Last Updated:
2023ರಲ್ಲಿ ದೇವಸ್ಥಾನವಿದ್ದ ಜಾಗದಲ್ಲಿ ಭೂಮಿಪೂಜೆ ನೆರವೇರಿಸಿ ಉತ್ಖನನ ಮಾಡಿದಾಗ 15ಅಡಿಯ ಬಾವಿಯಲ್ಲಿ ಭಗ್ನವಾದ ಗೋಪಾಲಕೃಷ್ಣ ದೇವರ ಮೂರ್ತಿ ಸಿಕ್ಕಿದೆ. ಆ ಬಳಿಕದಿಂದ ದೇವಾಲಯ ನಿರ್ಮಾಣಕ್ಕೆ ವೇಗ ದೊರಕಿದೆ.
ದಕ್ಷಿಣ ಕನ್ನಡ: ನೂರಾರು ವರ್ಷಗಳ ಹಿಂದಿನ ದೇವಸ್ಥಾನ(Temple) ಕಾಲದ ಹೊಡೆತಕ್ಕೆ ಸಿಲುಕಿ ಭೂಮಿಯಡಿ ಹುದುಕಿತ್ತು. ಕಾಲಾಂತರದಲ್ಲಿ ಆ ಭೂಮಿ ಖರೀದಿಸಿದ ವ್ಯಕ್ತಿಯ ಕನಸಿನಲ್ಲಿ ಬಂದು ಪ್ರೇರಣೆ ನೀಡಿದ ಗೋಪಾಲಕೃಷ್ಣನಿಗೆ(Gopalakrishna) ನೋಡನೋಡುತ್ತಿದ್ದಂತೆ ಭವ್ಯ ದೇಗುಲ ನಿರ್ಮಾಣವಾಗಿದೆ. ಯಾವುದೀ ದೇವಸ್ಥಾನ(Temple) ಎಂಬುದಕ್ಕೆ ಈ ಸ್ಟೋರಿ ನೋಡಿ.
ಹೌದು… ನಾವೀಗ ಹೇಳ ಹೊರಟಿರುವುದು ಬೆಳ್ತಂಗಡಿಯ ತೆಕ್ಕಾರಿನ ಭಟ್ರಬೈಲ್ನಲ್ಲಿರುವ ಗೋಪಾಲಕೃಷ್ಣ ದೇವಸ್ಥಾನದ ಕಥೆ. 2011ರಲ್ಲಿ ಬೆಂಗಳೂರಿನ ಉದ್ಯಮಿ ಲಕ್ಷ್ಮಣ್ ಕೃಷಿಗೆಂದು ಭೂಮಿ ಹುಡುಕುತ್ತಿದ್ದರು. ಸಂಬಂಧಿಯೊಬ್ಬರ ಸಲಹೆಯಂತೆ ತೆಕ್ಕಾರಿನ ಪಾಳು ಭೂಮಿಯೊಂದನ್ನು ಖರೀದಿಸಿದ್ದಾರೆ. ರಾಮನವಮಿಯ ದಿನ ಜಮೀನು ಖರೀದಿಗೆ ಕ್ರಯಚೀಟಿ ಮಾಡಿದ್ದರು. ಅದೇ ದಿನ ತಡರಾತ್ರಿ 2 ಗಂಟೆ ಸುಮಾರಿಗೆ ಅಲ್ಲಿದ್ದ ಮನೆಯ ಸುತ್ತಲೂ ಶ್ವೇತವಸ್ತ್ರಧಾರಿ ವೃದ್ಧರೋರ್ವರು ಸುತ್ತಾಡುತ್ತಿದ್ದಂತೆ ಭಾಸವಾಗಿತ್ತು. ಈ ಬಗ್ಗೆ ಅಲ್ಲಿನವರನ್ನು ವಿಚಾರಿಸಿದಾಗ ಗೋಪಾಲಕೃಷ್ಣ ದೇವಸ್ಥಾನವೊಂದು ಹಾಳುಬಿದ್ದಿರುವ ಬಗ್ಗೆ ಹೇಳಿದ್ದಾರೆ.
ಇದನ್ನೂ ಓದಿ: Kolar: 20ಕ್ಕೂ ಹೆಚ್ಚು ರೈತರ ತೋಟಗಳಿಗೆ ತೆರಳಲು ರಸ್ತೆ 8 ಅಡಿ ಕಾಲುದಾರಿ!
