Last Updated:
ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ನೇತೃತ್ವದಲ್ಲಿ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು.
ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನ (Puttur) ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಪಡುಮಲೆ ಶ್ರೀ ನಾಗ ಬೆರ್ಮರ್ ಮತ್ತು ಮಹಾಮಾತೆ ದೇಯಿ ಬೈದ್ಯೆತಿ ಸಾನಿಧ್ಯದಲ್ಲಿ ವಿಶೇಷ ರೀತಿಯ ದೀಪೋತ್ಸವ ಕಾರ್ಯಕ್ರಮ ನಡೆದಿದೆ. ರಾಮಾಯಣ ಮತ್ತು ಮಹಾಭಾರತದಲ್ಲಿ ನಡೆದ ಸತ್ಯ-ಅಸತ್ಯಗಳ ನಡುವಿನ ಸಂಘರ್ಷ ಮತ್ತು ಧರ್ಮಕ್ಕೆ ಸಿಕ್ಕಿದ ಅಂತಿಮ ವಿಜಯವನ್ನು ಮತ್ತೊಮ್ಮೆ ತುಳುನಾಡಿನಲ್ಲಿ ಕಾಣುವಂತಾಗಿದ್ದು ಕೋಟಿ ಚೆನ್ನಯರ ಮೂಲಕ ಎನ್ನುವ ಮಾತು ಈ ಭಾಗದಲ್ಲಿದೆ. ಕೋಟಿ-ಚೆನ್ನಯರು ಬದುಕಿನ ನಂತರವೂ ಧರ್ಮ ದೇವತೆಗಳಾಗಿ ಆರಾಧಿಸಲ್ಪಡುತ್ತಿರುವ ಕ್ಷೇತ್ರ ಪಡುಮಲೆಯಾಗಿದ್ದು, ಈ ವೀರರ ಆದರ್ಶಗಳನ್ನು ಮರೆಯಬಾರದು ಎನ್ನುವ ಉದ್ದೇಶಕ್ಕಾಗಿ ಪಡುಮಲೆಯಲ್ಲಿ (Padumale) ಪ್ರತೀ ವರ್ಷ ಈ ದೀಪೋತ್ಸವ (Deepotsava) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಪುರಾಣ ಕಾಲದಲ್ಲಿ ಸಿಗುವ ಧನ್ವಂತರಿಯು ಔಷಧ ವಿದ್ಯೆಗೆ ಅಧಿದೇವತೆಯಾಗಿದ್ದಂತೆ, ತುಳುವ ಚರಿತ್ರೆಯಲ್ಲಿ ಈ ಸ್ಥಾನ ಕೋಟಿ-ಚೆನ್ನಯರ ತಾಯಿ ದೇಯಿ ಬೈದ್ಯೆತಿಗೆ ಪ್ರಾಪ್ತವಾಗಿದೆ. ಇವತ್ತಿಗೂ ದೇಯಿ ಮಾತೆಯೂ ಸಂಜೀವಿನಿ ಶಕ್ತಿಯ ಸಂಕೇತವಾಗಿದ್ದು, ಜಾತಿ ಮತ ಭೇಧಗಳ ಎಲ್ಲೆ ಮೀರಿ ತುಳುನಾಡಿನಲ್ಲಿ ಆರಾಧಿಸಲ್ಪಡಲಾಗುತ್ತಿದ್ದು, ಪಡುಮಲೆ ಈ ದೇಯಿ ಬೈದೆದಿಯ ತವರಾಗಿಯೂ ಗುರುತಿಸಿಕೊಂಡಿದೆ.
ಈ ಕಾರಣಕ್ಕಾಗಿ ಕ್ಷೇತ್ರದ ಮಹತ್ವವನ್ನು ನಾಡಿನೆಲ್ಲೆಡೆ ಪಸರಿಸುವ ನಿಟ್ಟಿನಲ್ಲೂ ದೀಪೋತ್ಸವದಂತಹ ಹಲವು ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಕಳೆದ ವರ್ಷ ಸುಮಾರು 1500 ಸಾವಿರದಷ್ಟು ಜನ ಇಲ್ಲಿ ದೀಪಾರಾಧನೆ ಮಾಡಿದ್ದು, ಈ ಬಾರಿ ಅದಕ್ಕಿಂತಲೂ ಹೆಚ್ಚು ದೀಪವನ್ನು ಬೆಳಗಿದ್ದಾರೆ.
Dakshina Kannada,Karnataka