Last Updated:
ಭಾರತ ಮೊದಲ ಇನ್ನಿಂಗ್ಸ್ನಲ್ಲಿ 587 ರನ್ ಗಳಿಸಿ ಎರಡನೇ ಇನ್ನಿಂಗ್ಸ್ ಅನ್ನು 6 ವಿಕೆಟ್ಗಳಿಗೆ 427 ರನ್ಗಳಿಗೆ ಡಿಕ್ಲೇರ್ ಮಾಡಿತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 407 ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್ನಲ್ಲಿ 271 ರನ್ಗಳಿಗೆ ಪತನಗೊಂಡು ಸೋಲು ಕಂಡಿತು.
ಎಡ್ಜ್ಬಾಸ್ಟನ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ (England) ತಂಡವನ್ನು ಸೋಲಿಸುವ ಮೂಲಕ ಟೀಮ್ ಇಂಡಿಯಾ ಇತಿಹಾಸ ನಿರ್ಮಿಸಿದೆ. 58 ವರ್ಷಗಳ ಇತಿಹಾಸದಲ್ಲಿ ಎಡ್ಜ್ಬಾಸ್ಟನ್ನಲ್ಲಿ ಭಾರತಕ್ಕೆ (India) ಸಿಕ್ಕ ಮೊದಲ ಟೆಸ್ಟ್ ಗೆಲುವು ಇದಾಗಿದೆ. ಶುಭ್ಮನ್ ಗಿಲ್ (Shuman Gill) ನಾಯಕತ್ವದ ಭಾರತ ತಂಡವು ಸರಣಿಯ ಎರಡನೇ ಟೆಸ್ಟ್ ಪಂದ್ಯದ ಕೊನೆಯ ದಿನದಂದು ಇಂಗ್ಲೆಂಡ್ ತಂಡವನ್ನು 336 ರನ್ಗಳಿಂದ ಸೋಲಿಸಿತು. ಇದರೊಂದಿಗೆ ಭಾರತ 5 ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತು. ಭಾರತದ ಈ ಗೆಲುವಿನಲ್ಲಿ, ಗಿಲ್, ಜಡೇಜಾ, ಜೈಸ್ವಾಲ್, ಪಂತ್ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್ನಲ್ಲಿ ಅದ್ಭುತ ಸಾಧನೆ ಮಾಡಿದರೆ, ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ಬೌಲಿಂಗ್ನಲ್ಲಿ ಮಿಂಚಿದರು. ಆಕಾಶ್ ದೀಪ್ ಎರಡನೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಮತ್ತು ಮೊದಲ ಇನ್ನಿಂಗ್ಸ್ನಲ್ಲಿ 4 ವಿಕೆಟ್ಗಳು ಸೇರಿದಂತೆ ಒಟ್ಟು 10 ವಿಕೆಟ್ಗಳನ್ನು ಕಬಳಿಸುವ ಮೂಲಕ ಗೆಲುವಿನ ಹೀರೋ ಆದರು.
ಭಾರತ ಮೊದಲ ಇನ್ನಿಂಗ್ಸ್ನಲ್ಲಿ 587 ರನ್ ಗಳಿಸಿ ಎರಡನೇ ಇನ್ನಿಂಗ್ಸ್ ಅನ್ನು 6 ವಿಕೆಟ್ಗಳಿಗೆ 427 ರನ್ಗಳಿಗೆ ಡಿಕ್ಲೇರ್ ಮಾಡಿತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 407 ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್ನಲ್ಲಿ 271 ರನ್ಗಳಿಗೆ ಪತನಗೊಂಡು ಸೋಲು ಕಂಡಿತು.