ಬಳಿಕ ಊರವರಲ್ಲಿ ಚರ್ಚಿಸಿ ದೇವಸ್ಥಾನ ಕಟ್ಟಲು ಸಭೆ ನಡೆಸಲಾಯಿತು. ಈ ವಿಚಾರ ತಿಳಿಯುತ್ತಿದ್ದಂತೆ ಪಕ್ಕದಲ್ಲಿದ್ದ ಅನ್ಯಮತೀಯರು ದೇವಸ್ಥಾನವಿದ್ದ ಸ್ಥಳವನ್ನು ಅತಿಕ್ರಮಿಸಿ ದೇವಸ್ಥಾನದ ಅವಶೇಷ ನಾಶ ಮಾಡಿದ್ದಾರೆ. ಆದರೆ ಪ್ರಶ್ನಾಚಿಂತನೆಯಲ್ಲಿ ವಿಷ್ಣು ಸಾನಿಧ್ಯವಿದ್ದ ಉಲ್ಲೇಖ ಬಂತು. ಆದ್ದರಿಂದ ಆ ಜಮೀನನ್ನು ಅನ್ಯಮತೀಯರಿಂದ ಖರೀದಿಸಿದ ಲಕ್ಷ್ಮಣರು, ದೇವಸ್ಥಾನ ನಿರ್ಮಾಣಕ್ಕೆ ಕಾಲಾವಕಾಶ ಬೇಕೆಂದು ದೇವರಲ್ಲಿ ಪ್ರಾರ್ಥಿಸಿದ್ದರು. ದೇವಸ್ಥಾನವಿದ್ದ ಪಕ್ಕದ ಭೂಮಿಯಲ್ಲಿ ಲಕ್ಷ್ಮಣರ ವಾಣಿಜ್ಯ ಹಣ್ಣಿನ ಬೆಳೆ ಕೈತುಂಬಾ ಲಾಭ ಕೊಟ್ಟಿತು. ಹೀಗೆ 10 ವರ್ಷಗಳೇ ಉರುಳಿತು.
ಒಂದು ದಿನ ಬೆಂಗಳೂರಿನಿಂದ ಬಂದಿದ್ದ ಲಕ್ಷ್ಮಣರು ಜಮೀನಿನಲ್ಲಿದ್ದ ಮನೆಯಲ್ಲಿ ನಿದ್ರಿಸುತ್ತಿರುವಾಗ ಪಕ್ಕದಲ್ಲೇ ಮಲಗಿದ್ದ ಸ್ನೇಹಿತ ತೋಟದ ಕೆರೆಗೆ ಇಳಿದು ಮುಳುಗಿದ್ದಾರೆ. ಅವರನ್ನು ಎತ್ತಲು ಹೋದ ಲಕ್ಷ್ಮಣರಿಗೆ ಕೆರೆಯಲ್ಲಿ ವಿರಾಜಮಾನನಾಗಿ ಮಲಗಿದ್ದ ಶ್ರೀಮನ್ನಾರಾಯಣ ಗೋಚರನಾಗಿದ್ದಾನೆ. ಕನಸಿನಿಂದ ಎಚ್ಚೆತ್ತ ಲಕ್ಷ್ಮಣರು ಮರುದಿನ ಊರ ಪ್ರಮುಖರೊಂದಿಗೆ ಪ್ರಶ್ನಾಚಿಂತನೆ ಇರಿಸಿದ್ದಾರೆ. ಆಗ ದೇವಾಲಯ ಕಟ್ಟುವ ಅಭಿಪ್ರಾಯ ಬಂದಿದೆ.
2023ರಲ್ಲಿ ದೇವಸ್ಥಾನವಿದ್ದ ಜಾಗದಲ್ಲಿ ಭೂಮಿಪೂಜೆ ನೆರವೇರಿಸಿ ಉತ್ಖನನ ಮಾಡಿದಾಗ 15ಅಡಿಯ ಬಾವಿಯಲ್ಲಿ ಭಗ್ನವಾದ ಗೋಪಾಲಕೃಷ್ಣ ದೇವರ ಮೂರ್ತಿ ಸಿಕ್ಕಿದೆ. ಆ ಬಳಿಕದಿಂದ ದೇವಾಲಯ ನಿರ್ಮಾಣಕ್ಕೆ ವೇಗ ದೊರಕಿದೆ. ಒಂದೇ ವರ್ಷದಲ್ಲಿ ಸುಂದರ ದೇವಸ್ಥಾನ ನಿರ್ಮಾಣವಾಗಿ ಐದಡಿ ಎತ್ತರದ ಗೋಪಾಲಕೃಷ್ಣನ ಮೂರ್ತಿಯೂ ಪ್ರತಿಷ್ಠಾಪನೆಗೆ ಸಿದ್ದಗೊಂಡಿದೆ. ಮೇ3ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ. ಊರವರು ತಮ್ಮೂರಿಗೊಂದು ಸುಂದರ ದೇವಾಲಯ ನಿರ್ಮಾಣಗೊಂಡ ಸಂತಸದಲ್ಲಿದ್ದಾರೆ.
Dakshina Kannada,Karnataka
April 27, 2025 3:34 PM IST