Dakshina Kannada: The gods who go to the mosque and invite people to a fair!

Dakshina Kannada: The gods who go to the mosque and invite people to a fair!

Last Updated:

ಉದ್ಯಾವರ ಅರಸು ಮಂಜಿಷ್ಣಾರ್‌ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಪ್ರಾಚೀನ ಕಾಲದಿಂದಲೇ ಆಚರಿಸಿಕೊಂಡು ಬರುತ್ತಿರುವ ಅರಸು ದೈವಗಳ ಮಸೀದಿ ಭೇಟಿಯು ಇಂದಿಗೂ ಹಿಂದೂ, ಮುಸ್ಲಿಂ ಭಾವೈಕ್ಯದ ಪ್ರತೀಕವಾಗಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಧರ್ಮದ ಹೆಸರಿನಲ್ಲಿ, ಆಚರಣೆಯ ಹೆಸರಿನಲ್ಲಿ ಇಂದು ಧರ್ಮ -ಧರ್ಮಗಳ ಮಧ್ಯೆ ಕಚ್ಚಾಟ ನಡೆಯುತ್ತಿದೆ. ಆದರೆ ಇಲ್ಲೊಂದು ಕ್ಷೇತ್ರದಲ್ಲಿ ಸಮಾಜ ಎಷ್ಟೇ ಬದಲಾದರೂ, ಈ ಕ್ಷೇತ್ರದ ಕಟ್ಟುಪಾಡು ಮಾತ್ರ ಬದಲಾಗಿಲ್ಲ. ಹಿಂದೂಗಳ ಆರಾಧ್ಯ ದೈವಗಳು, ಮುಸ್ಲಿಂ ಸಮುದಾಯದ ಮಸೀದಿಗೆ ತೆರಳಿ, ದೈವಗಳ ಜಾತ್ರೋತ್ಸವಕ್ಕೆ (Jatrotsava) ಆಹ್ವಾನ ನೀಡುವ ವಿಶಿಷ್ಟ ಸಂಪ್ರದಾಯ ಇಲ್ಲಿ ಈವರೆಗೂ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಪ್ರಕಾರದಲ್ಲೇ ನಡೆಯುತ್ತಿದೆ. ಹೌದು, ಇದು ಹಿಂದೂ ಮುಸ್ಲಿಂ ಭಾವೈಕ್ಯದ ಕ್ಷೇತ್ರವೆಂದೇ ಹೆಸರಾದ ಕೇರಳದ‌ ಕಾಸರಗೋಡು ಜಿಲ್ಲೆಯ(Kasaragoud) ಉದ್ಯಾವರ ಮಾಡ ಎನ್ನುವ ಕ್ಷೇತ್ರದ ಸಂಪ್ರದಾಯ.

ಕಳೆದ 800 ವರ್ಷಗಳಿಂದ ವಾಡಿಕೆಯಲ್ಲಿರುವ ಉದ್ಯಾವರ ಶ್ರೀ ಅರಸು ದೈವಗಳು ವರ್ಷಂಪ್ರತಿಯ ಪದ್ಧತಿಯಂತೆ ಅರಸು ದೈವ ಪಾತ್ರಿಗಳು ಮತ್ತು ದೇವಸ್ಥಾನದ ಪ್ರತಿನಿಧಿಗಳು ಹಾಗೂ ಸಹಸ್ರಾರು ಹಿಂದೂ ಬಾಂಧವರು ಜತೆಯಾಗಿ ಉದ್ಯಾವರ ಸಾವಿರ ಜಮಾತ್ ಮಸೀದಿಗೆ ಭೇಟಿ ನೀಡಿ ದೈವಗಳ‌ ಜಾತ್ರೆಗೆ ಆಹ್ವಾನ ನೀಡುತ್ತಾರೆ. ಉದ್ಯಾವರ ಅರಸು ಮಂಜಿಷ್ಣಾರ್‌ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಪ್ರಾಚೀನ ಕಾಲದಿಂದಲೇ ಆಚರಿಸಿಕೊಂಡು ಬರುತ್ತಿರುವ ಅರಸು ದೈವಗಳ ಮಸೀದಿ ಭೇಟಿಯು ಇಂದಿಗೂ ಹಿಂದೂ, ಮುಸ್ಲಿಂ ಭಾವೈಕ್ಯದ ಪ್ರತೀಕವಾಗಿದೆ.

