Last Updated:
ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ ಪುತ್ತೂರಿನ ಗ್ರಾಮಜನ್ಯ ಜೇನು ಉತ್ಪಾದನೆಯನ್ನು ಶ್ಲಾಘಿಸಿದರು.
ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕೃಷಿಕರ ಉತ್ಪಾದಕಾ ಸಂಸ್ಥೆಯೊಂದು ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದೆ. ಪುತ್ತೂರಿನ (Puttur) ಕೆಲವು ಕೃಷಿಕರು ಹುಟ್ಟುಹಾಕಿದ ಗ್ರಾಮಜನ್ಯ (Gramajanya) ಎನ್ನುವ ಜೇನು ಉತ್ಪಾದಕಾ ಸಂಸ್ಥೆಯ ಬಗ್ಗೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು (PM Modi) ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೆಲವು ಪ್ರಗತಿಪರ ಕೃಷಿಕರು 2020 ರಲ್ಲಿ ಪ್ರಾರಂಭಿಸಿದ ಗ್ರಾಮಜನ್ಯ ಎನ್ನುವ ಕೃಷಿಕರ ಸಂಸ್ಥೆ ಕೃಷಿಕರ ಉತ್ಪನ್ನಗಳನ್ನು ಬ್ರ್ಯಾಂಡಿಂಗ್ ಮೂಲಕ ಮಾರುಕಟ್ಟೆಗೆ ಪರಿಚಯಿಸುವ ಕಾರ್ಯವನ್ನು ಮಾಡುತ್ತಿದೆ. ಆರಂಭದಲ್ಲಿ ದೇಶದಲ್ಲಿ ಹೆಚ್ಚು ಬೇಡಿಕೆಯಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ಪತ್ತಿಯಾಗುವ ಜೇನನ್ನು ಜೇನು ಕೃಷಿಕರಿಂದ ಸಂಗ್ರಹಿಸಿ, ಇನ್ನೊಂದೆಡೆ ಕೃಷಿಕರ ತೋಟದಲ್ಲಿ ಬಾಡಿಗೆ ರೂಪದಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಜೇನು ಉತ್ಪಾದಿಸಲು ಆರಂಭಿಸಿದ್ದ ಗ್ರಾಮಜನ್ಯ ಸಂಸ್ಥೆ ಬಳಿಕದ ದಿನಗಳಲ್ಲಿ ಕೃಷಿಕರು ಉತ್ಪಾದಿಸಿದ ಜೇನಿಗೆ ಗ್ರಾಮಜನ್ಯದ ಬ್ರ್ಯಾಂಡ್ ನೀಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಆರಂಭಿಸಿತ್ತು.
ಅಲ್ಲದೇ ಜೇನಿನ ಮೇಣದಿಂದ ತಯಾರಿಸಿದ ಹಲವು ಉತ್ಪನ್ನಗಳನ್ನು ಕೂಡ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಜೇನು ಮತ್ತು ಅದರ ಎಲ್ಲಾ ಉಪ ಉತ್ಪನ್ನಗಳಿಗೂ ಉತ್ತಮ ಮಾರುಕಟ್ಟೆ ದೊರಕಬೇಕೆಂದು ಉದ್ದೇಶಿಸಿ ಆರಂಭಗೊಂಡ ಈ ಸಂಸ್ಥೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ದೇಶದೆಲ್ಲೆಡೆ ಇಂತಹ ರೈತ ಉತ್ಪಾದಕ ಸಂಸ್ಥೆಗಳು ಹೆಚ್ಚು ಬೆಳೆಯಬೇಕು ಎಂದು ಅವರು ಆಶಿಸಿದ್ದಾರೆ. ಪ್ರಧಾನಿ ಮೋದಿ ಪುತ್ತೂರಿನ ಗ್ರಾಮಜನ್ಯದ ಬಗ್ಗೆ ತಮ್ಮ ಕಾರ್ಯಕ್ರಮದಲ್ಲಿ ಉಲ್ಲೇಖಿಸಿರುವ ಬಗ್ಗೆ ಕೃಷಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಗುರುತಿಸುವಿಕೆ ಜೇನು ಕೃಷಿಕರಲ್ಲಿ ಮತ್ತಷ್ಟು ಜೇನು ಬೆಳೆಯಲು ಉತ್ತೆಜನ ನೀಡಲಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.
Dakshina Kannada,Karnataka
December 03, 2025 11:24 AM IST