ಭಾರತ ಇಂಗ್ಲೆಂಡ್ಗೆ 608 ರನ್ಗಳ ಕಠಿಣ ಗುರಿಯನ್ನು ನೀಡಿತ್ತು. ಈ ಭಾರೀ ಮೊತ್ತವನ್ನ ಬೆನ್ನಟ್ಟಿದ ಆತಿಥೇಯ ತಂಡ 271 ರನ್ಗಳಿಗೆ ಕುಸಿಯಿತು. ವಿಕೆಟ್ ಕೀಪರ್ ಜೇಮೀ ಸ್ಮಿತ್ ಇಂಗ್ಲೆಂಡ್ ಪರ ಅತಿ ಗರಿಷ್ಠ 88 ರನ್ ಗಳಿಸಿದರು. ಈ ಪಂದ್ಯಕ್ಕೂ ಮುಂಚೆ ಭಾರತ ಈ ಹಿಂದೆ ಇಲ್ಲಿ 8 ಟೆಸ್ಟ್ ಪಂದ್ಯಗಳನ್ನು ಆಡಿತ್ತು, ಅದರಲ್ಲಿ 7 ಸೋಲು ಮತ್ತು ಒಂದು ಟೆಸ್ಟ್ ಡ್ರಾ ಆಗಿತ್ತು. ಈ ಮೈದಾನದಲ್ಲಿ ಭಾರತದ ಮೊದಲ ಟೆಸ್ಟ್ ಗೆಲುವು ಇದಾಗಿದೆ. ಭಾರತ 1967 ರಲ್ಲಿ ಇಲ್ಲಿ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಿತು. ಆ ನಂತರ ಎಡ್ಜ್ಬಾಸ್ಟನ್ನಲ್ಲಿ ಎಂದಿಗೂ ಗೆದ್ದಿರಲಿಲ್ಲ.
ಮಧ್ಯಮ ವೇಗಿ ಆಕಾಶ್ ದೀಪ್ ಅವರು ಎಡ್ಜ್ಬಾಸ್ಟನ್ನಲ್ಲಿ ಹೊಸ ಚೆಂಡಿನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಲಾರ್ಡ್ಸ್ ಟೆಸ್ಟ್ಗೆ ತಮ್ಮ ಸ್ಥಾನವನ್ನು ದೃಢಪಡಿಸಿದ್ದಾರೆ. ಈ ಪಂದ್ಯಕ್ಕೂ ಮುನ್ನ ಆಕಾಶ್ ದೀಪ್ ಹೆಸರೇ ಕೇಳಿಬಂದಿರಲಿಲ್ಲ. ಮೊದಲ ಪಂದ್ಯದಲ್ಲಿ ಭಾರತ ಕಳಪೆ ಬೌಲಿಂಗ್ ಮೂಲಕ ಸೋಲು ಕಂಡಿತ್ತು. ಅಲ್ಲದೆ 2ನೇ ಟೆಸ್ಟ್ನಲ್ಲಿ ಭಾರತ ಬುಮ್ರಾರನ್ನ ಆಡಿಸುವುದಿಲ್ಲ ಎನ್ನುವುದು ಖಾತ್ರಿಯಾಗುತ್ತಿದ್ದಂತೆ ಕ್ರಿಕೆಟ್ ವಿಶ್ಲೇಷಕರು, ಅವರ ಸ್ಥಾನಕ್ಕೆ ಎಡಗೈ ವೇಗಿ ಅರ್ಶದೀಪ್ ಸಿಂಗ್, ಎಡಗೈ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನ ಆಡಿಸಬೇಕು ಎಂದು ಸಲಹೆ ನೀಡಿದ್ದರು. ಸುನಿಲ್ ಗವಾಸ್ಕರ್, ಮೈಕಲ್ ಕ್ಲಾರ್ಕ್, ರವಿಶಾಸ್ತ್ರಿ, ಆ್ಯರೋನ್ ಫಿಂಚ್ ಸೇರಿ ಹಲವಾರು ಮಾಜಿ ಕ್ರಿಕೆಟಿಗರು ಇದೇ ಸಲಹೆ ನೀಡಿದ್ದರು.