ಮೇಷ ಸಂಕ್ರಮಣ ಕಳೆದು ಬರುವ ಮೊದಲ ಶುಕ್ರವಾರ ಈ ಅನುಷ್ಠಾನ ವಾಡಿಕೆಯಾಗಿದೆ. ಈ ಬಾರಿ ಎರಡನೇ ಶುಕ್ರವಾರ ಮಧ್ಯಾಹ್ನ ಉದ್ಯಾವರ ಕ್ಷೇತ್ರದ ಭಂಡಾರ ಮನೆಯಿಂದ ಹೊರಟ ದೈವಗಳು 1.30 ರ ಹೊತ್ತಿಗೆ ಜಮಾತ್ ಗೆ ತಲುಪಿದವು. ಈ ವೇಳೆ ಜುಮಾ ನಮಾಜ್‌ ಮುಗಿಸಿ ಸಜ್ಜಾಗಿ ನಿಂತಿದ್ದ ಮಸೀದಿಯ ಆಡಳಿತ ಸಮಿತಿ ಪ್ರತಿನಿಧಿಗಳು ಹಾಗೂ ಸಹಸ್ರಾರು ಮುಸ್ಲಿಂ ಬಾಂಧವರು ಪರಂಪರಾಗತ ರೀತಿಯಲ್ಲಿ ಉದ್ಯಾವರ ಅರಸು ದೈವ ಪಾತ್ರಿಗಳಿಗೆ ಅದ್ದೂರಿ ಸ್ವಾಗತ ನೀಡಿದರು. ದೈವ ಪಾತ್ರಿಗಳು ಜಮಾತ್ ಆಡಳಿತದವರೊಂದಿಗೆ ಮಸೀದಿಯೊಳಗೆ ಪ್ರವೇಶಿಸಿ ಮಸೀದಿ ಮುಂಭಾಗದಲ್ಲಿ ಜಮಾತಿನ ಸರ್ವ ಮುಸ್ಲಿಂ ಬಾಂಧವರನ್ನು ಕೂಡ ಮಾಡ ಅರಸು ದೈವಗಳ ಜಾತ್ರೋತ್ಸವಕ್ಕೆ ಆಹ್ವಾನವಿತ್ತರು. ಮೇ 8 ರಿಂದ 11ರ ತನಕ ಮಾಡ ಕ್ಷೇತ್ರದ ಉತ್ಸವಕ್ಕೆ ಸಾವಿರ ಜಮಾಅತ್‌ ವ್ಯಾಪ್ತಿಯಲ್ಲಿರುವ ಎಲ್ಲ ಮುಸ್ಲಿಂ ಬಾಂಧವರು ಕೂಡ ಪಾಲ್ಗೊಳ್ಳುವ ಮೂಲಕ ಹಿಂದೂ, ಮುಸ್ಲಿಂ ಭಾವೈಕ್ಯತೆಯ ಕೊಂಡಿಯಾಗಿ ಮುಂದುವರೆದಿದೆ.

ಈ ಕ್ಷೇತ್ರದಲ್ಲಿ ಜಾತ್ರೆ ನಡೆಯುವ ನೇಮೋತ್ಸವದ ದಿನದಂದು ಜಮಾಅತ್‌ನ ಅಧಿಕಾರಿಗಳು ಕೂರಲು ದೇವಸ್ಥಾನದ ಕಟ್ಟೆಯಲ್ಲಿ ವಿಶೇಷವಾದ ಸ್ಥಳವನ್ನು ನೀಡಲಾಗುತ್ತದೆ. ಮಾತ್ರವಲ್ಲದೆ ದೈವಗಳು ಆಶೀರ್ವದಿಸಿದ ಮಲ್ಲಿಗೆ ಹೂವುಗಳನ್ನು ಕೂಡ ಜಮಾಅತ್‌ನವರಿಗೆ ನೀಡಲಾಗುತ್ತದೆ. ಈ ಪವಿತ್ರವಾದ ಮಾಡ ಕ್ಷೇತ್ರದಲ್ಲಿ ನಡೆಯುವ ಜಾತ್ರೋತ್ಸವಕ್ಕೆ ಭೇದ-ಭಾವವಿಲ್ಲದೆ ಹಿಂದೂ ಮುಸಲ್ಮಾನರು ಭಾಗವಹಿಸುವುದು ವಿಶೇಷತೆಯಾಗಿದೆ.