Last Updated:
ಝೀನತ್ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಸ್ಕೂಟರ್ ಖರೀದಿ ಮಾಡಿ ಉಪ್ಪಿನಕಾಯಿ ವ್ಯಾಪಾರದಲ್ಲಿ ಯಶಸ್ಸು ಕಂಡಿದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಯು.ಟಿ. ಖಾದರ್ ಫೋಟೋ ಸ್ಕೂಟರ್ ಮೇಲೆ ಅಂಟಿಸಿದ್ದಾರೆ.
ಮಂಗಳೂರು: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ (Scheme) ಗೃಹ ಲಕ್ಷ್ಮೀ ಹಣವನ್ನು ಜನರು ನಾನಾ ರೀತಿಯಲ್ಲಿ ಸದ್ಬಳಕೆ (Use) ಮಾಡಿಕೊಳ್ಳುತ್ತಿರುವುದು ವರದಿಯಾಗುತ್ತಿವೆ. ಕೆಲವರು ಹಣ ಕೂಡಿಟ್ಟು, ಫ್ರಿಡ್ಜ್, ಮಗನಿಗೆ ಗಾಡಿ, ಫ್ಯಾನ್ಸಿ ಅಂಗಡಿ, ಗ್ರಂಥಾಲಯ ತೆರೆದ ನಾನಾ ಕಾರ್ಯಗಳು ಮುನ್ನೆಲೆಗೆ ಬಂದಿದ್ದವು.
ಈಗ ಅದೇ ರೀತಿಯಲ್ಲಿ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಸ್ಕೂಟರ್ ಖರೀದಿಸಿದ ಮಹಿಳೆ ಸುದ್ದಿಯಾಗಿದ್ದಾರೆ. ಉಪ್ಪಿನಕಾಯಿ ಮಾರಾಟ ಮಾಡಿ ಬದುಕಿನ ಪ್ರಯಾಣಕ್ಕೆ ಗೃಹ ಲಕ್ಷ್ಮಿ ಅಸರೆಯಾಗಿದೆ.
ಹೌದು, ಇವರ ಹೆಸರು ಝೀನತ್. 39ರ ಹರೆಯದ ಇವರು ಮಂಗಳೂರಿನ ಉಳ್ಳಾಲ ತಾಲೂಕಿನ ಕಲ್ಲಾಪುವಿನಲ್ಲಿರುವ ತವರುಮನೆಯಲ್ಲಿ ಅಕ್ಕನ ಜತೆ ವಾಸವಿದ್ದಾರೆ. ಪತಿಯಿಂದ ದೂರವಿರುವ ಅವರಿಗೆ ಅವಳಿ ಮಕ್ಕಳಿದ್ದು ಕನ್ನಡ ಮಾಧ್ಯಮ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಪತಿ ಕೈಕೊಟ್ಟ ಬಳಿಕ ಬದುಕು ಸಾಗಿಸುವುದು ಕಷ್ಟ ಎನಿಸಿದಾಗ ಕಂಡುಕೊಂಡ ಮಾರ್ಗ ಉಪ್ಪಿನಕಾಯಿ ಮಾರಾಟ.
ಒಂದೂವರೆ ವರ್ಷದ ಹಿಂದೆ ಅಕ್ಕ ಅನ್ಸಿರಾ ಮತ್ತು ಬಾವ ಸೋಲಾರ್ ಹನೀಫ್ ಸಹಕಾರ ಪಡೆದು ಮನೆ ಮನೆಗೆ ಹೋಗಿ ಉಪ್ಪಿನಕಾಯಿ ಮಾರಾಟ ಆರಂಭಿಸಿದರು. ನಡಿಗೆ ಮೂಲಕ ವ್ಯಾಪಾರ ಅಸಾಧ್ಯ ಎನಿಸಿದ್ದರಿಂದ ಕಳೆದೊಂದು ವರ್ಷದ ಅವಧಿಯಲ್ಲಿ ಬಂದ ಗೃಹಲಕ್ಷ್ಮಿ ಹಣ ಕೂಡಿಟ್ಟು ಎರಡು ತಿಂಗಳ ಹಿಂದೆ ಹಳೇ ಸ್ಕೂಟರ್ ಖರೀದಿಸಿದರು.
ಅದರಲ್ಲಿ ಯು.ಟಿ.ಖಾದರ್, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಲಕ್ಷ್ಮೀ ಹೆಬ್ಬಾಳ್ವರ್ ಅವರ ಫೋಟೋ ಅಂಟಿಸಿ ವ್ಯಾಪಾರ ಮುಂದುವರಿಸಿದ್ದಾರೆ. ಸ್ಕೂಟರ್ ಖರೀದಿಸಿ ವ್ಯಾಪಾರ ಮುಂದುವರಿಸಿದ್ದರಿಂದ ದಿನ ಖರ್ಚಿಗೆ ಆಗುವಷ್ಟು ಆದಾಯ ಬರುತ್ತಿದೆ. ಪ್ರತಿದಿನ 800ರಿಂದ 900 ರೂ. ವ್ಯಾಪಾರ ಆಗುತ್ತಿದ್ದು, 200 ರಿಂದ 300 ರೂ. ಲಾಭ ಪಡೆಯುತ್ತಿದ್ದಾರೆ.
ಸ್ಕೂಟರ್ ಬಂದ ನಂತರ ಝೀನತ್ ಅವರ ದಿನಚರಿ ಸಂಪೂರ್ಣವಾಗಿ ಬದಲಾಗಿದೆ. ಮನೆ ಮನೆಗೆ ತೆರಳಿ ಮಾರಾಟ ಮಾಡುವ ಸಂದರ್ಭದಲ್ಲಿ ಸಮಯ ಉಳಿತಾಯ ಆಗುತ್ತಿದೆ. ಗ್ರಾಹಕರ ಸಂಖ್ಯೆ ಹೆಚ್ಚಳವಾಗಿದೆ. ಆದಾಯದಲ್ಲಿ ಸುಧಾರಣೆ ಆಗಿದೆ. ಗೃಹಲಕ್ಷ್ಮಿ ಯೋಜನೆಯಿಂದ ಒಟ್ಟು ಸುಮಾರು 50 ಸಾವಿರ ರೂ. ಸಹಾಯ ದೊರೆತಿದ್ದು, ಅದರಿಂದ ಜೀವನ ಸ್ವಲ್ಪ ಮಟ್ಟಿಗೆ ನೆಮ್ಮದಿಯಾಗಿದೆ ಎನ್ನುವುದು ಝೀನತ್ ಅವರ ಮಾತು.
ಸ್ಕೂಟಿ ಮೇಲೆ ಯು ಟಿ ಖಾದರ್ ಫೋಟೋ
Dakshina Kannada,Karnataka
Jan 20, 2026 12:40 PM IST