Last Updated:
ಕೊರಿನ್ ರಸ್ಕಿನಾ ಅವರ ವೈಟ್ಡೌಸ್ ಸಂಸ್ಥೆ ಸಾವಿರಾರು ನಿರ್ಗತಿಕರಿಗೆ ಆಶ್ರಯ ನೀಡಿದ್ದು, ಸಮಾಜಸೇವೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. 479 ಮಂದಿಗೆ ಹೊಸ ಜೀವನ ನೀಡಲಾಗಿದೆ.
ಮಂಗಳೂರು: ಇವರು ನಿರ್ಗತಿಕರ ಪಾಲಿನ ಮಹಾಮಾತೆ. ಬೀದಿಗೆ ಬಿದ್ದಿದ್ದ ಅದೆಷ್ಟೋ ಮಂದಿ ಮಾನಸಿಕ ಅಸ್ವಸ್ಥರನ್ನು (Mentally Challenged) ತಮ್ಮ ವೈಟ್ಡೌಸ್ ಸಂಸ್ಥೆಗೆ ಕರೆತಂದು ಆರೈಕೆ ಮಾಡಿ ಸ್ವಸ್ಥರಾದ ಬಳಿಕ ಅವರ ಕುಟುಂಬದೊಂದಿಗೆ (Family) ಸೇರಿಸಿ ಕೃತಾರ್ಥರಾದವರು. ಇವರು ಮಾಡಿರುವ ಈ ನಿಸ್ವಾರ್ಥ ಸೇವೆಗೆ ಇದೀಗ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Award) ಒಲಿದು ಬಂದಿದೆ.
ವೈಟ್ಡೌಸ್ ಸಂಸ್ಥೆಯ ಸಂಸ್ಥಾಪಕಿ ಕೊರಿನ್ ರಸ್ಕಿನಾ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ಬೇಕೆಂದು ಅರ್ಜಿ ಸಲ್ಲಿಸದೆ, ಸರಕಾರವೇ ಇವರ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿದೆ.
ಮಂಗಳೂರಿನ ಕೊರಿನಾ ರಸ್ಕಿನ್ ಅವರು 1963 ರಲ್ಲಿ ಜನಿಸಿದ್ದು, ಹುಟ್ಟಿನಿಂದ ಇಂದಿನವರೆಗೂ ಬಗೆಬಗೆಯ ಕಷ್ಟದಲ್ಲಿಯೇ ಬದುಕು ಸಾಗಿಸಿ ಬಂದವರು. ಇವರಿಗೆ ಮಕ್ಕಳಾಗಿಲ್ಲ ಎಂಬ ಚಿಂತೆಯ ನಡುವೆ ಬಹಳ ತಡವಾಗಿ ಮಗುವಿನ ಜನನವಾಗಿತ್ತು. ಆ ಬಳಿಕ ಆ ನೆನಪಿನಲ್ಲಿ ಸಮಾಜಕ್ಕೆ ಏನಾದರೂ ಸೇವೆ ಮಾಡಬೇಕು ಎಂಬ ನೆಲೆಯಲ್ಲಿ ಅವರು ಸಮಾಜ ಸೇವೆಯನ್ನು ಮಾಡಲಾರಂಭಿಸಿದರು.
ಕೊರಿನಾ ರಸ್ಕಿನ್ ಅವರು ಆರಂಭದಲ್ಲಿ ಬಡವರಿಗೆ ಸಹಾಯ ಮಾಡುವುದು, ಮನೆ ಕಟ್ಟಲು ಸಹಕಾರ ನೀಡುವುದು, ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುವುದು ಮೊದಲಾದ ಕಾರ್ಯ ಮಾಡುತ್ತಿದ್ದರು. ಆದರೆ 1993 ರಿಂದ ಬೀದಿ ಬದಿಯಲ್ಲಿದ್ದ ನಿರ್ಗತಿಕರನ್ನು, ಮಾನಸಿಕ ಅಸ್ವಸ್ಥರನ್ನು ಗುಣಪಡಿಸಿ, ಆರೈಕೆ ಮಾಡುವ ಸೇವೆಯನ್ನು ಆರಂಭಿಸಿದರು.
