ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಮೊದಲ ಸಂಸ್ಥೆ, ಸುಮಾರು ಆರು ದಶಕಗಳ ಸಮೃದ್ಧ ಶೈಕ್ಷಣಿಕ ಪರಂಪರೆಯುಳ್ಳ ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜು ಕೇವಲ ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದೆ.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿವಿಧ ಶೈಕ್ಷಣಿಕ ಸೌಲಭ್ಯವನ್ನು ಒದಗಿಸುತ್ತಾ ಬಂದಿರುವ ಈ ಸಂಸ್ಥೆಯು ಮೇಧಾ 2026 ಎಂಬ ಶೀರ್ಷಿಕೆಯೊಂದಿಗೆ ಉಚಿತ ಶಿಕ್ಷಣ ಯೋಜನೆಯನ್ನು ಪರಿಚಯಿಸಿದ್ದು, ಪರೀಕ್ಷೆಯೊಂದನ್ನು ನಡೆಸಿ ಅದರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶೇ. 100 ವಿದ್ಯಾರ್ಥಿವೇತನ ಅರ್ಥಾತ್ ಉಚಿತ ಶಿಕ್ಷಣ ದೊರೆಯಲಿದೆ.
ಕಳೆದ ಶೈಕ್ಷಣಿಕ ವರ್ಷದಿಂದ ಆರಂಭಗೊಂಡ ಈ ಯೋಜನೆಯಲ್ಲಿ, ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ನಡೆಯಲಿದ್ದು, 9 ಹಾಗೂ 10ನೇ ತರಗತಿಗೆ ಸಂಬಂಧಪಟ್ಟ ಗಣಿತ, ವಿಜ್ಞಾನ ಹಾಗೂ ಸಾಮಾನ್ಯ ಜ್ಞಾನದ ಆಧಾರದ ಮೇಲೆ 120 ನಿಮಿಷಗಳ ಪರೀಕ್ಷೆ ನಡೆಯಲಿದ್ದು, ಕಲಾ ವಿಭಾಗ, ವಿಜ್ಞಾನ ವಿಭಾಗ ಹಾಗೂ ವಾಣಿಜ್ಯ ವಿಭಾಗಗಳಿಗೆ ಸೇರಬಯಸುವ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯಬಹುದಾಗಿದೆ.
2025ರ ಡಿಸೆಂಬರ್ 7ರಂದು ದಕ್ಷಿಣ ಕನ್ನಡ, ಕಾಸರಗೋಡು, ಕೊಡಗು ಹಾಗೂ ಹಾಸನ ಜಿಲ್ಲೆಯ 8 ಕೇಂದ್ರಗಳಲ್ಲಿ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಈ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ನೋಂದಾಯಿಸಲು ಡಿಸೆಂಬರ್ 3 ಕೊನೆಯ ದಿನಾಂಕವಾಗಿದೆ.
ಪುತ್ತೂರಿನ ನೆಹರು ನಗರದ ವಿವೇಕಾನಂದ ಆವರಣದಲ್ಲಿರುವ ವಿವೇಕಾನಂದ ಪದವಿಪೂರ್ವ ಕಾಲೇಜು, ಕಡಬದ ಪಂಜ ರಸ್ತೆಯ ವಿದ್ಯಾನಗರದಲ್ಲಿರುವ ಸರಸ್ವತಿ ಪ್ರೌಢಶಾಲೆ, ವಿಟ್ಲದ ಸಾಲೆತ್ತೂರು ರಸ್ತೆಯಲ್ಲಿರುವ ಪಿ.ಎಂ. ಶ್ರೀ ಸರ್ಕಾರಿ ಪ್ರೌಢಶಾಲೆ, ಪಾಣೆಮಂಗಳೂರಿನಲ್ಲಿರುವ ಎಸ್. ಎಲ್. ಎನ್. ಪಿ. ವಿದ್ಯಾಲಯ, ಸುಳ್ಯದ ಜಾಲ್ಲೂರಿನ ವಿನೋಬನಗರದಲ್ಲಿರುವ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ, ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿರುವ ಶ್ರೀ ಭಾರತಿ ವಿದ್ಯಾಪೀಠ, ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಹಾಗೂ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿರುವ ರೋಟರಿ ಇಂಗ್ಲಿಷ್ ಸ್ಕೂಲ್ ಪರೀಕ್ಷಾ ಕೇಂದ್ರಗಳಾಗಿರಲಿವೆ.
ವರ್ಷಕ್ಕೆ 1.25 ಲಕ್ಷ ವಿದ್ಯಾರ್ಥಿವೇತನದ ಅವಕಾಶ!
ಗಣಿತ, ವಿಜ್ಞಾನ ಮಾತ್ರವಲ್ಲದೆ ಬುದ್ಧಿಮತ್ತೆ, ಸಾಮಾನ್ಯಜ್ಞಾನ ಹೊಂದಿರುವ ಗ್ರಾಮೀಣ ಭಾಗದ ಮಕ್ಕಳು ಈ ಸದಾವಕಾಶವನ್ನು ಪಡೆಯಬೇಕು ಅನ್ನೋದು ಶಿಕ್ಷಣ ಸಂಸ್ಥೆಯ ಉದ್ದೇಶವಾಗಿದ್ದು, ಈ ಪರೀಕ್ಷೆಯಲ್ಲಿ 25 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಪ್ರತಿ ವಿದ್ಯಾರ್ಥಿಗಳು ಒಂದು ವರ್ಷಕ್ಕೆ ಸುಮಾರು 1.25 ಲಕ್ಷ ರೂಪಾಯಿ ಮಿಕ್ಕಿದ ಸೌಲಭ್ಯಗಳನ್ನು ಪಡೆಯಲಿದ್ದಾರೆ. ವಿವೇಕಾನಂದ ಪಿಯು ಕಾಲೇಜಿನಲ್ಲಿ ರಾಜ್ಯದ 29 ಜಿಲ್ಲೆಗಳ ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ಪರೀಕ್ಷೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳು ಈ ನೋಂದಣಿ ಲಿಂಕ್ – www.vivekanandapuc.com/medha ನಲ್ಲಿ ನೋಂದಾಯಿಸುವ ಮೂಲಕ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
Dakshina Kannada,Karnataka
November 28, 2025 4:59 PM IST
Free Scheme: ಈ ಪರೀಕ್ಷೆ ಪಾಸಾದ್ರೆ ಸಾಕು ನಿಮ್ ಪಿಯುಸಿ ಕಲಿಕೆ ಸಂಪೂರ್ಣ ಉಚಿತ! 1.25 ಲಕ್ಷ ರೂಪಾಯಿ ಗೆಲ್ಲುವ ಅವಕಾಶ; ಈ ಎಕ್ಸಾಮ್ ಬರೆಯೋದು ಎಲ್ಲಿ?