ಕರಾವಳಿಯಲ್ಲಿ ಭೀಕರ ಬಿಸಿಲು: ಜನರಲ್ಲಿ ಆರೋಗ್ಯ ಸಮಸ್ಯೆಗಳು ಎದುರಾಗುವ ಭೀತಿ, ಆರೋಗ್ಯಾಧಿಕಾರಿ ಸಲಹೆಗಳೇನು? – HEALTH OFFICER SUGGESTIONS
ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡದ ಜನರಿಗೆ ಬೇಸಿಗೆಯ ಕಾರಣದಿಂದ ಆರೋಗ್ಯ ಸಮಸ್ಯೆಗಳು ಎದುರಾಗುವ ಭೀತಿ ಕಾಡುತ್ತಿದೆ. ಈ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿ ಕೆಲವು ಸಲಹೆಗಳನ್ನು ನೀಡಿದ್ದಾರೆ.
ದಕ್ಷಿಣ ಕನ್ನಡ: ಕರಾವಳಿಯಲ್ಲಿ ಈ ಬಾರಿ ವಾಡಿಕೆಗಿಂತ ಮೊದಲೆ ಬೇಸಿಗೆ ಕಾಲ ಬಂದಿದೆ. ಈ ಬಾರಿಯ ಬೇಸಿಗೆ ಹಿಂದೆಂದೂ ಇರದಂತಹ ಬಿಸಿಗಾಳಿಯನ್ನು ಹೊತ್ತುಕೊಂಡು ಬಂದಿದೆ. ಬಿರು ಬೇಸಿಗೆಯ ಕಾರಣದಿಂದ ಆರೋಗ್ಯ ಸಮಸ್ಯೆಗಳು ಎದುರಾಗುವ ಭೀತಿ ಜನರನ್ನು ಕಾಡುತ್ತಿದೆ.
ಕರಾವಳಿ ಜಿಲ್ಲೆಯಲ್ಲಿ ಈ ಬಾರಿ ಫೆಬ್ರವರಿಯಿಂದಲೇ ಬೇಸಿಗೆಯ ಸಂಕಷ್ಟ ಎದುರಾಗಿದೆ. ಬೇಸಿಗೆಗೆ ಬಿಸಿಗಾಳಿಯ ಪ್ರಭಾವ ಜನರ ಮೇಲೆ ತೀವ್ರ ಪರಿಣಾಮವನ್ನು ಉಂಟುಮಾಡಿದೆ. ಕಾದ ಕೆಂಡದಂತಿರುವ ಕರಾವಳಿ ಜಿಲ್ಲೆಯಲ್ಲಿ ಒಂದೆಡೆ ಜನರಿಗೆ ಹಗಲಿನಲ್ಲಿ ಓಡಾಡುವುದೇ ಕಷ್ಟವಾಗಿದ್ದು, ಇದರ ಜೊತೆಗೆ ಆರೋಗ್ಯ ಸಮಸ್ಯೆಗಳು ಎದುರಾಗುವ ಭೀತಿ ಶುರುವಾಗಿದೆ.
ಬೇಸಿಗೆಯ ಕಾರಣದಿಂದ ಬಿಸಿಲಿನ ನೇರ ಪರಿಣಾಮವಾಗುವುದು ಜನರ ಆರೋಗ್ಯದ ಮೇಲೆ. ಹೀಟ್ ವೇವ್ ನಿಂದ ನಿರ್ಜಲಿಕರಣದಿಂದ ದೇಹ ನಿಶ್ಯಕ್ತಿಯಾಗುವುದು, ತಲೆ ತಿರುಗಿ ಬೀಳುವುದು ಮೊದಲಾದವುಗಳು ನಡೆಯುತ್ತದೆ. ಅತೀ ಬಿಸಿಲಿನಿಂದ ಚರ್ಮ ನವೆ ಬರುವುದು, ಬಿಸಿಲಾಘಾತ, ಹೀಟ್ ಸ್ಟ್ರೋಕ್ ಕೂಡ ಆಗುವ ಸಾಧ್ಯತೆ ಇದೆ.
ಅತೀ ಹೆಚ್ಚು ಬಿಸಿಲಿನಿಂದ ಗರ್ಭಿಣಿಯರು, ಬಾಣಂತಿರು, ಮಕ್ಕಳು, ವೃದ್ದರಿಗೆ ಅತೀ ಹೆಚ್ಚು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಬೇಸಿಗೆಯಲ್ಲಿ ಅಶುದ್ಧ ಕುಡಿಯುವ ನೀರಿನಿಂದ ಕೂಡ ಆರೋಗ್ಯ ಸಮಸ್ಯೆಗಳು ಉದ್ಭವಿಸಲಿವೆ. ನೀರನ್ನು ನಿಯಮಿತವಾಗಿ ಶುದ್ಧೀಕರಿಸದೇ ಇರುವುದರಿಂದ ಕಾಲರಾ ಸೇರಿದಂತೆ ಇತರ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಗಾಳಿಯಲ್ಲಿ ಧೂಳಿನ ಕಣದಿಂದ ಉಸಿರಾಟದ ಸಮಸ್ಯೆಯೂ ಉಂಟಾಗಲಿದೆ. ಅತೀಯಾದ ನಿರ್ಜಲೀಕರಣದಿಂದ ಕಿಡ್ನಿಸ್ಟೋನ್ ಆಗುವ ಸಾಧ್ಯತೆಯು ಇದೆ. ನೀರನ್ನು ಕುಡಿಯುವುದು ಇದಕ್ಕಿರುವ ಪರಿಹಾರವಾಗಿದೆ.
ಆರೋಗ್ಯಾಧಿಕಾರಿ ಸಲಹೆಗಳೇನು: ಈ ಬಗ್ಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ . ಎಚ್. ಆರ್. ತಿಮ್ಮಯ್ಯ, ಈ ಬಾರಿ ಕರಾವಳಿಯಲ್ಲಿ ಹೆಚ್ಚು ತಾಪಮಾನ ಇದೆ. ಬೇಸಿಗೆ ಕಾಲದಲ್ಲಿ ಅತೀ ಹೆಚ್ಚು ಬಿಸಿಲಿನಿಂದ ನಿರ್ಜಲೀಕರಣ, ಚರ್ಮ ತುರಿಕೆ, ಬಿಸಿಲಾಘತ, ಹೀಟ್ ಸ್ಟ್ರೋಕ್ ಬರಬಹುದು. ಗರ್ಭಿಣಿಯರು, ಬಾಣಂತಿಯರು, ಮಕ್ಕಳು ವೃದ್ದರು ಮಧ್ಯಾಹ್ನದ ವೇಳೆ ಹೊರಗೆ ಬರದೆ ಇರುವುದು ಸೂಕ್ತ. ಅನಿವಾರ್ಯವಿದ್ದಲ್ಲಿ ಛತ್ರಿ, ಬಿಳಿ ಬಣ್ಣದ ಬಟ್ಟೆ ಧರಿಸುವುದು ಒಳ್ಳೆಯದು. ಶುದ್ಧವಾದ ಕುಡಿಯುವ ನೀರು ಕುಡಿಯಬೇಕು. ಎಳನೀರು, ಮನೆಯಲ್ಲಿ ಮಾಡಿದ ಪಾನಕ, ಮಜ್ಜಿಗೆ ಕುಡಿಯುವುದರಿಂದ ದೇಹದಲ್ಲಿ ನೀರಿನಾಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.