ಈ ರೀತಿ ಅವರು ಗುಣಪಡಿಸಿದ ಮಾನಸಿಕ ಅಸ್ವಸ್ಥರನ್ನು ಅವರ ಮನೆಯವರೊಂದಿಗೆ ಸೇರಿಸಿದ್ದಾರೆ. ಇವರು ಈಗಾಗಲೇ ಸಾವಿರಾರು ನಿರ್ಗತಿಕರನ್ನು ರಕ್ಷಿಸಿದ್ದಾರೆ. ಈಗಾಗಲೇ 479 ಮಂದಿಯನ್ನು ಮನೆಯವರೊಂದಿಗೆ ಸೇರಿಸಿದ್ದಾರೆ. ಇನ್ನು ಇವರ ವೈಟ್ ಡೌಸ್ ಸಂಸ್ಥೆಯಲ್ಲಿ 200 ರಷ್ಟು ನಿರ್ಗತಿಕರು ಚಿಕಿತ್ಸೆ, ಆರೈಕೆ ಪಡೆಯುತ್ತಿದ್ದಾರೆ. ಇವರಿಗೆ ವಸತಿ, ಚಿಕಿತ್ಸೆ, ಬಟ್ಟೆ ಬರೆಗಳನ್ನು ನೀಡುವುದು ಮಾತ್ರವಲ್ಲದೆ, ಪ್ರತಿದಿನ ಬೀದಿಯಲ್ಲಿರುವ ನಿರ್ಗತಿಕರಿಗೆ ಊಟದ ವ್ಯವಸ್ಥೆಯನ್ನು ಮಾಡುತ್ತಾರೆ. ಹಲವು ಎನ್ ಜಿ ಒ ಗಳು ರಸ್ಕಿನಾ ಅವರಿಗೆ ನೆರವು ನೀಡುತ್ತಿದೆ.
ಮಣಿಪುರಿ ವಿದ್ಯಾರ್ಥಿಗಳೂ ಇಲ್ಲಿದ್ದಾರೆ.
ವೈಟ್ಡೌಸ್ ಸಂಸ್ಥೆ ಈವರೆಗೆ ಸಾವಿರಾರು ಮಂದಿ ನಿರ್ಗತಿಕರಿಗೆ, ಮಾನಸಿಕ ಅಸ್ವಸ್ಥರಿಗೆ ಆಶ್ರಯ ನೀಡಿದೆ. ಅವರಲ್ಲಿ 479 ಮಂದಿ ಕೊರಿನ್ ರಸ್ಕಿನಾ ಅವರ ಆರೈಕೆ, ಶುಶ್ರೂಷೆಯಿಂದ ಗುಣಮುಖರಾಗಿ ಮತ್ತೆ ತಮ್ಮ ಮನೆ ಸೇರಿದ್ದಾರೆ. ಈಗಲೂ ವೈಟ್ಡೌಸ್ ಸಂಸ್ಥೆಯಲ್ಲಿ 140ಕ್ಕೂ ಅಧಿಕ ಮಂದಿ ನಿರ್ಗತಿಕರು, ವಿದ್ಯಾಭ್ಯಾಸಕ್ಕೆಂದು ಮಂಗಳೂರಿಗೆ ಬಂದಿರುವ 50ರಷ್ಟು ಮಣಿಪುರಿ ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ. ಕೊರಿನ್ ರಸ್ಕಿನಾರಿಗೆ ಅರ್ಹವಾಗಿ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದ್ದು, ಇವರ ಸಮಾಜಸೇವೆ ಇನ್ನಷ್ಟು ಮಂದಿಗೆ ಸ್ಪೂರ್ತಿ ಆಗಲಿ ಎಂಬುದೇ ನಮ್ಮ ಆಶಯ.
Dakshina Kannada,Karnataka
November 02, 2025 4:33 PM IST