Last Updated:
ದಕ್ಷಿಣ ಕನ್ನಡ: ಮಂಗಳೂರಿನ ಕೆಂಜಾರಿನಲ್ಲಿ ನಡೆದ ವಿಮಾನ ದುರಂತಕ್ಕೆ 15 ವರ್ಷ. ದ.ಕ.ಜಿಲ್ಲಾಡಳಿತ ತಣ್ಣೀರುಬಾವಿ ಸ್ಮಾರಕದ ಮುಂಭಾಗ ಶ್ರದ್ಧಾಂಜಲಿ ಸಲ್ಲಿಸಿತು.
ದಕ್ಷಿಣ ಕನ್ನಡ: ದೇಶವನ್ನೇ ಬೆಚ್ಚಿಬೀಳಿಸಿದ್ದ ಮಂಗಳೂರಿನ ಕೆಂಜಾರಿನಲ್ಲಿ ನಡೆದ ವಿಮಾನ ದುರಂತಕ್ಕೆ(Mangaluru Flight Accident) ಮೇ 22ಕ್ಕೆ 15ವರ್ಷ ತುಂಬಿತು. ಆದರೂ ಇನ್ನೂ ಅದರ ಕರಿನೆನಪು ಮಾಸಿಲ್ಲ. ಈ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾಡಳಿತ(Dakshina Kannada District Administration) ತಣ್ಣೀರುಬಾವಿ ನದಿ ಕಿನಾರೆಯಲ್ಲಿರುವ ಸ್ಮಾರಕದ ಮುಂಭಾಗ ಮಡಿದವರ ಆತ್ಮಕ್ಕೆ ಶ್ರದ್ಧಾಂಜಲಿ ಕೋರಿತು. ಸ್ಮಾರಕಕ್ಕೆ ದಕ್ಷಿಣ ಕನ್ನಡ ಪ್ರಭಾರ ಜಿಲ್ಲಾಧಿಕಾರಿ ಆನಂದ್ ಕೆ., ಮಂಗಳೂರು ಮನಪಾ ಆಯುಕ್ತ ರವಿಚಂದ್ರ ನಾಯಕ್, ಎಸಿಪಿ ಶ್ರೀಕಾಂತ್ ಕೆ., ಪಶು ವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಅರುಣ್ ಕುಮಾರ್ ಸೇರಿದಂತೆ ಹಲವಾರು ಮಂದಿ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಕೋರಿದರು. ಬಳಿಕ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
2010ರ ಮೇ 22ರಂದು ಬೆಳ್ಳಂಬೆಳಗ್ಗೆ ದುಬೈನಿಂದ IX 812 ಏರ್ ಇಂಡಿಯಾ ವಿಮಾನವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಮಿಸಿತ್ತು. ಆದರೆ ಇಳಿಯುವ ವೇಳೆ ರನ್ ವೇಯಲ್ಲಿ ವಿಮಾನವು ನಿಲ್ಲದೇ ಸೂಚನಾ ಗೋಪುರದ ಕಂಬಕ್ಕೆ ಡಿಕ್ಕಿಯಾಗಿ ಅದನ್ನು ತುಂಡರಿಸಿ ಆಳ ಪ್ರದೇಶಕ್ಕೆ ಉರುಳಿ ಈ ದುರಂತ ಸಂಭವಿಸಿತ್ತು. ವಿಮಾನದಲ್ಲಿ 166 ಪ್ರಯಾಣಿಕರಿದ್ದು, 158 ಮಂದಿ ಸಾವನ್ನಪ್ಪಿದ್ದರು. 8 ಮಂದಿ ಬದುಕುಳಿದಿದ್ದರು.
ಮೃತಪಟ್ಟ 158 ಮಂದಿಯಲ್ಲಿ 12 ಮಂದಿಯ ಮೃತದೇಹದ ಗುರುತು ಪತ್ತೆಯಾಗಿರಲಿಲ್ಲ. ಆದ್ದರಿಂದ ಗುರುತು ಪತ್ತೆಯಾಗದವರ ಮೃತದೇಹವನ್ನು ತಣ್ಣೀರುಬಾವಿಯ ನದಿತೀರದಲ್ಲಿ ದ.ಕ.ಜಿಲ್ಲಾಡಳಿತ ಅಂತ್ಯಸಂಸ್ಕಾರ ನಡೆಸಿತ್ತು. ಆ ಬಳಿಕ ಇದೇ ಸ್ಥಳದಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿತ್ತು.
Dakshina Kannada,Karnataka