ್ರವತ್ತಿಗಳೂ ಆಗಿದ್ದರು. ಇವರ ಪ್ರೀತಿಯ ಶಿಷ್ಯ ತ್ರಿಭುವನ ಕೀರ್ತಿಗಳು. ಈ ತ್ರಿಭುವನ ಕೀರ್ತಿಗಳು ಜ್ಞಾನದಲ್ಲಿ ಚಂದ್ರನ ಬೆಳದಿಂಗಳ ಬಣ್ಣದ ಭವ್ಯ ನೈದಿಲೆಗಳ ಗುಂಪಿನಂತೆ, ವಾದಿಗಳಿಗೆ ಪ್ರಖರ ಸೂರ್ಯನಂತೆಯೂ ಇದ್ದರು. ಸುಸಂದರ್ಭ ಒದಗಿದಾಗ ಈ ಭುವನಕೀರ್ತಿಗಳು ತಮ್ಮ ಗುರುಗಳಾದ ಮಾಘನಂದಿಯವರ ಬಳಿ ಸಲ್ಲೇಖನ ವ್ರತ ತೆಗೆದುಕೊಂಡು ಸಮಾಧಿ ಮರಣ ಹೊಂದುತ್ತಾರೆ. ತ್ರಿಭುವನಕೀರ್ತಿಗಳ ಶಿಷ್ಯನಾದ ಮೈದಿ ಸೆಟ್ಟಿ ಎಂಬುವನು ಈ ನಿಷಿಧಿಯನ್ನು ನಿಲ್ಲಿಸುತ್ತಾನೆ. ಮೈದಿ ಸೆಟ್ಟಿ ಒಬ್ಬ ಜಿನಧರ್ಮಿ, ಅವನು ನಾಲ್ಕು ವಿಧ ದಾನಗಳಾದ ಆಹಾರ, ಅಭಯ, ಶಾಸ್ತ್ರ, ಔಷಧಗಳನ್ನು ದಾನ ಮಾಡುವುದರಲ್ಲಿ ದಾನಚಿಂತಾಮಣಿಯಾಗಿದ್ದ ಎಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ.
ಡಾ. ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ವಳಾಲು ಬಸದಿಯ ಜೀರ್ಣೋದ್ಧಾರ
ಶಿಲಾನ್ಯಾಸ ಕಾರ್ಯಕ್ರಮಯಲ್ಲಿ ತಾಲೂಕು ವಳಾಲ್ ಭಗವಾನ್ 1008 ಶ್ರೀ ಪಾಶ್ರ್ವನಾಥ ಸ್ವಾಮಿ ಜಿನಮಂದಿರದ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆದಿದೆ. ಮೂಡಬಿದಿರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಪಾವನ ಸಾನಿಧ್ಯದ ಆಶೀರ್ವಚನದೊಂದಿಗೆ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಊರ ಪರವೂರ ಸದ್ಧರ್ಮ ಬಂಧುಗಳ ಗಣ್ಯರ ಸಹಕಾರದೊಂದಿಗೆ ನೆರವೇರಿತು. ಮುಖ್ಯ ಅತಿಥಿಗಳು, ಸಮಾರಂಭ ಇತ್ಯಾದಿ ಏನೂ ಇಲ್ಲದೆ, ಧಾರ್ಮಿಕ ಪೂಜಾ ವಿಧಾನಗಳೊಂದಿಗೆ ಸರಳವಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ವಾಸ್ತು ತಜ್ಞ ಡಾ. ಸುದರ್ಶನ್ ಇಂದ್ರ ಪಾದೂರು, ಪ್ರತಿಷ್ಠಾಚಾರ್ಯ ಜಯರಾಜ ಇಂದ್ರ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಿತು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಧನಕೀರ್ತಿ ಬಾರಿಕೆ, ಶ್ರೀ ಪಾಶ್ರ್ವನಾಥ ಸ್ವಾಮಿ ಜಿನಮಂದಿರ ಸಮಿತಿ ಅಧ್ಯಕ್ಷೆ ಸುವರ್ಣಲತಾ ಹಾಗೂ ಊರ ಭಕ್ತಾದಿಗಳು ಭಾಗವಹಿಸಿದ್ದರು.
ಜೀರ್ಣೋದ್ಧಾರ ಸಮಿತಿಯ ಗೌರವಾದ್ಯಕ್ಷರಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು, ಮೂಡಬಿದಿರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ರಾಜ್ಯದ ಇನ್ನಿತರ ಕೆಲವು ಜೈನ ಮಠಗಳ ಸ್ವಾಮೀಜಿಯವರು ಸಂಪೂರ್ಣ ಸಹಕಾರದ ಅಭಯ ನೀಡಿದ್ದಾರೆ. ಊರವರು ಈ ಪುಣ್ಯ ಕಾರ್ಯದಲ್ಲಿ ಸಹಕರಿಸುತ್ತಿದ್ದಾರೆ. ವಳಾಲು ಶ್ರೀ ಪಾಶ್ರ್ವನಾಥ ಸ್ವಾಮಿ ಬಸದಿಯು ಪುರಾತನ ಕಾಲದ್ದಾಗಿರುವುದರಿಂದ ಬಹಳ ಸುಂದರವಾಗಿ, ಆದಷ್ಟು ಶೀಘ್ರವಾಗಿ ಎಲ್ಲರ ಸಹಕಾರದೊಂದಿಗೆ ಜೀರ್ಣೋದ್ಧಾರ ಕಾರ್ಯದಲ್ಲಿ ಕೈ ಜೋಡಿಸಬೇಕೆಂಬುದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಧನಕೀರ್ತಿ ಅವರ ವಿನಂತಿಯಾಗಿದೆ.
Dakshina Kannada,Karnataka
June 19, 2025 9:53 AM IST