ಯಾರೊಬ್ಬ ಭಾರತದ ಮಾಜಿ ಕ್ರಿಕೆಟಿಗರಾಗಲೇ, ವಿಶ್ಲೇಷಕರಾಗಲಿ ಆಕಾಶ್ ದೀಪ್ ಹೆಸರನ್ನ ಮಾತ್ರ ಸೂಚಿಸಿರಲಿಲ್ಲ. ಅವರನ್ನ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಭಾವಿಸಿದ್ದರು. ಆದರೆ ಗಂಭೀರ್ ಲೆಕ್ಕಾಚಾರವೇ ಬೇರೆ. 2ನೇ ಟೆಸ್ಟ್ನಲ್ಲಿ ಆಕಾಶ್ ದೀಪ್ಗೆ ಅವಕಾಶ ಮಾಡಿಕೊಟ್ಟು ಕ್ರಿಕೆಟ್ ವಿಶ್ಲೇಷಕರ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದರು. ಆಕಾಶ್ ದೀಪ್ ಕೂಡ ತಮ್ಮ ಆಯ್ಕೆಯನ್ನ ಸಮರ್ಥಿಸಿಕೊಂಡರು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ಆರಂಭಿಸುತ್ತಿದ್ದಂತೆ ಇನ್ನಿಂಗ್ಸ್ನ ತಮ್ಮ 2ನೇ ಓವರ್ನಲ್ಲೇ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದ ಒಲ್ಲಿ ಪೋಪ್ ಹಾಗೂ ಬೆನ್ ಡಕೆಟ್ರನ್ನ ಸತತ ಎರಡು ಎಸೆತಗಳಲ್ಲಿ ಪೆವಿಲಿಯನ್ಗಟ್ಟಿದರು. ಈ ಮೂಲಕ ತಮ್ಮ ಆಯ್ಕೆಯನ್ನ ಪ್ರಶ್ನಿಸಿದವರಿಗೆ ತಿರುಗೇಟು ಕೊಟ್ಟಿದ್ದರು.
ಆ ಇನ್ನಿಂಗ್ಸ್ನಲ್ಲಿ 158 ರನ್ಗಳಿಸಿ 303 ರನ್ಗಳ ಜೊತೆಯಾಟದಲ್ಲಿ ಪಾಲ್ಗೊಂಡಿದ್ದ ಹ್ಯಾರಿ ಬ್ರೂಕ್ರನ್ನ ಕೂಡ ಆಕಾಶ್ ಪೆವಿಲಿಯನ್ಗಟ್ಟಿ ಭಾರತಕ್ಕೆ ಹೀರೋ ಆಗಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ ಸಿರಾಜ್ ಜೊತೆಗೂಡಿ ಉತ್ತಮ ಬೌಲಿಂಗ್ ಮಾಡಿದ್ದ ಆಕಾಶ್ 4 ವಿಕೆಟ್ ಪಡೆದಿದ್ದರು. ಇದೀಗ 2ನೇ ಇನ್ನಿಂಗ್ಸ್ನಲ್ಲೂ 6 ವಿಕೆಟ್ ಪಡೆದು ಈ ಪಂದ್ಯದಲ್ಲಿ 10 ವಿಕೆಟ್ ಪಡೆದು ಮಿಂಚಿದರು. 2ನೇ ಇನ್ನಿಂಗ್ಸ್ನಲ್ಲಿ ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಜೇಮಿ ಸ್ಮಿತ್ ಅಂತಹ ಘಟಾನುಘಟಿಗಳನ್ನೇ ಪೆವಿಲಿಯನ್ ಸೇರಿಸಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು. ಈ ಪ್ರದರ್ಶನದ ಮೂಲಕ ಈ ಪ್ರವಾಸದಲ್ಲಿ ಭಾರತಕ್ಕೆ ಕಾಡುತ್ತಿದ್ದ 3ನೇ ವೇಗಿ ಸ್ಥಾನವನ್ನ ತುಂಬಿದ್ದಾರೆ. ಮುಂದಿನ ಪಂದ್ಯದಲ್ಲಿ ಬುಮ್ರಾ ವಾಪಸ್ ಆದರೂ 3ನೇ ಸ್ಪೆಷಲಿಸ್ಟ್ ಪೇಸರ್ ಆಗಿ ಖಂಡಿತ ಅವಕಾಶ ಪಡೆಯಲಿದ್ದಾರೆ.
July 06, 2025 10:54 PM IST